Channapatna By-Election: "ನಿಖಿಲ್ ಅಭಿಮನ್ಯು ಅಲ್ಲ, ಅರ್ಜುನ ಆಗ್ತಾನೆ ನೋಡ್ತಿರಿ"
ಕರ್ನಾಟಕದ ಮೂರು ವಿಧಾನಸಭೆಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಚನ್ನಪಟ್ಟಣದ ಉಪ ಚುನಾವಣೆ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಬಾರಿ ಚುನಾವಣೆಯಲ್ಲಿ ನಿಂತು ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ. ಈ ಬಾರಿ ಹೇಗಾದರೂ ಗೆಲ್ಲಬೇಕು ಎಂದು ಅವರು ತಂತ್ರ ರೂಪಿಸುತ್ತಿದ್ದಾರೆ. ಇನ್ನು ಕೇಂದ್ರ ಸಚಿವ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸಹ ಪಣತೊಟ್ಟಿದ್ದಾರೆ.
ಈ ಬಾರಿ ಯಾವುದೇ ಕುತಂತ್ರ ಕೆಲಸ ಮಾಡುವುದಿಲ್ಲ. ಯಾರು ಏನೇ ಕುತಂತ್ರ ಮಾಡಿಕೊಳ್ಳಲಿ ಈ ಬಾರಿ ಜನ ನಿಖಿಲ್ ಕುಮಾರಸ್ವಾಮಿ ಕೈಹಿಡಿಯಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಕಳೆದ ಎರಡು ಬಾರಿಯೂ ನಿಖಿಲ್ ಕುಮಾರಸ್ವಾಮಿ ಅವರನ್ನು ವಿರೋಧಿಗಳು ತಮ್ಮ ಕುತಂತ್ರದಿಂದಲೇ ನಿಖಿಲ್ ಅವರ ಸೋಲಿಗೆ ಕಾರಣರಾಗಿದ್ದರು. ಆ ರೀತಿಯ ತಪ್ಪುಗಳಿಗೆ ಈ ಬಾರಿ ಅವಕಾಶ ಇಲ್ಲ. ಚನ್ನಪಟ್ಟಣದಲ್ಲಿ ಜನ ನಿಖಿಲ್ ಕುಮಾರಸ್ವಾಮಿ ಅವರನ್ನು ಇಲ್ಲಿನ ಜನ ಅಭಿಮನ್ಯು ಆಗುವುದಕ್ಕೆ ಅವಕಾಶ ನೀಡುವುದಿಲ್ಲ. ಇಲ್ಲಿನ ಜನ ಅವರಿಗೆ ಅರ್ಜುನನ ಪಾತ್ರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜನ ದೇಶದ ಗಮನವನ್ನು ಸೆಳೆಯುತ್ತಿದ್ದಾರೆ. ಇನ್ನು ಕೇತ್ರದಲ್ಲಿ ವಿರೋಧಿಗಳು ಯಾವ ರೀತಿ ಹೇಳಿಕೆಗಳು ಕೊಡುತ್ತಿದ್ದಾರೆ ಎನ್ನುವುದನ್ನು ನಾನು ಗಮನಿಸಿದ್ದೀನಿ. ವಿರೋಧಿಗಳಿಗೆ ಜನರೇ ಉತ್ತರಿಸಲಿದ್ದಾರೆ. ಕಾಂಗ್ರೆಸ್ ನಾಯಕರಿಂದ ನನ್ನ ಮಗನನ್ನು ಮುಗಿಸುವ ಕುತಂತ್ರ ನಡೆದಿದೆ.
ಆದರೆ, ಈ ಬಾರಿ ಅದು ಫಲ ಕೊಡುವುದಿಲ್ಲ. ಈ ಬಾರಿ ಕುತಂತ್ರ ಮಾಡುವುದು ಸಾಧ್ಯವಿಲ್ಲ ಎನ್ನುವುದನ್ನು ತೋರಿಸಲಿದ್ದಾರೆ. ವಿರೋಧಿಗಳ (ಕಾಂಗ್ರೆಸ್) ಅಂತ್ಯ ಚನ್ನಪಟ್ಟಣ ಕ್ಷೇತ್ರದಿಂದಲೇ ಶುರುವಾಗಲಿದೆ ಎಂದು ಎಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆ: ನಿಖಿಲ್ ಕುಮಾರಸ್ವಾಮಿ ಅವರು ಎಚ್.ಡಿ ದೇವೇಗೌಡ ಅವರ ಮೊಮ್ಮಗ. ಕುಮಾರಸ್ವಾಮಿ ಅವರ ಮಗ. ಕುಟುಂಬ ರಾಜಕೀಯದ ಹಿನ್ನೆಲೆಯಿಂದಲೇ ಬಂದವರು ನಿಖಿಲ್. ಆದರೆ, ಕಳೆದ ಎರಡೂ ಬಾರಿಯೂ ಅವರಿಗೆ ಅದೃಷ್ಟ ಕೈಕೊಟ್ಟಿದೆ.
ಎರಡು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದಾರೆ. ಇದೀಗ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಿಖಿಲ್ ಗೆಲುವಿಗಾಗಿ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಗಿದ್ದಾರೆ. ಒಕ್ಕಲಿಗ ನಾಯಕರು ಕುಮಾರಸ್ವಾಮಿಗೆ ಸಾಥ್ ನೀಡಿದ್ದಾರೆ. ಕಳೆದ ಎರಡು ಬಾರಿ ಸೋತಿರುವ ಸಿಂಪತಿಯೂ ನಿಖಿಲ್ ಪರವಾಗಿ ಇದೆ.
ಈ ಹಿಂದೆ 2019ರಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿ ಸ್ಪರ್ಧೆ ಮಾಡಿದ್ದರು. ಆಗ ಸುಮಲತಾ ಅಂಬರೀಷ್ ಅವರು ನಿಖಿಲ್ ವಿರುದ್ಧ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ನಿಖಿಲ್ಗೆ ಸೋಲಾಗಿತ್ತು.
ಇನ್ನು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆಗ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಚನ್ನಪಟ್ಟಣದಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಸಿ.ಪಿ ಯೋಗೇಶ್ವರ್ ಅವರ ವಿರುದ್ಧ ಮೂರನೇ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.












Click it and Unblock the Notifications