ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿಗೆ ಸಿದ್ದರಾಮಯ್ಯ ಬುದ್ಧಿವಾದ
ಬೆಂಗಳೂರು, ಮಾರ್ಚ್ 27: ಚಿತ್ರವಿಚಿತ್ರ ತಿರುವು ಪಡೆಯುತ್ತಿರುವ ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿ ಪ್ರಕರಣ, ಶನಿವಾರದಂದು ಹೊಸರೂಪ ತಾಳುವ ಸಾಧ್ಯತೆಯಿದೆ.
ವಿಶೇಷ ತನಿಖಾ ದಳ (ಎಸ್ಐಟಿ) ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಅನುಮಾನವನ್ನು ಹೊರಹಾಕಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯುವತಿಗೆ ರಕ್ಷಣೆ ಒದಗಿಸುವಂತೆ ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಗೃಹ ಸಚಿವರ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದಿರುವ ಸಿದ್ದರಾಮಯ್ಯ, ಪೊಲೀಸ್ ಆಯುಕ್ತ ಕಮಲ್ ಪಂಥ್ ಜೊತೆಗೂ ಮಾತನಾಡುವುದಾಗಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ, ರಮೇಶ್ ಜಾರಕಿಹೊಳಿಗೂ ಇನ್ನಾದರೂ ಸಾಕ್ಷ್ಯ ನೀಡಿ ಎನ್ನುವ ಬುದ್ದಿವಾದವನ್ನು ಹೇಳಿದ್ದಾರೆ.
"ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಯುವತಿಗೆ ರಕ್ಷಣೆ ಕೊಡಿಸುವ ಸಂಬಂಧ ನಿನ್ನೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಇಂದು ಪೊಲೀಸ್ ಕಮಿಷನರ್ ಅವರ ಜೊತೆಗೂ ಮಾತನಾಡುತ್ತೇನೆ. ರಕ್ಷಣೆ ಕೇಳಿದವರಿಗೆ ರಕ್ಷಣೆ ನೀಡಬೇಕಾದುದ್ದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ"ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ದೌರ್ಜನ್ಯಕ್ಕೊಳಗಾದ ಮಹಿಳೆ ಎಸ್.ಐ.ಟಿ ಮುಂದೆ ಹಾಜರಾಗಲಿ
"ರಮೇಶ್ ಜಾರಕಿಹೊಳಿ ಅವರಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಹೀಗೆ ವೀಡಿಯೋ ಮೂಲಕ ರಕ್ಷಣೆ ಕೇಳುವ ಬದಲು ನೇರವಾಗಿ ಎಸ್.ಐ.ಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸುವುದು ಸೂಕ್ತ" ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ತಿದ್ದುಪಡಿಯನ್ನು ವಾಪಾಸು ಪಡೆಯಬೇಕೆಂದು ಆಗ್ರಹ
"ಸಿಡಿ ಹಗರಣದ ಬಗ್ಗೆ ನಾವು ಧರಣಿ ನಡೆಸುವ ವೇಳೆ ರಾಜ್ಯ ಸರ್ಕಾರ ಕೆ.ಟಿ.ಟಿ.ಪಿ ಕಾಯ್ದೆಗೆ ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರ್ಕಾರಿ ಕಾಂಟ್ರಾಕ್ಟ್ ಗಳಲ್ಲಿದ್ದ ಮೀಸಲಾತಿಯನ್ನು ಕಸಿದುಕೊಂಡಿದೆ. ಶೋಷಿತ ಸಮುದಾಯಗಳಿಗೆ ಇದರಿಂದ ಅನ್ಯಾಯವಾಗಲಿದ್ದು, ತಿದ್ದುಪಡಿಯನ್ನು ವಾಪಾಸು ಪಡೆಯಬೇಕೆಂದು ಆಗ್ರಹಿಸುತ್ತೇನೆ"ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಿದ್ದರಾಮಯ್ಯ ಬುದ್ದಿವಾದ
"ರಮೇಶ್ ಜಾರಕಿಹೊಳಿ ಬಳಿ ಅಂಥಾ ಸ್ಪೋಟಕ ಸಾಕ್ಷ್ಯ ಇದ್ದಿದ್ದರೆ, ಈ ಹಿಂದೆ ದೂರು ದಾಖಲು ಮಾಡಿದಾಗಲೇ ಸಾಕ್ಷ್ಯವನ್ನೂ ನಮೂದಿಸಬೇಕಿತ್ತು. ಇಷ್ಟುದಿನದ ವರೆಗೆ ಸಾಕ್ಷ್ಯವನ್ನು ಬಚ್ಚಿಟ್ಟಿದ್ದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇನ್ನಾದರೂ ತಡ ಮಾಡದೆ ಎಸ್.ಐ.ಟಿ ಮುಂದೆ ತಮ್ಮ ಬಳಿಯಿರುವ ಸಾಕ್ಷ್ಯವನ್ನು ಹಾಜರುಪಡಿಸಲಿ"ಎನ್ನುವ ಬುದ್ದಿಮಾತನ್ನು ಸಿದ್ದರಾಮಯ್ಯ ನೀಡಿದ್ದಾರೆ.
Recommended Video

ಸದನದ ಸದಸ್ಯರೊಬ್ಬರ ಆಶ್ಲೀಲ ವೀಡಿಯೋ
"ಸದನದ ಸದಸ್ಯರೊಬ್ಬರ ಆಶ್ಲೀಲ ವೀಡಿಯೋ ಒಂದು ಮಾಧ್ಯಮಗಳಲ್ಲಿ ಪ್ರಸಾರವಾದಾಗ ಅದರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕಿರುವುದು ವಿರೋಧ ಪಕ್ಷದ ಕರ್ತವ್ಯ. ಅದನ್ನು ಮಾಡಿದ್ದೇವೆ. ನಮ್ಮ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡದೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇದ್ದಾಗ ಅನಿವಾರ್ಯವಾಗಿ ಧರಣಿ ಮಾಡಿದ್ದೇವೆ"ಎಂದು ಸಿದ್ದರಾಮಯ್ಯನವರು ಕಾಂಗ್ರೆಸ್ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications