ಸಿಡಿ ಗರ್ಲ್ ದೂರು: ಸರಕಾರವನ್ನೇ ಉರುಳಿಸಿದ್ದೇನೆ, ನಾಳೆಯಿಂದ ನಮ್ಮ ಆಟ ಶುರು: ಜಾರಕಿಹೊಳಿ ಪ್ರತಿಕ್ರಿಯೆ
ಬೆಂಗಳೂರು, ಮಾರ್ಚ್ 26: ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿಯ ವಿಚಾರ, ಶುಕ್ರವಾರದಂದು (ಮಾ 26) ಹೊಸ ಆಯಾಮ ಪಡೆದುಕೊಂಡಿದೆ. ಸಂತ್ರಸ್ತೆ ಯುವತಿಯ ಪರವಾಗಿ, ವಕೀಲರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಯುವತಿಯ ಮತ್ತೊಂದು ವಿಡಿಯೋ ಬಿಡುಗಡೆಯಾಗಿತ್ತು. ಈ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. "ಇಂತಹ ಹತ್ತು ವಿಡಿಯೋಗಳು ಬರಲಿ, ನಾನು ಹೆದರುವುದಿಲ್ಲ. ಸರಕಾರವನ್ನೇ ಉರುಳಿಸಿದ್ದೇನೆ, ಇದ್ಯಾವ ಲೆಕ್ಕ ನನಗೆ, ಎಲ್ಲಾ ವಿಚಾರವನ್ನು, ಇದರ ಹಿಂದೆ ಯಾರ್ಯಾರು ಇದ್ದಾರೆ ಎಲ್ಲವನ್ನೂ ಹೊರಗೆಳೆಯುತ್ತೇನೆ"ಎಂದು ಹೇಳಿದರು.
"ನನ್ನ ಮೇಲೆ ಆಕೆ ರೇಪ್ ಕೇಸ್ ಹಾಕಿದರೂ ನಾನು ಅದನ್ನು ಎದುರಿಸಲು ಶಕ್ತನಾಗಿದ್ದೇನೆ. ಈ ವಿಚಾರದಲ್ಲಿ ಮೆಂಟಲಿ ನಾನು ಸಿದ್ದನಾಗಿದ್ದೇನೆ. ಕಾನೂನು ಹೋರಾಟ ನಡೆಸುತ್ತೇನೆ"ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

"ಆಕೆ ನನ್ನ ವಿರುದ್ದ ದೂರು ಕೊಡಲು ವಕೀಲರನ್ನು ಕಳುಹಿಸಿದ್ದಾರೆ ಎನ್ನುವ ವಿಚಾರ ತಿಳಿಯಿತು. ನನ್ನ ಬಳಿಯೂ ವಕೀಲರಿದ್ದಾರೆ, ನಾನು ಈ ವಿಚಾರದಲ್ಲಿ ಜಾಮೀನು ತೆಗೆದುಕೊಳ್ಳುವುದಿಲ್ಲ. ಏನಾಗುತ್ತೋ ನೋಡೋಣ"ಎಂದು ಜಾರಕಿಹೊಳಿ ಹೇಳಿದರು.
"ನನ್ನ ವಿರುದ್ದ ಅಂದೇ ದೂರು ನೀಡಬೇಕಾಗಿತ್ತು, ಆದರೆ ನೀಡಲಿಲ್ಲ. ಇದೊಂದು ದೊಡ್ಡ ಷಡ್ಯಂತ್ರ ಎನ್ನುವುದು ಗೊತ್ತಾಗುತ್ತದೆ. ನನಗೂ ಕಾನೂನು ಗೊತ್ತಿದೆ, ವಕೀಲರು ಇದ್ದಾರೆ"ಎಂದು ರಮೇಶ್ ಜಾರಕಿಹೊಳಿ ಹೇಳಿದರು.
"ಯುವತಿ ನನ್ನ ವಿರುದ್ದ ಹೇಳುತ್ತಾಳೆ ಎಂದು ನನಗೆ ಗೊತ್ತಿದೆ. ನಾನು ಬೆಂಗಳೂರಿನಲ್ಲೇ ಇರುತ್ತೇನೆ, ಪೊಲೀಸರು ನನ್ನನ್ನೂ ವಿಚಾರಣೆ ಮಾಡಬೇಕು. ನಾಳೆಯಿಂದ ನಮ್ಮ ಆಟ ಶುರು" ಎಂದು ರಮೇಶ್ ಜಾರಕಿಹೊಳಿ ಗುಡುಗಿದರು.
ಸಂತ್ರಸ್ತೆ ಯುವತಿ ಇಂದು ಮೂರನೇ ಬಿಡುಗಡೆ ಮಾಡಿದ್ದರು. ಅದರಲ್ಲಿ, "ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಮತ್ತು ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications