ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರದಿಂದ ಟಾಸ್ಕ್ಫೋರ್ಸ್
Recommended Video

ಬೆಂಗಳೂರು, ಜನವರಿ 30: ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ತಿಳಿಸಲಾಗಿದೆ.
ಶಿವಮೊಗ್ಗ,ಉತ್ತರ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಮಂಗನ ಕಾಯಿಲೆ ವಿಪರೀತವಾಗಿದೆ. ಇದಕ್ಕಾಗಿ ಕಾರ್ಯಪಡೆ ರಚಿಸಲಾಗಿದೆ. ಆರೋಗ್ಯ, ಕಂದಾಯ, ಅರಣ್ಯ, ಪಶುಸಂಗೋಪನೆ ಹಾಗೂ ಪಂಚಾಯತ್ರಾಜ್ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಪೋರ್ಸ್ ರಚಿಸುವಂತೆ ಸೂಚನೆ ನೀಡಿದೆ.
ಮಂಗಗಳ ಸಾವು ಕಂಡು ಬಂದ ತಕ್ಷಣವೇ ಅವು ಸತ್ತು ಬಿದ್ದ ಸ್ಥಳದಿಂದ 5 ಮೀಟರ್ವ್ಯಾಪ್ತಿಯಲ್ಲಿ ಮಲಾಥಿಯೋನ್ ರಾಸಾಯನಿಕ ಸಿಂಪಡಿಸಬೇಕು, ಸಾರ್ವಜನಿಕರ ಆರೋಗ್ಯ ಸಂಸ್ಥೆಗಳ ಮೂಲಕ ಡಿಎಂಪಿ ತೈಲ ಖರೀದಿಸಲು ಸೂಕ್ತ ಕ್ರಮಕೈಗೊಳ್ಳಬೇಕು, ಮಂಗನಕಾಯಿಲೆ ಲಸಿಕೆ ಮತ್ತು ಔಷಧಗಳು ಸಕಾಲದಲ್ಲಿ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ಜಿಲ್ಲಾಧಿಕಾರಿಗಳು ಈ ಟಾಸ್ಕ್ ಪೋರ್ಸ್ ನ ಮುಖ್ಯಸ್ಥರಾಗಿದ್ದು, ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಮತ್ತು ಗ್ರಾ.ಪಂ. ಮಟ್ಟದಲ್ಲಿ ಪಿಡಿಒಗಳು ಇದರ ಉಸ್ತುವಾರಿ ವಹಿಸಿ ಮಂಗನ ಕಾಯಿಲೆ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ಉಲ್ಬಣಗೊಳ್ಳುತ್ತಿರುವ ರೋಗ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಮಾಡಲು ಮತ್ತು ಮಂಗನಕಾಯಿಲೆ ಲಕ್ಷಣ ಮತ್ತು ಚಿಹ್ನೆಗಳ ಬಗ್ಗೆ ನಿಗಾ ವಹಿಸಲು ಕಣ್ಗಾವಲು ಚಟುವಟಿಕೆಯನ್ನು ತೀವ್ರಗೊಳಿಸಬೇಕು.
ಇದಕ್ಕಾಗಿ ಮಾನವನ ಕಣ್ಗಾವಲು, ಆಶಾಕಾರ್ಯಕರ್ತರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನೆರವಾಗಬೇಕೆಂದು ಸಲಹೆ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಮಂಗಗಳ ಸಾವು ಮತ್ತು ಅವುಗಳಿಂದ ಹರಡುತ್ತಿರುವ ರೋಗದ ಬಗ್ಗೆ ತೀವ್ರ ನಿಗಾ ವಹಿಸಬೇಕು.
ಅರಣ್ಯ ಇಲಾಖೆ ಸಹ ಇದನ್ನು ಪತ್ತೆಹಚ್ಚಲು ಸಹಕರಿಸಬೇಕೆಂದು ಸೂಚಿಸಿದೆ. ಶಿವಮೊಗ್ಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಜನರಿಗೆ ಡಿಎಂಪಿ ತೈಲ ನೀಡುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಮತ್ತು ಮಾಹಿತಿ ಒದಗಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications