ಓದುಗರ ಅಭಿಮತ : ಪ್ರಾಣ ಹೋದ್ರೂ ಸರಿ ನೀರು ಬಿಡಬೇಡಿ
ಬೆಂಗಳೂರು, ಸೆಪ್ಟೆಂಬರ್ 28 : 'ಲಿವ್ ಅಂಡ್ ಲೆಟ್ ಲಿವ್' ಅಂತ ಸುಪ್ರೀಂ ಕೋರ್ಟ್ ಏನೋ ಹೇಳಿದೆ. ಆದರೆ, ನಮ್ಮ ಕಾವೇರಿ ಕೊಳ್ಳದ ರೈತರ ಜೀವನವೇ ಸಂಕಷ್ಟದಲ್ಲಿರುವಾಗ 'ಕಾವೇರಿ ನೀರು ಬಿಡಬೇಕೋ ಬಿಡಬಾರದೋ' ಎಂಬ ಸಂದಿಗ್ಧತೆಯಲ್ಲಿ ಸಿದ್ದರಾಮಯ್ಯ ಸರಕಾರ ತೊಳಲಾಡುತ್ತಿದೆ. ಸಿದ್ದರಾಮಯ್ಯ ಅವರ ಸ್ಥಿತಿ ಹ್ಯಾಮ್ಲೆಟ್ ಗಿಂತ ಭಿನ್ನವಾಗೇನೂ ಇಲ್ಲ.
ತಮಿಳುನಾಡಿಗೆ ನೀರು ಬಿಡದಿದ್ದರೆ ಸರ್ವೋಚ್ಚ ನ್ಯಾಯಾಲಯವನ್ನು ಎದುರು ಹಾಕಿಕೊಂಡಂತೆ, ಬರಿದಾಗಿರುವ ಅಣೆಕಟ್ಟೆಗಳಿಂದ ಇದ್ದಬದ್ದ ನೀರು ಬಿಟ್ಟರೆ ಮಂಡ್ಯದ ರೈತರು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕಾಗುತ್ತದೆ. ನೀರು ಬಿಟ್ಟರೆ ನಮ್ಮ ಪ್ರಾಣ ಕೊಡಲೂ ಸಿದ್ಧ ಎಂದು ಮಂಡ್ಯದ ರೈತರು ಬೀದಿ ಹೋರಾಟಕ್ಕಿಳಿದಿದ್ದಾರೆ. [ಸುಪ್ರೀಂಕೋರ್ಟ್ ಆದೇಶಕ್ಕೆ ಕರ್ನಾಟಕ ಬಗ್ಗಲೇಬೇಕು ಏಕೆ?]
ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಏನೇ ಆಗ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಅಭಿಮತ ವ್ಯಕ್ತಪಡಿಸಿದ್ದರೆ. ಅಡ್ವೋಕೇಟ್ ಜನರಲ್ ಆಗಿರುವ ಮಧುಸೂಧನ ನಾಯಕ್ ಅವರು, ತಮಿಳುನಾಡಿಗೆ ನೀರು ಬಿಟ್ಟು ಸುಪ್ರೀಂ ಕೋರ್ಟಿಗೆ ಆದೇಶಕ್ಕೆ ಮಾನ್ಯತೆ ನೀಡಿ ಮರ್ಯಾದೆ ಉಳಿಸಿಕೊಳ್ಳುವುದು ಒಳಿತು. [ಮತಗಟ್ಟೆ]
ರಾಜ್ಯದ ಶಾಸಕರು ಅಭಿಪ್ರಾಯವನ್ನೇ ಕರ್ನಾಟಕದ ಜನತೆ ಕೂಡ ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಮಾನ್ಯತೆ ನೀಡಿ ರಾಜ್ಯ 18 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾ? ಎಂದು ಕೇಳಿದ್ದ ಪ್ರಶ್ನೆಗೆ 'ಪ್ರಾಣ ಹೋದ್ರೂ ಸರಿ ತಮಿಳುನಾಡಿಗೆ ನೀರು ಬಿಡಬಾರದು' ಎಂದು ಕನ್ನಡಿಗರು ಒಕ್ಕೊರಲಿನಿಂದ ಕೂಗುತ್ತಿದ್ದಾರೆ. [ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯ ಬಹಳ ಮುಖ್ಯ: ಸಿದ್ದರಾಮಯ್ಯ]
ಶೇ.62ರಷ್ಟು ಮತದಾರರು ನೀರು ಬಿಡುವುದು ಬೇಡ ಅಂತ ಹೇಳಿದ್ದರೆ, ನೀರು ಬಿಡಲೇಬೇಕಾದಂಥ ಪ್ರಸಂಗ ಬಂದ್ರೆ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಶೇ.20ರಷ್ಟು ಅಭಿಮತ ವ್ಯಕ್ತಪಡಿಸಿದ್ದಾರೆ. ಏನು ಆಗುತ್ತೋ ಕಾದು ನೋಡೋಣ ಅಂತ ಶೇ.14ರಷ್ಟು ಹೇಳಿದ್ದರೆ, ನೀರು ಬಿಡದೆ ಗತ್ಯಂತರವಿಲ್ಲ ಎಂದು ಶೇ.5ರಷ್ಟು ಜನರು ಕೋರ್ಟಿಗೆ ತಲೆಬಾಗಿದ್ದಾರೆ.
ಸೆ.23ರಂದು ಕುಡಿಯಲು ಮಾತ್ರ ನೀರು ಹರಿಸಲಾಗುವುದು ಎಂದು ನಿರ್ಣಯ ತೆಗೆದುಕೊಂಡು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟಿಗೆ ಪರೋಕ್ಷವಾಗಿ ಮತ್ತು ತಮಿಳುನಾಡಿಗೆ ಪ್ರತ್ಯಕ್ಷವಾಗಿ ಸೆಡ್ಡು ಹೊಡೆದಿತ್ತು. ಆ ನಿರ್ಣಯವನ್ನು ಮುಲಾಜಿಲ್ಲದೆ ಕಸದಬುಟ್ಟಿಗೆ ಚೆಲ್ಲಿರುವ ಸುಪ್ರೀಂ ಕೋರ್ಟ್ ಸುಮ್ಮನೆ ಹೇಳಿದಂತೆ ಮಾಡಿ ಎಂದು ಗುಟುರು ಹಾಕಿದೆ. [ಉಮಾ ನೇತೃತ್ವದಲ್ಲಿ ಕರ್ನಾಟಕ-ತಮಿಳುನಾಡು ನಡುವೆ ಸಂಧಾನ]













Click it and Unblock the Notifications