ನೀವು ಸಿಎಂ ಆದ್ರೆ ಕಷ್ಟ ಇದೆ: ಡಿ ಕೆ ಶಿವಕುಮಾರ್ ಗೆ ಸುದೀಪ್ ಆಪ್ತನ ಕೌಂಟರ್
ಬೆಂಗಳೂರು,ಮಾರ್ಚ್ 05: ಕಲಾವಿದರ ನಟ್ಟು ಬೋಲ್ಟ್ ಎಲ್ಲಿ ಟೈಟ್ ಮಾಡೋದು ಅಂತ ನಂಗೆ ಗೊತ್ತು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇನ್ನೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು, ಸಿಸಿಎಲ್ ಆಡಿ ಸಿನಿಮೋತ್ಸವಕ್ಕೆ ಬರದವರ ಬಗ್ಗೆಯೂ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋವನ್ನ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್ ಅವರು, ರಾಜಕಾರಣಿಗಳು ಹಿಟ್ಲರ್ ನೀತಿ ತೋರಬಾರದು. ಕನ್ನಡಾಭಿವೃದ್ಧಿ ಕಾರ್ಯಕ್ರಮ ಏನು ಮಾಡ್ತಿದೆ ಹೇಳಿ. ಚಿತ್ರರಂಗವನ್ನು ನಾಶ ಮಾಡೋಕೆ ಆಗಲ್ಲ. ಚಿತ್ರೋದ್ಯಮದವರಿಗೆ ಬಯ್ಯೋದು ಕೆಲಸ ಆಗಿದೆ. ಸಾಧು ಕೋಕಿಲ ಕೊಟ್ಟ ತಪ್ಪು ಮಾಹಿತಿಗೆ ಈ ರೀತಿ ಆಗಿರೋದು. ನೀವು ಇನ್ನೂ ಉಪಮುಖ್ಯಮಂತ್ರಿ. ಸಿಎಂ ಮಾಡಿದರೆ ರಾಜ್ಯಕ್ಕೆ ಕಷ್ಟ ಆಗುತ್ತದೆ. ಓರ್ವ ಹಿಟ್ಲರ್ನ ತಂದು ಕೂರಿಸಬಾರದು. ಈ ವರ್ತನೆ ಬಿಟ್ಟರೆ ದೊಡ್ಡ ನಾಯಕರಾಗ್ತೀರಾ. ಪುಡಿ ರೌಡಿ ತರ ಮಾತನಾಡೋದು ಬಿಟ್ಟುಬಿಡಿ. ನಿಮ್ಮ ಸಾಧುಕೋಕಿಲ ತಪ್ಪು ಮಾಡಿದಾರೆ. ಅದನ್ನು ಮೊದಲು ಸರಿ ಮಾಡಿ ಎಂದು ನಟ ಸುದೀಪ್ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಅವರು ಸವಾಲು ಹಾಕಿದ್ದಾರೆ.

ಸಿನಿಮೋತ್ಸವಕ್ಕೆ ಸುದೀಪ್, ಯಶ್ಗೆ ಆಹ್ವಾನ ಕೊಟ್ಟಿದ್ದೀರಾ? ಇಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತದೆ. ದುಡ್ಡು ಹೊಡೆಯೋ ಕಾರ್ಯಕ್ರಮ ಇದು. ಯಾರೇ ಅಧಿಕಾರದಲ್ಲಿ ಇದ್ದರೂ ಹಿಟ್ಲರ್ ಆಗೋಕೆ ಆಗಲ್ಲ. ಸಾಧು ಕೋಕಿಲ ಅವರು ರಾಜಕಾರಣಿನಾ ಅಥವಾ ಸಿನಿಮಾದವರಾ ಎಂಬುದು ಗೊತ್ತಾಗಿಲ್ಲ. ಪಕ್ಷದ ಕಾರ್ಯಕ್ರಮಕ್ಕೆ ಚಿತ್ರರಂಗದವರು ಬಂದಿಲ್ಲ ಎಂಬುದನ್ನು ಅಧಿಕಾರಕ್ಕೆ ಬಂದ ಬಳಿಕ ಸೇಡು ತೀರಿಸಿಕೊಳ್ಳೋದು ತಪ್ಪು. ಎಲ್ಲಾ ಪಕ್ಷದವರೂ ನೂರು ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ನಟರು ಹೊಗಬೇಕು ಎಂಬ ಕಾನೂನು ಇದೆಯಾ? ಸಾಧು ಕೋಕಿಲ ಅವರಿಗೆ ನಿಮ್ಮ ಪಕ್ಷದ ಬಗ್ಗೆ ಒಲವು ಇತ್ತು. ಅವರು ಬಂದರು. ನಿಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬಂದಿಲ್ಲ ಎಂಬ ಕಾರಣಕ್ಕೆ ಚಿತ್ರರಂಗದವರು ಕನ್ನಡ ವಿರೋಧಿಗಳಾ ಎಂದ ಚಕ್ರವರ್ತಿ ಚಂದ್ರಚೂಡ್ ಅವರು ಪ್ರಶ್ನಿಸಿದರು.
ನಟ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದೀರಿ. 2004ರಿಂದ ಈವರೆಗೆ ಅವರು ಅವಾರ್ಡ್ ತೆಗೆದುಕೊಂಡಿಲ್ಲ. ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಈ ಮೊದಲು ಅವಾರ್ಡ್ಗೆ ಕೊಡುತ್ತೇವೆ ಎಂದು ಕೊಟ್ಟಿಲ್ಲ. ರಾಜ್ಯ ಪ್ರಶಸ್ತಿ ಎಂದರೆ ಅಸಹ್ಯವಾಗಿ ಹೋಗಿದೆ. ಅವಾರ್ಡ್ ನಿರಾಕರಿಸೋದಕ್ಕೆ ಅವರದ್ದೇ ಆದ ಕಾರಣ ಇರುತ್ತದೆ ಎಂದು ನಟ ಸುದೀಪ್ ಪರ ಚಕ್ರವರ್ತಿ ಚಂದ್ರಚೂಡ್ ಅವರು ಬ್ಯಾಟ್ ಬೀಸಿದ್ದಾರೆ.
ಎಲ್ಲರೂ ಚಿತ್ರರಂಗದವರನ್ನು ಬಯ್ಯುತ್ತಿದ್ದಾರೆ. ರವಿ ಗಣಿಗ ಚಿತ್ರರಂಗದ ಕಲಾವಿದರ ಬಗ್ಗೆ, ಚೇಂಬರ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ರವಿಕುಮಾರ್ ನೇರವಾಗಿ ಹೆಸರು ತೆಗೆದುಕೊಂಡು ಮಾತನಾಡಬೇಕಿತ್ತು. ಆಗ ಅವರ ಮಾತಿಗೆ ತೂಕ ಬರುತ್ತಿತ್ತು. ಈ ಹೀರೋಗಳನ್ನು ಬ್ಯಾನ್ ಮಾಡಬೇಕು ಎಂದು ಅವರು ಹೇಳಿದ್ದಾರೆ. ಶಾಸಕರಾಗಿ ಈ ಹೇಳಿಕೆ ನೀಡಬಾರದು. ಹಿಟ್ಲರ್ ರೀತಿ ಆಡಬಾರದು. ರವಿಕುಮಾರ್ ಕ್ಷಮೆ ಕೇಳಬೇಕು ಎಂದು ಚಕ್ರವರ್ತಿ ಚಂದ್ರಚೂಡ್ ಆಗ್ರಹಿಸಿದ್ದಾರೆ.












Click it and Unblock the Notifications