JDS Hit Back PM Modi: ಕನ್ನಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ: ಮೋದಿಗೆ ಜೆಡಿಎಸ್ ತಿರುಗೇಟು
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ವಿಧಾನಸಭಾ ಚುನಾವಣೆ ಚುನಾವಣೆ ಹಿನ್ನೆಲೆಯಲ್ಲಿ ಸರಣಿ ಚುನಾವಣಾ ರ್ಯಾಲಿ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ತಿರುಗೇಟು ನೀಡಿದೆ.
ಹಳೆ ಮೈಸೂರು ಭಾಗದಲ್ಲಿ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿರುವ ಬಿಜೆಪಿ ಎಚ್ಡಿ ಕುಮಾರಸ್ವಾಮಿ ಅವರ ಕ್ಷೇತ್ರ ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಅವರನ್ನು ಕರೆತರಲು ಮುಂದಾಗಿರುವ ಬೆನ್ನಲ್ಲೇ ಜೆಡಿಎಸ್ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

ಕರ್ನಾಟಕಕ್ಕೆ ನೆರೆ ಬಂದಾಗ ನಿರ್ಲಕ್ಷಿಸಿ, ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊಡಲು ನಿರಾಕರಿಸಿ, ನಮ್ಮ ಪಾಲಿನ ತೆರಿಗೆ, ಜಿಎಸ್ಟಿ ಕೊಡದೆ ಸತಾಯಿಸಿ ರಾಜ್ಯ ನೆನಪಿಸಿಕೊಳ್ಳದ ಪ್ರಧಾನಿ ಮೋದಿಯವರಿಗೆ ಚುನಾವಣೆ ಬಂದಾಗ ಮಾತ್ರ ಎಲ್ಲಿಲ್ಲದ ಅತ್ಯುತ್ಸಾಹ. ಹಳೆ ಮೈಸೂರು ಭಾಗವೇ ಈ ಸಲ ಬಿಜೆಪಿಗೆ ದೊಡ್ಡ ಗುರಿ ಅಂತೆಲ್ಲ ಮಾಧ್ಯಮ ವರದಿ ಮಾಡುತ್ತಿದೆ.
ಇದೇ ಕಾರಣಕ್ಕೆ ಮೋದಿಯವರು ರ್ಯಾಲಿ, ಪ್ರಚಾರ ಸಭೆಗಳನ್ನು ಚನ್ನಪಟ್ಟಣ ಸೇರಿ ಹಳೆಮೈಸೂರಿನ ಕೆಲವು ಭಾಗಗಳಲ್ಲಿ ಮಾಡಲಿದ್ದಾರಂತೆ.ಸ್ವಂತ ಶಕ್ತಿ,ಕೆಲಸಗಳ ಆಧಾರದಲ್ಲಿ ಗೆಲ್ಲಲು ಆಗದ ಗುಲಾಮಿ ಮನಸ್ಥಿತಿಯ ಅಭ್ಯರ್ಥಿಗಳಿಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಇಡಿಯಾಗಿ ಬಂದರೂ ಅಷ್ಟೆ,ಈ ಸಲದ ಚುನಾವಣೆಯಲ್ಲಿ ಕನ್ನಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ.
ಮೋದಿಯವರು ಬಂದರು ಎಂಬ ಕಾರಣಕ್ಕೆ ಯಾವ ದೊಡ್ಡ ಬದಲಾವಣೆಯೂ ಸಾಧ್ಯವಿಲ್ಲ. ಅತ್ಯಂತ ಬೇಜವಾಬ್ದಾರಿ ಮತ್ತು ಹೇಸಿಗೆ ಆಡಳಿತ ನೀಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಜನಾಕ್ರೋಶ ಕುದಿಯುತ್ತಿದೆ. ಇವರ ಅಟ್ಟಹಾಸಕ್ಕೆ, ದುರಹಂಕಾರಕ್ಕೆ, ದುರಾಡಳಿತಕ್ಕೆ ಕಪಾಳಮೋಕ್ಷ ಮಾಡಲು ಕನ್ನಡಿಗರು ಸಜ್ಜಾಗಿದ್ದಾರೆ. ಯಾರ ಪ್ರಭಾವವೂ ಏನೂ ಮಾಡಲಾಗದು ಎಂದು ವಾಗ್ದಾಳಿ ಮಾಡಿದೆ.

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕರ್ನಾಟಕದ ಜನತೆಗೆ ಮೋದಿ ಆಶೀರ್ವಾದ ಬೇಕಿದ್ದರೆ ಬಿಜೆಪಿಗೆ ಮತ ಹಾಕಬೇಕು ಎಂದು ಹೇಳಿದ್ದರು. ಅದಕ್ಕೆ ಅಧಿಕಾರದ ಮದ ಏರಿದಾಗ, ಒಕ್ಕೂಟ ತತ್ವದ ಮಹತ್ವ ಮರೆತುಹೋಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮಾತಿನ ಹಿಂದೆ ಇರುವುದು ಇದೇ ಸರ್ವಾಧಿಕಾರಿ ಧೋರಣೆ. ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ಕರ್ನಾಟಕವು ವಂಚಿತರಾಗದೇ ಇರಬೇಕೆಂದರೆ ಬಿಜೆಪಿಗೆ ಮತ ಚಲಾಯಿಸಿ ಎಂದು ಹೇಳುವುದು ನಿಜಕ್ಕೂ ಖಂಡನೀಯ ಎಂದು ಜೆಡಿಎಸ್ ಹೇಳಿತ್ತು.
ಅಲ್ಲದೆ ಎಲ್ಲ ಅಧಿಕಾರವು ಸಾರ್ವಜನಿಕ ಸೇವೆಗೆ ಇರುವಂತದ್ದು.ಜನತೆಯ ಮೇಲೆ ಸವಾರಿ ಮಾಡುವುದಕ್ಕಲ್ಲ.ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯ ಇದ್ದಾಗ ಮಾತ್ರ ಅಭಿವೃದ್ಧಿ,ಒಕ್ಕೂಟ ವ್ಯವಸ್ಥೆ ಸರಾಗವಾಗಿ ಮುಂದುವರಿಯಲು ಸಾಧ್ಯ. ಪ್ರಧಾನಿಯವರ ಆಶೀರ್ವಾದ ಎಂಬ ಪದಗಳೇ ಇವರ ಹೀನ ಮನಸ್ಥಿತಿ ಬಗ್ಗೆ ತಿಳಿಸುತ್ತದೆ ಎಂದು ಹೇಳಿತ್ತು.
ಒಂದು ವೇಳೆ ರಾಜ್ಯದ ಜನತೆ ಬಿಜೆಪಿ ಗೆ ಮತ ಚಲಾಯಿಸದೆ, ಅಧಿಕಾರದಿಂದ ಇಳಿಸಿದರೆ ಆಗ ಪ್ರಧಾನಿಯವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಯೇ? ಇಂತಹ ಅಪಾಯಕಾರಿ ಒಳಮರ್ಮದ ಮಾತುಗಳು ರಾಷ್ಟ್ರೀಯ ಪಕ್ಷದ ಅಧ್ಯಕ್ಷನಿಂದ ಬರಬಾರದಿತ್ತು. ಇವರ ದುರಹಂಕಾರಕ್ಕೆ ಜನತೆಯೇ ಉತ್ತರ ನೀಡಲಿದ್ದಾರೆ. ಆರುವ ಮುನ್ನ ದೀಪ ಜೋರಾಗಿ ಉರಿಯುತ್ತದಂತೆ! ಎಂದು ವಾಗ್ದಾಳಿ ಮಾಡಿತ್ತು.











Click it and Unblock the Notifications