ವಿಧಾನ ಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆ: ಎಸ್.ಎಲ್. ಧರ್ಮೇಗೌಡ ನಿಧನದಿಂದ ತೆರುವಾಗಿದ್ದ ಸ್ಥಾನ!
ಬೆಂಗಳೂರು, ಫೆ. 18: ವಿಧಾನ ಪರಿಷತ್ ಜೆಡಿಎಸ್ ಸದಸ್ಯರಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕವನ್ನು ಘೊಷಣೆ ಮಾಡಿದೆ. ಕಳೆದ ಡಿಸೆಂಬರ್ 28, 2020ರಂದು ಜೆಡಿಎಸ್ ಸದಸ್ಯರಾಗಿದ್ದ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಸ್ಥಾನಕ್ಕೆ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.
ಬರುವ ಮಾರ್ಚ್ 15 ರಂದು ಚುನಾವಣೆ ನಡೆಯಲಿದ್ದು, ಇದೇ ಫೆ. 25 ರಂದು ಅಧಿಸೂಚನೆ ಜಾರಿಯಾಗಲಿದೆ. ಮಾರ್ಚ್ 4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಾರ್ಚ್ 5 ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಾಸ್ ಪಡೆಯಲು ಮಾರ್ಚ್ 8 ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಬಳಿಕ ಅಂದು 5ಗಂಟೆಗೆ ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ನಿಟ್ಟಿನಲ್ಲಿ ಪರಿಷತ್ ಕಲಾಪದಲ್ಲಿ ಹೈಡ್ರಾಮಾ ನಡೆದಿತ್ತು. ಅದೇ ಸಂದರ್ಭದಲ್ಲಿ ಉಪ ಸಭಾಪತಿಗಳಾಗಿದ್ದ ಎಸ್.ಎಲ್. ಧೆರ್ಮೇಗೌಡ ಅವರನ್ನು ಬಲವಂತವಾಗಿ ಸ್ಪೀಕರ್ ಸ್ಥಾನದಲ್ಲಿ ಸದಸ್ಯರು ಕೂಡಿಸಿದ್ದರು. ಬಳಿಕ ಮತ್ತೊಂದು ಪಕ್ಷದ ಸದಸ್ಯರು ಅವರನ್ನು ಬಲವಂತವಾಗಿ ಸಭಾಪತಿಗಳ ಪೀಠದಿಂದ ಎಳೆದು ಹಾಕಿದ್ದರು.

ಇದೇ ವಿಚಾರವಾಗಿ ಮನನೊಂದಿದ್ದ ಎಸ್.ಎಲ್. ಧರ್ಮೇಗೌಡ ಅವರು, ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸಲಾಗಿದ್ದು, ಸಮಿತಿ ಮಧ್ಯಂತರ ವರದಿಯನ್ನು ಕೊಟ್ಟಿದೆ. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊಡಲು ಡೆತ್ ನೋಟ್ ಬರೆದಿದ್ದು, ಪರಿಷತ್ನಲ್ಲಿ ನಡೆದ ಗಲಾಟೆಯೆ ತಮ್ಮ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎಂದು ಬರೆದಿದ್ದಾರೆ ಎನ್ನಲಾಗಿದೆ.












Click it and Unblock the Notifications