ಶನಿವಾರ ಮಧ್ಯರಾತ್ರಿ ತಲಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ, ಅಕ್ಟೋಬರ್ 17 : ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ಪವಿತ್ರತೀರ್ಥ ಕುಂಡಿಕೆಯಲ್ಲಿ ಶನಿವಾರ ಮಧ್ಯರಾತ್ರಿ 12.15ಕ್ಕೆ ತೀರ್ಥೋದ್ಭವವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನು ಮಾಡಲಾಗಿದೆ.
ಈ ಬಾರಿ ಮಧ್ಯರಾತ್ರಿಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಮೈದಳೆಯುವುದರಿಂದ ಬೆಳಕಿನ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಸ್ವಚ್ಛತೆ, ಸುರಕ್ಷತೆ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಕಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. [ಕಾವೇರಿ ತೀರ್ಥೋದ್ಭವದ ಪೌರಾಣಿಕ ಹಿನ್ನೆಲೆ]
ಬಂದೋಬಸ್ತ್ಗಾಗಿ 700 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 3 ಡಿವೈಎಸ್ಪಿ, 7 ಸರ್ಕಲ್ ಇನ್ಸ್ಪೆಕ್ಟರ್, 22 ಪೊಲೀಸ್ ಸಬ್ ಇನ್ಸ್ಪೆಕ್ಟರ್, 35 ಸಹಾಯಕ ಸಬ್ ಇನ್ಸ್ಪೆಕ್ಟರ್, 110 ಮಂದಿ ಮುಖ್ಯ ಪೇದೆಗಳು, 179 ಸಾಮಾನ್ಯ ಪೊಲೀಸರು, 42 ಮಹಿಳಾ ಪೊಲೀಸರು, 150 ಗೃಹ ರಕ್ಷಕ ದಳದ ಸಿಬ್ಬಂದಿಗಳು, 4 ಜಿಲ್ಲಾ ಮೀಸಲು ಪೊಲೀಸ್ ಪಡೆ, 2 ರಾಜ್ಯ ಮೀಸಲು ಪೊಲೀಸ್ ಪಡೆ, 2 ಅಗ್ನಿಶಾಮಕ ದಳ ಹೀಗೆ ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಮಾಹಿತಿ ನೀಡಿದ್ದಾರೆ.
ತಲಕಾವೇರಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಊಟೋಪಚಾರ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ-ಭಾಗಮಂಡಲ-ತಲಕಾವೇರಿಗೆ ಹೋಗಿ ಬರಲು ಅಗತ್ಯ ಬಸ್ ಸೌಲಭ್ಯ, ಭಾಗಮಂಡಲದ ಪ್ರವಾಸಿ ಮಂದಿರದಿಂದ ತಲಕಾವೇರಿ ತನಕ ಸುಮಾರು 12 ಕಿ.ಮೀ.ವರೆಗಿನ ರಸ್ತೆ ಮಾರ್ಗದಲ್ಲಿ ಬೆಳಕು ವ್ಯವಸ್ಥೆ, ತಲಕಾವೇರಿಯಲ್ಲಿ ತೀರ್ಥ ಪಡೆದುಕೊಳ್ಳುವಂತಾಗಲು ಏಕಮುಖವಾಗಿ ಭಕ್ತಾಧಿಗಳು ಹೋಗಲು ಅಗತ್ಯ ಬ್ಯಾರಿಕೇಡ್ಗಳ ನಿರ್ಮಾಣ, ತಾತ್ಕಾಲಿಕ ಶೌಚಾಲಯ ಹಾಗೂ ಕುಡಿಯುವ ನೀರು ವ್ಯವಸ್ಥೆ ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.