Muda Scam: ಸಿದ್ದರಾಮಯ್ಯ ವಿರುದ್ಧದ ಪ್ರಕರಣ: ಸೆಪ್ಟೆಂಬರ್ 2ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು ಆಗಸ್ಟ್ 21: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸಿಎಂ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆಯನ್ನು ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ. ಹೀಗಾಗಿ ಸದ್ಯಕ್ಕೆ ಬೀಸೆ ದೊಣ್ಣೆಯಿಂದ ಸಿಎಂ ಸಿದ್ದರಾಮಯ್ಯ ಅವರು ಪಾರಾದಂತಾಗಿದೆ.
ದೂರಿನ ಬಗ್ಗೆ ವಿಚಾರಣೆ ಮಾಡಿದ ನ್ಯಾಯಧೀಶ ಗಜಾನನ ಭಟ್ ಅವರಿದ್ದ ಪೀಠ, ಸಾಕಷ್ಟು ವಾದ ಪ್ರತಿವಾದಗಳ ಬಳಿಕ ಆಗಸ್ಟ್ 20ಕ್ಕೆ ಆದೇಶ ಕಾಯ್ದಿರಿಸಿತ್ತು. ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದರಿಂದ ಅದಕ್ಕೆ ತಡೆ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆ.20ರಂದು ಜನಪ್ರತಿನಿಧಿಗಳ ನ್ಯಾಯಾಲಯ ಯಾವುದೇ ಈ ದೂರಿನ ಸಂಬಂಧ ಯಾವುದೇ ತೀರ್ಪು ನೀಡಬಾರದು ಎಂದು ನಿರ್ದೇಶಿಸಿ ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಿತ್ತು.

ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಿಂ ಕೂಡ ಜನಪ್ರತಿನಿಧಿಗಳ ಕೋರ್ಟ್ಗೆ ಖಾಸಗಿ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ದೂರಿನ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 21ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿತ್ತು. ಆದರೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ದೂರುದಾರ ಅಬ್ರಾಹಂ ಬುಧವಾರ ಹೈಕೋರ್ಟ್ ಆದೇಶ ಪ್ರತಿಯನ್ನು ಜನಪ್ರತಿನಿಧಿಗಳ ಕೋರ್ಟ್ಗೆ ಸಲ್ಲಿಸಲಿದ್ದಾರೆ. ಹೀಗಾಗಿ ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 2ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಮುಡಾ ಹಗರಣದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಲಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬ ಸಾಮಾಜಿಕ ಕಾರ್ಯಕರ್ತರು ಖಾಸಗಿ ದೂರನ್ನು ನೀಡಿದ್ದಾರೆ. ಈ ದೂರು ಸದ್ಯ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕುತ್ತು ತಂದಿದೆ.
ದೂರುದಾರರ ಪರವಾಗಿ ವಕೀಲರಾದ ಲಕ್ಷ್ಮೀ ಅಯ್ಯಂಗಾರ್ ಅವರು ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ತಕ್ಷಣವೇ ಪ್ರಾಸಿಕ್ಯೂಷನ್ ಅಗತ್ಯವಿಲ್ಲ. ಅಲ್ಲದೆಯೇ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬಹುದು ಎಂಬ ವಾದವನ್ನು ಮಂಡಿಸಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶವನ್ನು ಕೂಡಾ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದರು. ಇದೇ ವಿಚಾರವಾಗಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನ್ನಣ್ಣ ಮಾತನಾಡಿ, ಕಾನೂನು ಬಹಳ ಸ್ಪಷ್ಟವಾಗಿದೆ. ಅಶೋಕ್ ಕುಮಾರ್ v/s ರಾಜ್ಯ ಸರ್ಕಾರ ಪ್ರಕರಣ ಆಧರಿಸಿ ಯಾವುದೇ ಒಬ್ಬ ಸರ್ಕಾರಿ ಸೇವಕನ ಮೇಲೆ ಭ್ರಷ್ಟಾಚಾರ ನಿಗ್ರಹ ಕಾನೂನಿನ ಅಡಿ ಕೇಸ್ ದಾಖಲಿಸಲು ಅನುಮತಿ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಹೀಗಾಗಿ ಸ್ನೇಹಮಹಿ ಕೃಷ್ಣ ದೂರು, ಅಬ್ರಹಾಂ ದೂರು ಎರಡೂ ದೂರನ್ನು ಪರಿಗಣಿಸಲು ಸಾಧ್ಯವಿಲ್ಲ. ಮೆರಿಟ್ ಮೇಲೂ ಕೂಡ ಎರಡೂ ದೂರನ್ನು ಪರಿಗಣಿಸುವ ಅಂಶಗಳಿಲ್ಲ. ಅಪರಾಧದ ಅಂಶಗಳನ್ನು ಪರಿಗಣಿಸಲು ಬೇಕಾಗುವ ಅಂಶಗಳೇ ಇಲ್ಲ. ಹೀಗಾಗಿ ಕೋರ್ಟ್ ತೀರ್ಮಾನದ ಮೇಲೆ ಮುಂದಿನ ಹೋರಾಟ ರೂಪಿಸಬೇಕಾಗುತ್ತದೆ ಎಂದಿದ್ದರು. ರಾಜಕೀಯ ಆರೋಪ ಬೇರೆ, ಕಾನೂನು ಅಡಿಯಲ್ಲಿ ದೂರುಗಳು ಬೇರೆ ಎಂದು ಅವರು ಹೇಳಿದ್ದಾರೆ. ಆದರೀಗ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದ್ದು ಸೆಪ್ಟೆಂಬರ್ 2ಕ್ಕೆ ವಿಚಾರಣೆ ಮುಂದೂಡಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.












Click it and Unblock the Notifications