ತನ್ನ ಹೆಂಡತಿ ವಿಚಾರದಲ್ಲಿ ಎಚ್ ಡಿ ರೇವಣ್ಣ ಹಠ ಮಾಡಬಾರದು
ಚಿಕ್ಕಮಗಳೂರು, ಜೂ 3: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಸಚಿವ ಎ ಮಂಜು ನಡುವಿನ ಕಿತ್ತಾಟ ಮತ್ತೆ ಮುಂದುವರಿದಿದೆ. ತನ್ನ ಹೆಂಡತಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ರೇವಣ್ಣ ಹಠ ಸಾಧಿಸಬಾರದೆಂದು ಮಂಜು ಹೇಳಿದ್ದಾರೆ.
ಶುಕ್ರವಾರ (ಜೂ 3) ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಿದ್ದ ಮಂಜು, ರೇವಣ್ಣ ಅವರು ಹಠ ಮಾಡುತ್ತಾ, ರಾಜಕೀಯ ಮಾಡುವುದನ್ನು ಬಿಟ್ಟು ಹಾಸನ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಲಿ ಎಂದು ಸಲಹೆ ನೀಡಿದ್ದಾರೆ. (ರೇವಣ್ಣ, ನಿಮ್ದೂ ನಿಮ್ಮ ಪತ್ನಿದ್ದು ಟೈಮ್ ಸರಿಯಿಲ್ಲಾ ಬಿಡಿ)
ಹನ್ನೆರಡು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಿಗಲಿಲ್ಲ. ರೋಟೇಷನ್ ಪದ್ದತಿಯಲ್ಲಿ ಇದು ಬದಲಾಗಿದೆ ಎನ್ನುವ ಅರಿವು ರೇವಣ್ಣ ಅವರಿಗೆ ಇರದೇ ಇರುವುದು ಹಾಸ್ಯಾಸ್ಪದ ಎಂದು ಮಂಜು ಲೇವಡಿ ಮಾಡಿದ್ದಾರೆ.

ಕಳೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದ ರೇವಣ್ಣ ಅವರ ಪತ್ನಿ, ಭವಾನಿ ರೇವಣ್ಣ ಹಾಸನ ಜಿಲ್ಲಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಬದಲಾದ ಮೀಸಲಾತಿ ಪಟ್ಟಿಯಿಂದಾಗಿ, ಇದು ಎಸ್ ಸಿ/ಎಸ್ ಟಿ ಪಂಗಡದ ಪಾಲಾಗಿತ್ತು.
ಇದರಿಂದ ತೀವ್ರ ಆಕ್ರೋಶಗೊಂಡಿದ್ದ ರೇವಣ್ಣ, ಇದಕ್ಕೆಲ್ಲಾ ಸಚಿವ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಎ ಮಂಜು ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದ್ದರು. (ಮೀಸಲಾತಿ ಆಟ, ಭವಾನಿ ಕೈತಪ್ಪಿದ ಅಧ್ಯಕ್ಷ ಸ್ಥಾನ)
ಮುಖ್ಯ ಕಾರ್ಯದರ್ಶಿಯವರು ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿ ತಿದ್ದುಪಡಿಯನ್ನು ಮಾಡಿದ್ದಾರೆ. ಆದರೂ ಸಚಿವ ಮಂಜು ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಮುಖ್ಯ ಕಾರ್ಯದರ್ಶಿಯವರು ತಿದ್ದುಪಡಿ ಮಾಡಲಿಲ್ಲ ಎಂದಾದರೆ ರಾಜೀನಾಮೆ ನೀಡುತ್ತೇನೆಂದು ರೇವಣ್ಣ, ಮಂಜುಗೆ ಸವಾಲೆಸೆದಿದ್ದಾರೆ.
ಇದಕ್ಕೆ ಉತ್ತರಿಸುತ್ತಿದ್ದ ಮಂಜು, ರೇವಣ್ಣ ರಾಜೀನಾಮೆ ನೀಡುವುದಾದರೆ ನೀಡಲಿ. 1995ರ ಅಧಿಕಾರ ವಿಕೇಂದ್ರೀಕರಣದಂತೆ ಈ ಬದಲಾವಣೆ ಮಾಡಲಾಗಿದೆ.
ಪತ್ನಿಗೆ ಅಧಿಕಾರ ಸಿಗಲೇಬೇಕೆಂದು ರೇವಣ್ಣ ಈ ರೀತಿ ಹಠ ಸಾಧಿಸುತ್ತಿರುವುದು ಸರಿಯಲ್ಲ ಎಂದು ಮಂಜು ತಿರುಗೇಟು ನೀಡಿದ್ದಾರೆ.












Click it and Unblock the Notifications