ಕೆಎಸ್ಎಚ್ಡಿಸಿಯಲ್ಲಿ 5 ಕೋಟಿ ವಂಚನೆ; ಸಿಬಿಐ ತನಿಖೆ
ಬೆಂಗಳೂರು, ಜೂನ್ 22 : ಕೆಎಸ್ಎಚ್ಡಿಸಿ ಅಧಿಕೃತ ಖಾತೆಯಿಂದ 5.01 ಕೋಟಿ ರೂ.ಗಳನ್ನು ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ವಂಚನೆ ಪ್ರಕರಣದ ಕುರಿತು ಸಿಬಿಐ ಎಫ್ಐಆರ್ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದೆ.
Recommended Video
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಈ ವಂಚನೆಯಲ್ಲಿ ನಿಗಮದ ಖಾತೆ ಇರುವ ಎಸ್ಬಿಐ ಬ್ಯಾಂಕ್ನ ಅಧಿಕಾರಿಗಳು, ನಿಗಮದ ಅಧಿಕಾರಿಗಳ ಶಾಮೀಲಾಗಿರುವ ಶಂಕೆ ಇದ್ದು, ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಮ್ಯಾನೇಜರ್ ಜೂನ್ 15ರಂದು ಈ ಕುರಿತು ಸಿಬಿಐ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿದ್ದರು. ಜೂನ್ 19ರಂದು ಸಿಬಿಐ ಎಫ್ಐಆರ್ ದಾಖಲು ಮಾಡಿಕೊಂಡಿದೆ.

ಏನಿದು ಪ್ರಕರಣ? : ಕೆಎಸ್ಎಚ್ಡಿಸಿ 2018ರ ಜುಲೈ 21ರಂದು ಹೆಸರಘಟ್ಟ ರಸ್ತೆಯ ಎಸ್ಬಿಐ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆಯಿತು. ಆ ಸಮಯದಲ್ಲಿ ಶಾಖೆ ಸಹಾಯಕ ವ್ಯವಸ್ಥಾಪಕರಾಗಿದ್ದ ವಂಬಶೆ ಅಕ್ರಮ ಮಾರ್ಗದಲ್ಲಿ ಕೆಎಸ್ಎಚ್ಡಿಸಿ ಹೆಸರಿನಲ್ಲಿ ಮತ್ತೊಂದು ನಕಲಿ ಖಾತೆ ತೆರೆದಿದ್ದರು. ಆದರೆ, ಇದಕ್ಕಾಗಿ ಕೆಎಸ್ಎಚ್ಡಿಸಿ ಕೋರಿಕೆ ಸಲ್ಲಿಸಿರಲಿಲ್ಲ.
2018ರ ಜುಲೈ 27ರಂದು ಕೆನರಾ ಬ್ಯಾಂಕ್ ಆರ್ಟಿಜಿಎಸ್ ಮೂಲಕ ಕೆಎಸ್ಎಚ್ಡಿಸಿ ಅಧಿಕೃತ ಖಾತೆಗೆ 5.01 ಕೋಟಿ ಜಮಾ ಆಗಿದೆ. ಈ ಹಣವನ್ನು ಅನಧಿಕೃತವಾಗಿ ತೆರೆಯಲಾಗಿದ್ದ ಖಾತೆಗೆ ವರ್ಗಾವಣೆ ಮಾಡಿ 25 ಲಕ್ಷ ನಿಶ್ಚಿತ ಠೇವಣಿ ಇಡಲಾಗಿತ್ತು.
ಉಳಿದ ಹಣವನ್ನು 2018ರ ಜುಲೈ 30 ರಿಂದ ಸೆಪ್ಟೆಂಬರ್ 6ರ ತನಕ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ನಕಲಿ ಚೆಕ್ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಬಿಐ ಕೆಎಸ್ಎಚ್ಡಿಸಿಯ ಕೆಲವು ಅನಾಮಧೇಯ ಅಧಿಕಾರಿಗಳು, ಬ್ಯಾಂಕ್ನ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ, ನಂಬಿಕೆ ದ್ರೋಹದಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ಆರಂಭಿಸಿದೆ.












Click it and Unblock the Notifications