ಸುಪ್ರೀಂಕೋರ್ಟ್ ವಿಚಾರಣೆಗೆ ಸಮಿತಿ ತೀರ್ಮಾನವೇ ಮುನ್ನುಡಿ?
ಬೆಂಗಳೂರು, ಸೆ. 19: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ಪಾಲಿಗೆ ಸೋಮವಾರ ಹಾಗೂ ಮಂಗಳವಾರ ಮಹತ್ವದ ದಿನವಾಗಿದೆ. ಸೋಮವಾರದಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮಂಗಳವಾರ ಸುಪ್ರೀಂಕೋರ್ಟಿನ ವಿಚಾರಣೆ ನಡೆಯಲಿದೆ.
ನವದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿಶೇಖರ್ ಅಧ್ಯಕ್ಷರಾಗಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಇಂದು ನಡೆಯಲಿದೆ. ಸಮಿತಿ ಸದಸ್ಯ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಅವರು, ರಾಜ್ಯದಲ್ಲಿನ ನೀರಿನ ಕೊರತೆ ಬಗ್ಗೆ ಸಮಿತಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಸಮಿತಿ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಮೇಲೆ ಮುಂದಿನ ವಿಚಾರಣೆಯನ್ನ ಆರಂಭಿಸಲಿದ್ದೇವೆ ಎಂದು ವಕೀಲ ಮೋಹನ್ ಕಾತರಕಿ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ: ಮುಂಜಾಗ್ರತಾ ಕ್ರಮವಾಗಿ ಮಂಡ್ಯದಲ್ಲಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಕನ್ನಡ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಪ್ರಮುಖ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ಜಿ ಮಾದೇಗೌಡ ಅವರ ನೇತೃತ್ವದ ಕಾವೇರಿ ಹಿತರಕ್ಷಣಾ ಸಮಿತಿಯಿಂದ ಮಂಡ್ಯದಲ್ಲಿ ಹೋರಾಟ ಮುಂದುವರೆದಿದೆ.[ಕಾವೇರಿ ವಿವಾದ : ಮಂಡ್ಯದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ]
ಸಮಿತಿ ಸಭೆ ನಿರ್ಣಯ ಬಂದ ಬಳಿಕ ಕಾನೂನು ಸಲಹಾ ಸಮಿತಿಯ ಸಭೆ ನಡೆಸಲಾಗುತ್ತದೆ. ಈ ಮೂಲಕ ಸುಪ್ರೀಂಕೋರ್ಟಿನಲ್ಲಿ ವಾದ ಮಂಡನೆಗೆ ತಯಾರಿ ನಡೆಸಲಾಗುತ್ತದೆ ಎಂದರು.
ವಿಚಾರಣೆ ಸಂದರ್ಭದಲ್ಲೇ ಸಮಿತಿ ಸಭೆ ಏಕೆ?: ಸುಪ್ರೀಂಕೋರ್ಟ್ ಇನ್ನೂ ಈ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಿಲ್ಲವಾದ್ದರಿಂದ ಮಧ್ಯಂತರ ತೀರ್ಪಿನ ಬಗ್ಗೆ ಉಸ್ತುವಾರಿ ಸಮಿತಿ ಸಭೆ ನಡೆಸುವ ಅಧಿಕಾರ ಇರುತ್ತದೆ. ಉಸ್ತುವಾರಿ ಸಮಿತಿಯಲ್ಲಿ ಚರ್ಚೆಯಾದ ವಿಷಯದ ಮೇಲೆ ಸುಪ್ರೀಂಕೋರ್ಟ್ ಕೂಡಾ ಪರಿಗಣಿಸಲಿದೆ. ಇಲ್ಲದಿದ್ದರೆ ಮತ್ತೆ ಮಧ್ಯಂತರ ಆದೇಶ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಉತುವಾರಿ ಸಮಿತಿಯ ಸಭೆಯ ನಿರ್ಣಯ ಮಹತ್ವದ್ದಾಗಿದೆ ಎಂದು ಹೇಳಿದರು.(ಒನ್ಇಂಡಿಯಾ ಸುದ್ದಿ)












Click it and Unblock the Notifications