ಕುದುರೆಗಳಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್!
ಬಣಕಲ್, ನವೆಂಬರ್ 07: ಹಾಸನ ಕಡೆಯಿಂದ ಕುದುರೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಚಾರ್ಮಾಡಿ ಘಾಟ್ನಲ್ಲಿ ಬಿಡಲು ಬಂದಿದ್ದೇ ಬಂದಿದ್ದು, ಪುಕ್ಕಟ್ಟೆ ಕುದುರೆ ಸಿಗುತ್ತೆ ಎಂದು ತಿಳಿದ ಸ್ಥಳೀಯರು ಹೋಂಸ್ಟೇ ಮಾಲೀಕರು ಕುದುರೆಗಳನ್ನು ಮನೆಗೆ ಸಾಕಲು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಇದರಿಂದ ಸೋಮವಾರ ಸಂಜೆ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹಾಸನ ಮೂಲದ ರೈತರು ಹಾಸನದಲ್ಲಿ ಬೆಳೆನಾಶ ಮಾಡುತ್ತಿದ್ದ 50 ಕ್ಕೂ ಹೆಚ್ಚು ಪುಂಡ ಕುದುರೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಣಕಲ್ ಬಳಿ ಕುದುರೆಗಳನ್ನು ಇಳಿಸಲು ಪ್ರಯತ್ನಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಪುಂಡ ಕುದುರೆಗಳನ್ನು ಇಳಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಅಲ್ಲಿಂದ ಮುಂದೆ ಚಾರ್ಮಾಡಿ ಘಾಟ್ನ ಆಲೇಖಾನ್ ಜಲಪಾತದ ಬಳಿ ಕುದುರೆಗಳನ್ನು ಇಳಿಸಲು ಮುಂದಾದರು. ಜಲಪಾತದ ಬಳಿ ಲಾರಿ ನಿಲ್ಲಿಸಿ ರಸ್ತೆಯತ್ತ ನೋಡಿದ ಲಾರಿ ಡ್ರೈವರ್ ಗೆ ಅಚ್ಚರಿಯುಂಟಾಯಿತು. ಸುಮಾರು ಜನ ಕುದುರೆ ಕೊಳ್ಳಲು ಕಾತುರದಿಂದ ಕಾದಿರುವ ದೃಶ್ಯ ಕಂಡು ಬಂದಿತು.

ರೆಸಾರ್ಟ್ಗಳಲ್ಲಿ ಕುದುರೆಗಳಿಗೆ ಭಾರಿ ಬೇಡಿಕೆ
ಬಣಕಲ್ ಸುತ್ತಮುತ್ತಲ್ಲಾ ಗ್ರಾಮಸ್ಥರು ಬಣಕಲ್ನಿಂದ ಚಾರ್ಮಾಡಿ ಘಾಟ್ವರೆಗೂ ಲಾರಿಯನ್ನು ಹಿಂಬಾಲಿಸಿ ಹೊರಟಿದ್ದು, ಆಲೇಖಾನ್ ಜಲಪಾತದ ಬಳಿ ಕುದುರೆಗಳನ್ನು ಲಾರಿಯಿಂದ ಇಳಿಸುವ ಮುನ್ನವೆ ಜನರು ಲಾರಿಯ ಮೇಲೇರಿ ನಾ ಮುಂದು ತಾ ಮುಂದು ಎಂದು ಕುದುರೆಗಳನ್ನು ಹಗ್ಗಗಳಿಂದ ಕಟ್ಟಿ ಇಳಿಸಲು ಮುಂದಾದರು.

ಬಣಕಲ್ ಪೋಲಿಸರು ಸ್ಥಳಕ್ಕೆ ಆಗಮಿಸಿದರು
ಬಣಕಲ್ ಪೋಲಿಸರು ಸ್ಥಳಕ್ಕೆ ಆಗಮಿಸಿ ಕುದುರೆಗಳನ್ನು ಇಳಿಸಲು ಅವಕಾಶ ಕೊಡಲಿಲ್ಲ. ಹಗ್ಗ ಕಟ್ಟಿ ಕುದುರೆಯನ್ನು ಕೊಂಡೊಯ್ಯಲು ಸಿದ್ದರಾಗಿದ್ದ ಜನರನ್ನು ಪೋಲಿಸರು ಚದುರಿಸಿದರು. ಚಾರ್ಮಾಡಿ ಘಾಟ್ನಲ್ಲಿ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬಣಕಲ್ನಿಂದ ಕುದುರೆ ಕೊಂಡೊಯ್ಯಲು ವಾಹನ ಮಾಡಿಕೊಂಡು ಬಂದಿದ್ದು ಕೆಲವರಿಗೆ ಕುದುರೆ ಸಿಗದೆ ಇರುವುದು ನಿರಾಸೆ ಉಂಟು ಮಾಡಿತು.

ಜೋಳದ ಹೊಲಗಳಿಗೆ ನುಗ್ಗಿ ಹಾನಿ
ಕುದುರೆಯನ್ನು ಲಾರಿಯಲ್ಲಿ ತಂದ ರೈತರೊಬ್ಬರು ನಮ್ಮಪ್ರತಿನಿಧಿ ಜತೆ ಮಾತನಾಡಿ ಹಾಸನ ಭಾಗದಲ್ಲಿ ಪುಂಡುಕುದುರೆಗಳ ಹಾವಳಿ ಮಿತಿಮೀರಿದ್ದು ಜೋಳದ ಹೊಲಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ಕುದುರೆಗಳನ್ನು ಬೇರೆಡೆಗೆ ತಂದು ಬಿಡುತ್ತಿದ್ದೇವೆ ಎಂದು ತಿಳಿಸಿದರು.
ಪೋಲಿಸರು ಕುದುರೆಗಳನ್ನು ಇಳಿಸಲು ಅವಕಾಶ ಕೊಡದಿರುವುದರಿಂದ ಕುದುರೆ ತುಂಬಿದ ಲಾರಿ ಮಂಗಳೂರು ಕಡೆಗೆ ಸಾಗಿತು. ಲಾರಿಯ ಹಿಂದೆ ಹತ್ತಾರು ವಾಹನಗಳು ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಮಲೆನಾಡು ಭಾಗದಲ್ಲಿ ಬೇಡಿಕೆ
ಮಲೆನಾಡು ಭಾಗದಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಸಾಕಲು ಕುದುರೆಗಳಿಗೆ ಬಾರಿ ಬೇಡಿಕೆ ಇದ್ದು ಸಾವಿರಾರು ಬೆಲೆ ಕೊಟ್ಟು ಕುದುರೆ ಖರೀದಿಸುವುದರಿಂದ ಸ್ಥಳೀಯರು ಪುಕಟ್ಟೆ ಸಿಗುವ ಕುದುರೆಗೆ ಮುಗಿಬಿದ್ದಿದ್ದು ಕುದುರೆ ಸಿಗದೆ ಕೆಲವರು ನಿರಾಸೆಯಿಂದ ಹಿಂದಿರುಗುವಂತಾಯಿತು.
ಪೋಲಿಸರು ಕುದುರೆಗಳನ್ನು ಇಳಿಸಲು ಅವಕಾಶ ಕೊಡದಿರುವುದರಿಂದ ಕುದುರೆ ತುಂಬಿದ ಲಾರಿ ಮಂಗಳೂರು ಕಡೆಗೆ ಸಾಗಿತು. ಲಾರಿಯ ಹಿಂದೆ ಹತ್ತಾರು ವಾಹನಗಳು ಹೋಗುತ್ತಿದ್ದ ದೃಶ್ಯ ಕಂಡು ಬಂತು.












Click it and Unblock the Notifications