ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ!
ಬೆಂಗಳೂರು, 08: ಕೇಂದ್ರ ಸರ್ಕಾರ ಅನುಮೋದಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದ ಸಾಂಸ್ಕೃತಿಕ ಅವಶ್ಯಕತೆಗಳಿಗೆ ಒಗ್ಗೂಡುವ ರೀತಿಯಲ್ಲಿ ತಯಾರಿಸಲಾದ ರಾಜ್ಯದ ಕಾರ್ಯಪಡೆ ಸಲ್ಲಿಸಿರುವ ವರದಿಗೆ ಸಂಪುಟ ತಾತ್ವಿಕ ಅನುಮೋದನೆ ನೀಡಿದ್ದು, ಇದು ಶಾಲಾ ಶಿಕ್ಷಣದಲ್ಲಿ ಹೊಸ ಶಕೆಗೆ ನಾಂದಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಪುಟ ಅನುಮೋದನೆ ನೀಡಿದ ನಂತರ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕರ್ನಾಟಕ ಶಿಕ್ಷಣ ಆಯೋಗ ಸ್ಥಾಪನೆ ಸೇರಿದಂತೆ ಶಾಲಾ ಆಡಳಿತ, ನಿಯಂತ್ರಣ ನಿರ್ಣಯಗಳನ್ನು ತೆಗೆದುಕೊಳ್ಳುವಿಕೆ ಮತ್ತು ಶೈಕ್ಷಣಿಕ ಆಯಾಮಗಳ ಕುರಿತು ಮೌಲ್ಯಮಾಪನಗಳಿಗಾಗಿ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪನೆ ಸೇರಿದಂತೆ ಹಲವು ವೈಶಿಷ್ಟ್ಯಗಳ ಹಿನ್ನೆಲೆಯಲ್ಲಿ ಮಂದಿನ ದಿನಗಳಲ್ಲಿ ಶಾಲಾ ಶಿಕ್ಷಣದ ಚಿತ್ರಣವನ್ನೇ ಸಂಪೂರ್ಣವಾಗಿ ಪರಿವರ್ತಿಸಲಿದ್ದು, ಶಾಲಾಡಳಿತ ಮತ್ತು ಶೈಕ್ಷಣಿಕ ಆಯಾಮಗಳಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
Recommended Video
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆಕರ್ನಾಟಕ ಶಾಲಾ ಶಿಕ್ಷಣ ಕೌನ್ಸಿಲ್ (ಕೆಎಸ್ಇಸಿ) ಮತ್ತು ಸ್ಟೇಟ್ ಸ್ಕೂಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎಸ್ಎಸ್ಎಸ್ಎ) ಸ್ಥಾಪನೆ, ಡಿಎಸ್ಇಆರ್ಟಿ ಪುನರ್ವಿನ್ಯಾಸ, ಆದರ್ಶ, ಮೊರಾರ್ಜಿ, ಕೆಜಿಬಿವಿ, ಕೆಪಿಎಸ್ ಮುಂತಾದ ಶಾಲಾ ಮಾದರಿಗಳನ್ನು ಶಾಲಾ ಸಂಕೀರ್ಣಗಳಾಗಿ ಬದಲಾವಣೆ, ವಿಶೇಷ ಶೈಕ್ಷಣಿಕ ವಲಯಗಳ -ಎಸ್ ಇ ಝಡ್ ಸ್ಥಾಪನೆ, ದಿವ್ಯಾಂಗ ವಿದ್ಯಾರ್ಥಿ ವೇತನ, ಶಿಕ್ಷಕರ ನೇಮಕಾತಿ, ಸೇವಾ ನಿಯಮಗಳು ಮತ್ತು ವೃತ್ತಿ ಪ್ರಗತಿಗಾಗಿ ಸೇವಾ ನಿಯಮಗಳ ಬದಲಾವಣೆ, ಗುರುಚೇತನ ಮಾದರಿಯನ್ನು ನಿರಂತರ ವೃತ್ತಿ ಅಭಿವೃದ್ಧಿಗಾಗಿ ವೇದಿಕೆಯನ್ನಾಗಿ ಬಳಸಿಕೊಳ್ಳವುದು ಸೇರಿದಂತೆ ಹಲವಾರು ಮಾರ್ಪಾಟುಗಳನ್ನು ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.