7th Pay Commission: ʼ7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಮುಹೂರ್ತ ಫಿಕ್ಸ್ʼ
ಮಂಡ್ಯ, ಮೇ 31: ರಾಜ್ಯದ ಸರ್ಕಾರಿ ನೌಕರರಿಗೆ ಲೋಕಸಭಾ ಚುನಾವಣೆಯ ನಂತರ ಸಿಗಲಿದೆ ಏಳನೇ ವೇತನ ಆಯೋಗದ ಕುರಿತು ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಏಳನೇ ವೇತನ ಆಯೋಗವನ್ನು ಜುಲೈ ಅಂತ್ಯದೊಳಗೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಹಿಂದಿನಿಂದಲೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಾ ಬಂದಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿಕ್ಷಕರಿಗೆ ಶೀಘ್ರ ಒಪಿಎಸ್, ಎನ್ಪಿಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇವುಗಳ ಜಾರಿಗೆ ಕೆಲವು ಕಾನೂನಾತ್ಮಕ ಚರ್ಚೆಗಳಾಗಬೇಕಿದೆ. ಶೀಘ್ರದಲ್ಲೇ ಜಾರಿಗೊಳಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಕೇವಲ ಸುಶಿಕ್ಷಿತ ಮಹಿಳೆಯರ ಮೇಲೆ ಮಾತ್ರವಲ್ಲದೆ ಪುರುಷರ ಮೇಲೂ ಪರಿಣಾಮ ಬೀರುತ್ತದೆ. ಅಂತಹ ನೀಚ ಕೃತ್ಯವನ್ನು ಯಾರು ತಾನೇ ಒಪ್ಪಿಕೊಳ್ಳುವುದಕ್ಕೆ ಸಾಧ್ಯ. ಆ ಪ್ರಕರಣದ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ. ಅದಕ್ಕಾಗಿ ನಾವು ಆ ವಿಷಯ ಮಾತನಾಡುವುದನ್ನೇ ನಿಲ್ಲಿಸಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರು ಜೆಡಿಎಸ್- ಬಿಜೆಪಿ ಮೈತ್ರಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಗೆಲ್ಲಿಸುವುದರೊಂದಿಗೆ ಎರಡೂ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಇದು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಪುನರಾವರ್ತನೆಯಾಗಲಿದೆ ಎಂದು ಭವಿಷ್ಯ ನುಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಪ್ರತಿನಿಽಸಿ ಗೆದ್ದಿರುವ ಮರಿತಿಬ್ಬೇಗೌಡರು ಸಮರ್ಥರಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸದನದಲ್ಲಿ ದನಿ ಎತ್ತಿ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್-ಬಿಜೆಪಿ ಅಭ್ಯರ್ಥಿ ಉದ್ಯಮಿಯಾಗಿದ್ದು, ಅವರಿಗೆ ಶಿಕ್ಷಕರ ಸಂಪರ್ಕವೇ ಇಲ್ಲ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವೂ ಇಲ್ಲ. ಹೀಗಾಗಿ ಶಿಕ್ಷಿತರು ಮರಿತಿಬ್ಬೇಗೌಡರನ್ನು ಬೆಂಬಲಿಸುವುದರಿಂದ ಗೆಲುವು ನಿಶ್ಚಿತ ಎಂದು ಖಚಿತವಾಗಿ ಹೇಳಿದರು.
ಪ್ರಜ್ವಲ್ ಪೆನ್ಡ್ರೈವ್ ಕುರಿತು ನಾನು ಮಾಡುವುದಿಲ್ಲ ಎಂದಿದ್ದೇನೆ. ಏಕೆಂದರೆ ವಾಟ್ಸಾಪ್ನಲ್ಲಿ ಜೈ ಜೆಡಿಎಸ್, ಜೈ ಕುಮಾರಣ್ಣ, ಜೈ ರೇವಣ್ಣ, ಜೈ ಪ್ರಜ್ವಲ್ ಅಂತಾರೆ. ಇದನ್ನು ನೋಡಿದಾಗ ಏನನ್ನು ಹೇಳೋದು. ಇದು ನಿಜಕ್ಕೂ ಸಮಾಜ ತಲೆ ತಗ್ಗಿಸುವ ಸಂಗತಿ. ಈ ಪ್ರಕರಣದಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಜೆಡಿಎಸ್ನವರು ಮಾತಾಡುತ್ತಾರೆ. ಕಾನೂನು ಬದ್ಧವಾಗಿ ಏನು ಆಗುತ್ತೋ ನೋಡೋಣ. ನ್ಯಾಯಾಲಯಕ್ಕೆ ಎಲ್ಲರೂ ಸಹ ತಲೆಬಾಗಲೇಬೇಕಾಗುತ್ತದೆ. ನಮ್ಮ ಸರ್ಕಾರದಿಂದ ಪಕ್ಷಪಾತವಿಲ್ಲದೆ ತನಿಖೆ ಮಾಡುತ್ತಿದೆ. ಎಸ್ಐಟಿ ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿಯನ್ನು ನೀಡಲಿದೆ. ನ್ಯಾಯಾಲಯ ಮುಂದೆ ಎಲ್ಲವೂ ಇದೆ ಎಂದು ಸೂಚ್ಯವಾಗಿ ಹೇಳಿದರು.
ಇನ್ನೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾರ ಮೇಲೂ ನಂಬಿಕೆಯೇ ಇಲ್ಲ. ಮೋದಿ ಅವರನ್ನೇ ಹಿಯಾಳಿಸಿ ಬೈದಿದ್ದಾರೆ. ಆರ್ಎಸ್ಎಸ್, ಬಿಜೆಪಿ-ಕಾಂಗ್ರೆಸ್ ಎಲ್ಲರಿಗೂ ಬೈದಿದ್ದಾರೆ. ಕುಮಾರಸ್ವಾಮಿ ಅನುಮಾನ ಪಡದ ವ್ಯಕ್ತಿ ಇಲ್ಲವೇ ಇಲ್ಲ. ಪೆನ್ಡ್ರೈವ್ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಮಾತಾಡಬಾರದು ಎಂದು ತೀರ್ಮಾನ ಮಾಡಿದ್ದೇವೆ. ಇದು ಚರ್ಚೆ ಮಾಡುವ ವಿಚಾರವಲ್ಲ. ಕಾನೂನು ಬದ್ಧವಾಗಿ ಕ್ರಮವಾಗಬೇಕು. ಇಷ್ಟೊತ್ತಿಗೆ ಕುಮಾರಸ್ವಾಮಿ ಕುಟುಂಬ ಎಸ್ಐಟಿ ಮುಂದೆ ಪ್ರಜ್ವಲ್ನನ್ನು ತಂದು ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಮಾತಾಡೋದು ಅಲ್ಲ ಎಂದು ಹೇಳಿದರು.












Click it and Unblock the Notifications