ಕಾವೇರಿ ವಿಚಾರದಲ್ಲಿ ಮತ್ತೆ ಹಿನ್ನಡೆ: ತಮಿಳುನಾಡಿಗೆ 15 ದಿನ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ
ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಅಂತ್ಯವಾಗಿದ್ದು ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ನೀರು ಹರಿಸಲು ಸಾಧ್ಯವಿಲ್ಲ ಎನ್ನುವ ರಾಜ್ಯದ ವಾದದ ಹೊರತಾಗಿಯೂ ತಮಿಳುನಾಡಿಗೆ ನೀರು ಹರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾವೇರಿ ನದಿ ನೀರು ನಿರ್ವಹಣಾ ಸಮಿತಿ (CWRC) ಹೇಳಿದಷ್ಟು ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ಸ್ ಹರಿಸಲು ಸೂಚನೆ ನೀಡಲಾಗಿದೆ. ಈ ನಿರ್ಣಯದ ಪ್ರಕಾರ ರಾಜ್ಯ ಸರ್ಕಾರ ಮುಂದಿನ 15 ದಿನ ಮತ್ತೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರಿನ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿದ್ದರೂ ಪ್ರಯೋಜನವಾಗಿಲ್ಲ.

24 ಸಾವಿರ ಕ್ಯೂಸೆಕ್ಸ್ ದರದ ನೀಡುವ ಬಿಡುವ ವಿಚಾರ ಸುಪ್ರಿಂಕೋರ್ಟ್ ಮುಂದೆ ಬಾಕಿ ಇದ್ದು, ಅದರಂತೆ ನೀರು ಹರಿಸಲು ತಮಿಳುನಾಡು ಒತ್ತಾಯಿಸಿತು. CWRCಯ ಸಂಕಟದ ನಿರ್ಣಯದ ಪ್ರಕಾರ ಮುಂದಿನ ದಿನಗಳಲ್ಲಿನ ಹರಿವುಗಳನ್ನು ಲೆಕ್ಕ ಹಾಕಿ 14,200 ಕ್ಯೂಸೆಕ್ಸ್ ಆಗುತ್ತದೆ ಎಂದು ಪ್ರತಿಪಾದಿಸಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಕರ್ನಾಟಕದ ಜಲಾಶಯಗಳಲ್ಲಿ ಅತ್ಯಲ್ಪ ನೀರು ಒಳಹರಿವು ಇರುವ ಕಾರಣ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರತಿಭಟಿಸಿತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆಗಸ್ಟ್ 29ರಿಂದ ಸೆಪ್ಟಂಬರ್ 12ರವರೆಗೆ 5,000 ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದೆ.
ಪ್ರಾಧಿಕಾರದ ನಿರ್ಧಾರಕ್ಕೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂದು ಹೇಳಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಸೋಮವಾರ ನಡೆದ ಸಭೆಯಲ್ಲಿ ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್ನಲ್ಲಿ 15 ದಿನಗಳ ಕಾಲ ನೀರು ಹರಿಸುವಂತೆ ಸೂಚನೆ ನೀಡಿತ್ತು. ಸಮಿತಿಯ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ರೈತರ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿರುವ ಬೆನ್ನಲ್ಲೇ ಕೆಆರ್ ಎಸ್ ಜಲಾನಯನ ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನೀರು ಬಿಡದಂತೆ ಪ್ರತಿಭಟನೆ ನಡೆಸಿದರು.
ಕೆಆರ್ ಎಸ್ ಬಳಿ ಹೋರಾಟ ನಡೆಸಿದ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು, ಜ್ಞಾನ ಇಲ್ಲದವರು ಪ್ರಾಧಿಕಾರದಲ್ಲಿದ್ದಾರೆ, ರಾಜ್ಯ ಸರ್ಕಾರ ತಮಿಳುನಾಡಿನ ಜೊತೆ ಸ್ನೇಹ ಬೆಳೆಸಲು ನೀರು ಬಿಟ್ಟಿದ್ದು, ನಾಡಿನ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನವನ್ನು ವಿರೋಧಿಸಿ ಜಲ ಸಂರಕ್ಷಣಾ ಸಮಿತಿ ಕರ್ನಾಟಕ ಸಭೆ ನಡೆಸಿತು. ಪ್ರಮುಖ ರೈತ ಮುಖಂಡರು, ಹಲವು ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು.












Click it and Unblock the Notifications