'ನನ್ನ ವಿರುದ್ಧ ಇಂತಹ ನೂರು ಕೇಸು ಹಾಕಿದ್ರು ಜಗ್ಗಲ್ಲ'
ಬೆಂಗಳೂರು, ಅ.18 : 'ನನ್ನ ವಿರುದ್ಧ ಇಂತಹ ನೂರು ಕೇಸು ದಾಖಲು ಮಾಡಿದರೂ ಜಗ್ಗಲ್ಲ, ಬಗ್ಗಲ್ಲ. ನಮ್ಮ ಹೋರಾಟ ಹತ್ತಿಕ್ಕಲು ಮುಖ್ಯಮಂತ್ರಿಗಳು ಹೀಗೆ ಮಾಡುತ್ತಿದ್ದಾರೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ 2 ಎಫ್ಐಆರ್, ಏನಿದು ಪ್ರಕರಣ?
ಭ್ರಷ್ಟಾಚಾರ ನಿಗ್ರಹ ದಳದಲ್ಲಿ ತಮ್ಮ ವಿರುದ್ಧ ಎರಡು ಎಫ್ಐಆರ್ ದಾಖಲಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. 'ಅವರಿಗೆ ಮಾನ-ಮರ್ಯಾದೆ ಕೊಂಚವಾದರೂ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಸಿಎಂ ಮತ್ತು ಅವರ ಪುತ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾಲ ಬಂದಾಗ ಜಾತಕ ಬಯಲು ಮಾಡುತ್ತೇನೆ' ಎಂದರು.
'ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಮರು ಜೀವ ನೀಡಿ ಸಿದ್ದರಾಮಯ್ಯ ರಾಜಕೀಯ ದ್ವೇಷ ಸಾಧನೆಗೆ ಹೊರಟಿದ್ದಾರೆ. ಆ ಮೂಲಕ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ಕಾನೂನು ಬದ್ಧವಾಗಿಯೇ ಡಿನೋಟಿಫಿಕೇಶನ್ ಮಾಡಲಾಗಿದೆ' ಎಂದು ತಿಳಿಸಿದರು.
'ಮುಖ್ಯಮಂತ್ರಿಯಾಗಿದ್ದಾಗ ನನಗಿದ್ದ ಅಧಿಕಾರ ಚಲಾಯಿಸಿ, ಕಾನೂನು ಬದ್ಧವಾಗಿ ಡಿನೋಟಿಕೇಶನ್ ಮಾಡಿದ್ದೇನೆ. ಡಿ.ಕೆ.ಶಿವಕುಮಾರ್ ಅವರ ಆಸ್ತಿಯೊಂದು ಕಾನೂನು ಬದ್ಧವಾಗಿಯೇ ಇದ್ದ ಕಾರಣ ಅವರಿಗೂ ನಾನು ಡಿನೋಫಿಕೇಶನ್ ಮಾಡಿಕೊಟ್ಟಿದ್ದೇನೆ' ಎಂದು ಹೇಳಿದರು.
'ರಾಜ್ಯದ ಜನರು ಎಲ್ಲವನ್ನು ಗಮನಿಸುತ್ತಿದ್ದಾರೆ. ಮುಂದೆ ನಮ್ಮ ಸರ್ಕಾರ ಅಧಿಕಾಕ್ಕೆ ಬಂದಾಗ ಇದಕ್ಕೆಲ್ಲ ತಕ್ಕ ಉತ್ತರ ನೀಡುತ್ತೇನೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಸಿದ್ದರಾಮಯ್ಯ ಅವರಿಗೆ ನಡುಕ ಶುರುವಾಗಿದೆ' ಎಂದರು.