ಬಿಡದಿ : ಸಂಗೀತಾ ಸಾವಿನ ಪ್ರಕರಣ ಸಿಬಿಐ ತನಿಖೆಗೆ?
ಬೆಂಗಳೂರು, ಮೇ 30 : ಸಂಗೀತಾ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಏಕೆ ಒಪ್ಪಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿದೆ. 2014ರ ಡಿಸೆಂಬರ್ 28ರಂದು ಸಂಗೀತಾ ನಿಗೂಢವಾಗಿ ಸಾವನ್ನಪ್ಪಿದ್ದರು.
ಸಂಗೀತಾ ತಾಯಿ ಝಾನ್ಸಿ ರಾಣಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ಏಕ ಸದಸ್ಯ ಪೀಠ, ಸಾವಿನ ಕುರಿತು ಸಿಬಿಐ ತನಿಖೆಗೆ ನಡೆಯಬಾರದೇ? ಎಂದು ಸರ್ಕಾರವನ್ನು ಪ್ರಶ್ನಿಸಿದೆ. ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರು, 'ಇದೊಂದು ಸ್ವಾಭಾವಿಕ ಸಾವು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಮೊದಲು ನಡೆದ ಮರಣೋತ್ತರ ಪರೀಕ್ಷೆ, ಎರಡನೇ ಬಾರಿ ಶವ ಹೊರತೆಗೆದು ನಡೆದಿ ಪರೀಕ್ಷೆಯ ವರದಿಗಳು ಹೃದಯಾಘಾತದಿಂದ ಸತ್ತಿದ್ದಾರೆ' ಎಂದು ಹೇಳಿವೆ ಎಂದು ವಾದ ಮಂಡಿಸಿದರು.

ಆಕ್ಷೇಪಣೆಗಳು ಏನಿದ್ದರೂ ಪ್ರಮಾಣ ಪತ್ರದ ಮೂಲಕ ಸಲ್ಲಿಸಿ. ಮರಣೋತ್ತರ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ಎಲ್ಲಾ ದಾಖಲೆಗಳು ರಿಜಿಸ್ಟಾರ್ ಬಳಿ ಮುಚ್ಚಿದ ಲಕೋಟೆಯಲ್ಲಿರಲಿ ಎಂದು ಕೋರ್ಟ್ ಹೇಳಿದ ಕೋರ್ಟ್, ಜೂನ್ 11ಕ್ಕೆ ವಿಚಾರಣೆ ಮುಂದೂಡಿದೆ.
ಯಾರು ಈ ಸಂಗೀತಾ ? : ಆಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದ 24 ವರ್ಷದ ಸಂಗೀತಾ 2010ರಿಂದ ಬಿಡದಿಯ ನಿತ್ಯಾನಂದ ಸ್ವಾಮಿಗಳ ಆಶ್ರಮದಲ್ಲಿ ವಾಸವಾಗಿದ್ದರು. 'ನಿತ್ಯಾತುರಿಯತೀತಾನಂದ ಸ್ವಾಮಿನಿ' ಎಂದು ಹೆಸರು ಬದಲಿಸಿಕೊಂಡಿದ್ದರು.
2014ರ ಡಿಸೆಂಬರ್ 28ರಂದು ಆಶ್ರಮದಲ್ಲಿಯೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಸಂಗೀತಾ ಅವರ ತಾಯಿ ಈ ಸಾವಿನ ಬಗ್ಗೆ ತನಿಖೆ ನಡೆಸಿ ಎಂದು ರಾಮನಗರ ಎಸ್ಪಿಗೆ ದೂರು ನೀಡಿದ್ದರು. ಬೆಂಗಳೂರು ಕೇಂದ್ರ ಐಜಿಪಿಗೂ ದೂರು ನೀಡಿದ್ದರು.
ಇದು ಹೃದಯಾಘಾತದಿಂದ ಸಂಭವಿಸಿರುವ ಸಾವು ಎಂದು ಮರಣೋತ್ತರ ಪರೀಕ್ಷೆ ವರದಿ ಬಂದಿತ್ತು. ಎರಡನೇ ಬಾರಿಗೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದ್ದರಿಂದ, ಸಂಗೀತಾ ಅವರ ತಾಯಿ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.












Click it and Unblock the Notifications