'ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಸಿದ್ದರಾಮಯ್ಯನವರಿಗೆ ನಿವೃತ್ತಿ ಕ್ಷೇಮವಲ್ಲವೇ'
ಬೆಂಗಳೂರು, ಡಿ 10: ಇತ್ತೀಚಿನ ದಿನಗಳಲ್ಲಿ ಅನಾವಶ್ಯಕವಾಗಿ ಚರ್ಚೆಯಾಗುತ್ತಿರುವ ವಿಚಾರಗಳಲ್ಲಿ ಒಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು. ಅನಾವಶ್ಯಕ ಯಾಕೆಂದರೆ, ಸಿದ್ದರಾಮಯ್ಯನವರೇ ಹೈಕಮಾಂಡ್ ಹೇಳಿದ್ದಲ್ಲಿ ಸ್ಪರ್ಧಿಸುವುದಾಗಿ ಹಲವು ಬಾರಿ ಹೇಳಿದ್ದಾಗಿದೆ.
ಆದರೂ, ಯಾಕೆ ಈ ವಿಚಾರ ಪ್ರತೀ ಬಾರಿ ಮುನ್ನಲೆಗೆ ಬರುತ್ತಿದೆ? ಈ ವಿಚಾರದ ಸುತ್ತ ಚರ್ಚೆಯಾಗುತ್ತಿರಲಿ ಎಂದು ಕಾಂಗ್ರೆಸ್ಸಿನವರೇ ಹೊಸಹೊಸ ವಿಚಾರವನ್ನು ತೇಲಿ ಬಿಡುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.
ಬಾದಾಮಿಯಲ್ಲಿ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ವೇದಿಕೆಯಲ್ಲೇ ಸಿದ್ದರಾಮಯ್ಯನವರಿಗೆ ಮುಜುಗುರ ಉಂಟಾಗಿತ್ತು. ಅವರಿಗಾಗಿ ಕಳೆದ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಿಮ್ಮನಕಟ್ಟಿ, ಮತ್ತೆ ಅಲ್ಲಿಂದ ಸ್ಪರ್ಧಿಸುವುದಕ್ಕೆ ಬಹಿರಂಗವಾಗಿಯೇ ವಿರೋಧ ಪಡಿಸಿದ್ದರು.
ಈ ವಿಚಾರದಲ್ಲಿ ಸಿದ್ದರಾಮಯ್ಯನವರು ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒತ್ತಾಯಗಳು ಕೇಳಿ ಬರುತ್ತಿದೆ ಎಂದಿದ್ದರು. ವಿರೋಧ ಪಕ್ಷದ ನಾಯಕರ ಈ ಹೇಳಿಕೆಗೆ ಕರ್ನಾಟಕ ಬಿಜೆಪಿಯ ಐಟಿ ಘಟಕ ಅವರನ್ನು ಲೇವಡಿ ಮಾಡಿ ಟ್ವೀಟ್ ಮಾಡಿದೆ.

ಕ್ಷೇತ್ರ ಬಿಟ್ಟುಕೊಡಲು ಮುಂದೆ ಬಂದ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ
ಸಿದ್ದರಾಮಯ್ಯನವರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಹಲವರು ಈಗಾಗಲೇ ಮುಂದೆ ಬಂದಿರುವುದು ಗೊತ್ತಿರುವ ವಿಚಾರ. ಈ ಪಟ್ಟಿಗೆ ಈಗ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಈಗ ಸೇರಿಕೊಂಡಿದ್ದಾರೆ. "ದೊಡ್ಡ ನಾಯಕರೊಬ್ಬರು ನನ್ನ ಕ್ಷೇತ್ರಕ್ಕೆ ಬಂದರೆ ಅದು ಸೌಭಾಗ್ಯವೇ ಸರಿ. ಹೀಗಾಗಿ ಸಿದ್ದರಾಮಯ್ಯನವರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ನಾನು ಕ್ಷೇತ್ರ ಬಿಟ್ಟುಕೊಡುತ್ತೇನೆ. ಇದರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ದಿ ಆಗುತ್ತದೆ ಅಲ್ಲವೇ " ಎಂದು ಶೆಟ್ರು ಉದಾರತೆಯನ್ನು ತೋರಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಸೂಚಿಸುವುದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ
"ನಾನೀಗ ಬಾದಾಮಿ ಕ್ಷೇತ್ರದ ಶಾಸಕ, ಹಲವು ಕ್ಷೇತ್ರಗಳ ಜನರು ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಸೂಚಿಸುವುದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ಐದಾರು ಕಡೆಯಿಂದ ಸ್ಪರ್ಧಿಸುವಂತೆ ಆಹ್ವಾನಗಳು ಬಂದಿವೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಸಿದ್ದರಾಮಯ್ಯನವರ ಈ ಹೇಳಿಕೆಗೆ ಬಿಜೆಪಿ ಲೇವಡಿ ಮಾಡುತ್ತಾ, ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಸಿದ್ದರಾಮಯ್ಯನವರಿಗೆ ನಿವೃತ್ತಿ ಕ್ಷೇಮವಲ್ಲವೇ ಎಂದು ಬಿಜೆಪಿ ಐಟಿ ಘಟಕ ಪ್ರಶ್ನಿಸಿದೆ.
|
ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ @siddaramaiah ಅವರೇ
"ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುವ @siddaramaiah ಅವರೇ, ಗೆಲ್ಲುವುದಕ್ಕಾಗಿ ನಿಮಗೊಂದು ಗಟ್ಟಿ ಕ್ಷೇತ್ರವೇ ಇಲ್ಲ. ಈ ರೀತಿ ಕ್ಷೇತ್ರದಿಂದ ಕ್ಷೇತ್ರಕ್ಕೆ ವಲಸೆ ಹೋಗುವ ಬದಲು ರಾಜಕೀಯ ನಿವೃತ್ತಿ ಕ್ಷೇಮವಲ್ಲವೇ? ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು. ಸಿದ್ದರಾಮಯ್ಯನವರೇ, ಮತ್ತೊಮ್ಮೆ ಮುಖ್ಯಮಂತ್ರಿ ಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೆ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರಬೇಕು" ಎಂದು ಬಿಜೆಪಿ, ವಿರೋಧ ಪಕ್ಷದ ನಾಯಕರ ಕಾಲೆಳೆದಿದೆ.

ಬಿಜೆಪಿಯವರು ಮೊದಲು ಇದನ್ನು ನೋಡಿಕೊಳ್ಳಲಿ, ಆಮೇಲೆ ಸಿದ್ದರಾಮಯ್ಯನವರ ವಿಚಾರ
"ಗುತ್ತಿಗೆದಾರರು 18% GST ಕೊಡಬೇಕು. ಅವರ ಲಾಭ 20% ಹೋಗಬೇಕು, ಎಲ್ಲವೂ ಸೇರಿ 78% ಆಗುತ್ತದೆ. ಇನ್ನು ಕೆಲಸಕ್ಕೆ ಉಳಿಯುವ ಹಣ ಕೇವಲ 22% ಮಾತ್ರ! ಇಂತಹ ಸರ್ಕಾರ ಹಿಂದೆಂದಾದರೂ ಬಂದಿತ್ತಾ? ಸರ್ಕಾರಕ್ಕೆ 40% ಕಮಿಷನ್ ಕೊಡಬೇಕೆಂದು ಗುತ್ತಿಗೆದಾರರ ಸಂಘವೇ ಲಿಖಿತವಾಗಿ ಪ್ರಧಾನಿಗಳಿಗೆ ದೂರು ನೀಡಿದೆ. 'ನಾ ಖಾವುಂಗಾ, ನಾ ಖಾನೆದುಂಗಾ' ಎಂದು ಹೇಳುವ ಪ್ರಧಾನಿ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೊಟ್ಟಿರುವ ದೂರಿನ ಅನ್ವಯ ಏನು ಕ್ರಮ ಕೈಗೊಂಡಿದ್ದಾರೆ? ಮೋದಿಯವರು ಹೇಳುವುದೆಲ್ಲಾ ಕೇವಲ ಬಾಯಿ ಮಾತಿಗೆ ಮಾತ್ರವೇ? ಮಾಧ್ಯಮಗಳು ಸತ್ಯ ಏನು ಎಂದು ಜನರಿಗೆ ಹೇಳಬೇಕು. ಬಿಜೆಪಿಯವರು ಮೊದಲು ಇದನ್ನು ನೋಡಿಕೊಳ್ಳಲಿ, ಆಮೇಲೆ ಸಿದ್ದರಾಮಯ್ಯನವರ ವಿಚಾರದ ಬಗ್ಗೆ ಮಾತನಾಡಲಿ"ಎಂದು ಕೆಪಿಸಿಸಿ ಪ್ರತಿಕ್ರಿಯೆ ನೀಡಿದೆ.











Click it and Unblock the Notifications