ಕಾವೇರಿ ಸಭೆ ಬಹಿಷ್ಕಾರ: ಬಿಜೆಪಿ ನಾಯಕರೇ ನಿಮ್ಮ ಪಲಾಯನವಾದ ತಪ್ಪು
ಬೆಂಗಳೂರು, ಸೆ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷಗಳ ಸಭೆ ವಿಧಾನಸೌಧದಲ್ಲಿ ಬುಧವಾರ (ಸೆ 21) ಮುಕ್ತಾಯಗೊಂಡಿದೆ. ಜವಾಬ್ದಾರಿಯುತ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ತನ್ನ 'ಗುರುತರ' ಜವಾಬ್ದಾರಿಯನ್ನು ಮೆರೆತಿದೆ.
ಕಾವೇರಿ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಅಥವಾ ಕಾವೇರಿ ನೀರು ಕುಡಿಯುವ ಬಿಜೆಪಿಯ ಯಾವ ಶಾಸಕರಾಗಲಿ, ಸಂಸದರಾಗಲಿ, ಕೇಂದ್ರ ಸಚಿವರಾಗಲಿ ಸಭೆಯಲ್ಲಿ ಭಾಗವಹಿಸದೇ, ರಾಜ್ಯದ ಹಿತದೃಷ್ಟಿಯಲ್ಲಿ ಐಕ್ಯತೆ ಪ್ರದರ್ಶಿಸಬೇಕಾದ ಜಾಗದಲ್ಲಿ ಎಡವಿದ್ದಾರೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. (ಕೊನೆಗೂ ಸಿದ್ದು ಸರಕಾರದ ದಿಟ್ಟ ನಿರ್ಧಾರ)
ಬುಧವಾರ ಬೆಳಗ್ಗೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವ ನಿಲುವು ತಳೆದಿದ್ದ ಜೆಡಿಎಸ್, ಕೊನೆಗೆ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದೆ. ವೈಎಸ್ವಿ ದತ್ತಾ, ಕುಮಾರಸ್ವಾಮಿ, ಹೊರಟ್ಟಿ, ಶರವಣ ಮುಂತಾದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
1996ರ ನಂತರ ಮೊದಲ ಬಾರಿಗೆ ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಭಾಗವಹಿಸಿ, ಮೂವತ್ತು ನಿಮಿಷಗಳ ಕಾಲ ತನ್ನ ಅಪಾರ ಅದರಲ್ಲೂ ಕಾವೇರಿ ಭಾಗದ ಅಣೆಕಟ್ಟಿನ ಬಗೆಗಿನ ಜ್ಞಾನವನ್ನು ಹೊರಗೆಡವಿದ್ದಾರೆ. (ಪ್ರಾಣ ಹೋದರೂ ನೀರು ಬಿಡಬೇಡಿ)
ಮೊದಲೇ, ಪ್ರಧಾನಿ ಮೋದಿ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎನ್ನುವ ಆ ಭಾಗದ ಜನರ ನೋವಿನ ಬೆಂಕಿಗೆ, ಇಂದು ಬಿಜೆಪಿ ಸರ್ವಪಕ್ಷ ಸಭೆಯಲ್ಲಿ ಗೈರಾಗಿ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಮುಂದೆ ಓದಿ..

ಯಡಿಯೂರಪ್ಪ ನಿಲುವು
ಮುಖ್ಯಮಂತ್ರಿಗಳು ಕರೆಯುವ ಯಾವುದೇ ಸಭೆಯಲ್ಲಿ ಬಿಜೆಪಿ ಭಾಗವಹಿಸುವುದಿಲ್ಲ ಎನ್ನುವ ಕಠಿಣ ನಿಲುವಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಬಂದಿದ್ದಾರೆ. ಸಭೆಯಲ್ಲಿ ನಮ್ಮ ಮಾತಿಗೆ ಬೆಲೆಯಿಲ್ಲ ಎಂದಾದ ಮೇಲೆ ನಾವ್ಯಾಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಯಡಿಯೂರಪ್ಪ ಬುಧವಾರ ಗುಡುಗಿದ್ದಾರೆ.

ಪ್ರಧಾನಿ ಮಧ್ಯಸ್ಥಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎನ್ನುವ ಯಡಿಯೂರಪ್ಪನವರ ಈ ಹಿಂದಿನ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಜೊತೆಗೆ ಇಂದಿನ ಸಭೆಯಲ್ಲಿ ಬಿಜೆಪಿ ಭಾಗವಹಿಸದೇ ಇದ್ದದ್ದು ಪಕ್ಷಕ್ಕೆ ಮುಜುಗರ ತಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಜಗದೀಶ್ ಶೆಟ್ಟರ್
ಕಳೆದ ಸರ್ವಪಕ್ಷ ಸಭೆಯಲ್ಲಿ ನಾವು ಭಾಗವಹಿಸಿದ್ದೆವು. ನಾವು ನಿಮ್ಮ ಜೊತೆಗಿದ್ದೇವೆ, ನೀರು ಬಿಡಬೇಡಿ ಎಂದು ಒಕ್ಕೂರಿಲಿನ ತೀರ್ಮಾನಕ್ಕೆ ಬರಲಾಗಿತ್ತು. ಆದರೂ, ತಮಿಳುನಾಡಿಗೆ ನೀಡು ಬಿಡಲಾಗಿತ್ತು. ಈಗ ನಾವು ಯಾಕೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಕು ಎನ್ನುವುದು ಜಗದೀಶ್ ಶೆಟ್ಟರ್ ವಾದ.

ಸದಾನಂದ ಗೌಡ
ಸರ್ವಪಕ್ಷ ಸಭೆಯಲ್ಲಿ ನಾವು ಭಾಗವಹಿಸುವುದಿಲ್ಲ, ಕೇಂದ್ರ ಜಲಸಂಪನ್ಮೂಲ ಖಾತೆಯ ಸಚಿವೆ ಉಮಾಭಾರತಿಯವರ ಬಳಿ ನಮ್ಮ ರಾಜ್ಯ ಎದುರಿಸುತ್ತಿರುವ ತೊಂದರೆಯ ಬಗ್ಗೆ ವಿವರಿಸುತ್ತೇವೆ ಎನ್ನುವುದು ಕಾವೇರಿ ನೀರೇ ಜೀವಾಳವಾಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಮೋದಿ ಭೇಟಿ ಮಾಡಿದ ಬಿಜೆಪಿ ಸಚಿವರು
ಕೇಂದ್ರ ಸಚಿವರಾದ ಅನಂತ್ ಕುಮಾರ್, ನಿರ್ಮಲಾ ಸೀತರಾಮನ್ ಮತ್ತು ಸದಾನಂದ ಗೌಡ, ಪ್ರಧಾನಿ ಮೋದಿಯವರನ್ನು ಬುಧವಾರ (ಸೆ 21) ಭೇಟಿ ಮಾಡಿ ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ.

ಬಿಜೆಪಿ ಭಾಗವಹಿಸಬೇಕಾಗಿತ್ತು
ಹಿಂದಿನ ಸರ್ವಪಕ್ಷ ಸಭೆಯಲ್ಲಿನ ನಿರ್ಣಯ ಏನೇ ಆಗಿರಲಿ, ಬಿಜೆಪಿ ರಾಜ್ಯದ ಐಕ್ಯತೆಯ ದೃಷ್ಟಿಂದ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಆ ಮೂಲಕ ರಾಜ್ಯದ ಐಕ್ಯತೆ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಂದೇ, ಸರಕಾರಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆಯೆಂದು ತೋರಿಸಬೇಕಾಗಿತ್ತು ಎನ್ನುವುದು ಸಾರ್ವಜನಿಕ ಅಭಿಪ್ರಾಯ.












Click it and Unblock the Notifications