ಸಂಪುಟ ಸಭೆ ನಿರ್ಣಯಗಳು: ಉ.ಕರ್ನಾಟಕ ಮತ್ತು ಸಿದ್ದರಾಮಯ್ಯಗೆ ಆದ್ಯತೆ!
ಬೆಳಗಾವಿ, ಡಿಸೆಂಬರ್ 20: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಬಹು ಮಹತ್ವದ ನಿರ್ಣಯಗಳನ್ನು ಸಂಪುಟ ಸಚಿವರು ತೆಗೆದುಕೊಂಡರು.
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಪ್ರಮುಖ 9 ಸರ್ಕಾರಿ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಹಲವು ಜಿಲ್ಲೆಗಳಿಗೆ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಲಾಗಿದೆ.
ಅಧಿವೇಶನ ಆರಂಭಕ್ಕೂ ಮುನ್ನವೇ ಅಧಿವೇಶನ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾಧಾನ್ಯತೆ ನೀಡುವ ಯೋಜನೆಗಳನ್ನು ಘೋಷಿಸಲಾಗುತ್ತದೆ ಎನ್ನಲಾಗಿತ್ತು. ಅದರಂತೆ ಈ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ.
ಯಾವ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ತೀರ್ಮಾನಿಸಲು ಸದನ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ಆಧರಿಸಿ 9 ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಬೆಳಗಾವಿಯ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರಿಸಲು ವಿಧಾನಸಭೆ ಹಾಗೂ ಪರಿಷತ್ ಸಭಾಧ್ಯಕ್ಷರ ಒಪ್ಪಿಗೆ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಿದ್ದರಾಮಯ್ಯ ಕ್ಷೇತ್ರಕ್ಕೆ 350 ಕೋಟಿ
ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುಷ್ಠಾನಕ್ಕೆ 350 ಕೋಟಿ ರೂಪಾಯಿ ನೀಡಲು ಸಹ ಸಂಪುಟ ಒಪ್ಪಿಕೊಂಡಿದೆ. ಹೊಳೆ ನರಸೀಪುರ ಮಾವಿನಕೆರೆ ರೈಲು ನಿಲ್ದಾಣ ನಡುವೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣಕ್ಕೆ 15.9 ಕೋಟಿ ನೀಡಲಾಗುತ್ತದೆ.

ಶಿಕ್ಷಣ ಸಂಸ್ಥೆಗೆ ಸರ್ಕಾರಿ ಜಮೀನು
ಚಿಕ್ಕಮಗಳೂರು ಜಿಲ್ಲೆ ಖಾಡ್ಯ ಹೋಬಳಿಯ ದೇವದಾನ ಗ್ರಾಮದಲ್ಲಿ ಅದಮಾರು ಸಂಸ್ಥೆಗೆ ಗುತ್ತಿಗೆ ನೀಡಿರುವ 18 ಎಕರೆ ಜಾಗವನ್ನು ಅದೇ ಸಂಸ್ಥೆಗೆ ಖಾಯಂ ಆಗಿ ಮಂಜೂರು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. 1100 ಕೋಟಿ ರೂಪಾಯಿ ವೆಚ್ಚದಲ್ಲಿ 17 ಲಕ್ಷ ಟನ್ ಸಂಗ್ರಹ ಸಾಮರ್ಥ್ಯ ಇರುವ ಏಳು ವೇರ್ಹೌಸ್ಗಳನ್ನು ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಜಯದೇವ ಆಸ್ಪತ್ರೆ ಹೊಸ ಘಟಕಕ್ಕೆ 50 ಕೋಟಿ
ಜಯದೇವ ಆಸ್ಪತ್ರೆಯ ಹೊಸ ಘಟಕಕ್ಕೆ 50 ಕೋಟಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಗೋಕಾಕ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಆರ್ಸಿಸಿ ಚರಂಡಿ ನಿರ್ಮಾಣಕ್ಕೆ 16.85 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಗೈರು
ಮಾಮೂಲಿನಂತೆ ಸಚಿವ ರಮೇಶ್ ಜಾರಕಿಹೊಳಿ ಅವರು ಸಂಪುಟ ಸಭೆಗೆ ಗೈರಾಗಿದ್ದರು. ಅವರು ಬಹುತೇಕ ಸಂಪುಟ ಸಭೆಗಳಿಗೆ ಗೈರಾಗಿದ್ದಾರೆ. ಮೊನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಗೈರಾಗಿದ್ದರು.












Click it and Unblock the Notifications