ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, ಯಾರಿಗೆ ಸಚಿವ ಸ್ಥಾನದ ಭಾಗ್ಯ?
ಬೆಂಗಳೂರು, ಆಗಸ್ಟ್ 12 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಯಾವಾಗ?. ಆಡಳಿತ ಪಕ್ಷದ ಶಾಸಕರು ಸಚಿವರಾಗಲು ಕಾದು ಕುಳಿತಿದ್ದಾರೆ. ಪ್ರತಿಪಕ್ಷದ ನಾಯಕರು ಕೂಡಾ ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿ 12 ದಿನಗಳು ಕಳೆದಿವೆ. ಆದರೆ, ಇನ್ನೂ ಸಂಪುಟ ವಿಸ್ತರಣೆ ಮಾಡಿಲ್ಲ. ಕರ್ನಾಟಕದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದೆ. ಯಾವ ಸಚಿವರೂ ಇರದ ಕಾರಣ ಯಡಿಯೂರಪ್ಪ ಏಕಾಂಗಿಯಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ.
ಸಚಿವರಾಗುವ ಶಾಸಕರ ಆಸೆಗೆ ನೀರು ಸುರಿದ ಆಶ್ಲೇಷ ಮಳೆ!
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದರು. ಆದರೆ, ಹೈಕಮಾಂಡ್ ನಾಯಕರು ಲೋಕಸಭಾ ಕಲಾಪದಲ್ಲಿ ಬ್ಯುಸಿಯಾಗಿದ್ದರು. ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನದಿಂದಾಗಿ ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದೇ ಯಡಿಯೂರಪ್ಪ ವಾಪಸ್ ಬಂದಿದ್ದಾರೆ.
ಯಡಿಯೂರಪ್ಪ ಸಂಪುಟ : ಹೈಕಮಾಂಡ್ ಬಳಿ 3 ಪಟ್ಟಿ!
ಹೈಕಮಾಂಡ್ ನಾಯಕರು ಮೊದಲು ರಾಜ್ಯದ ಪ್ರವಾಹ ಪರಿಸ್ಥಿತಿಯತ್ತ ಗಮನ ಹರಿಸಿ. ಆಗಸ್ಟ್ 15ರ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಗಮನ ಹರಿಸೋಣ ಎಂದು ಯಡಿಯೂರಪ್ಪಗೆ ಸಂದೇಶ ನೀಡಿದ್ದರು. ಆದ್ದರಿಂದ, ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ಯಡಿಯೂರಪ್ಪ ಸಂಪುಟ : ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ
ಯಡಿಯೂರಪ್ಪ ಹೇಳಿವುದೇನು?
ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, "ಆಗಸ್ಟ್ 16 ರ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ದೆಹಲಿಗೆ ತೆರಳಿ ಪಕ್ಷದ ವರಿಷ್ಟರ ಜೊತೆ ಮಾತುಕತೆ ನಡೆಸಿದ ಬಳಿಕ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಮಿತ್ ಶಾ ಸಹ ಸೂಚನೆ ನೀಡಿದ್ದಾರೆ" ಎಂದು ಹೇಳಿದರು.
ಅಮಿತ್ ಶಾ, ಯಡಿಯೂರಪ್ಪ ಭೇಟಿ
ಭಾನುವಾರ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬೆಳಗಾವಿಗೆ ಬಂದಿದ್ದರು. ಆಗ ಯಡಿಯೂರಪ್ಪಗೆ ಸಂಪುಟ ವಿಸ್ತರಣೆ ಬಗ್ಗೆ ಸೂಚನೆ ನೀಡಿದ್ದು, ಆಗಸ್ಟ್ 16ರ ಬಳಿಕ ದೆಹಲಿಗೆ ಬರುವಂತೆ ಸೂಚನೆ ಕೊಟ್ಟಿದ್ದಾರೆ.
ಎರಡು ಹಂತದಲ್ಲಿ ಸಂಪುಟ ವಿಸ್ತರಣೆ
ಒಟ್ಟು 2 ಹಂತದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಮೊದಲ ಹಂತದಲ್ಲಿ 10ಕ್ಕೂ ಹೆಚ್ಚು ಹಿರಿಯ ಶಾಸಕರು ಸಂಪುಟ ಸೇರಲಿದ್ದಾರೆ. 2ನೇ ಹಂತದಲ್ಲಿ ಅನರ್ಹ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಸ್ಪೀಕರ್ ಆದೇಶವನ್ನು ಪ್ರಶ್ನೆ ಮಾಡಿದ್ದಾರೆ.
ಹೈಕಮಾಂಡ್ ಬಳಿ 3 ಪಟ್ಟಿ
ಯಡಿಯೂರಪ್ಪಗೆ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಯಡಿಯೂರಪ್ಪ ನೀಡಿದ ಪಟ್ಟಿಯು ಸೇರಿ 3 ಪಟ್ಟಿಗಳು ಹೈಕಮಾಂಡ್ ಬಳಿ ಇವೆ. ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿದ ಬಳಿಕ ಈ ಪಟ್ಟಿ ಇಟ್ಟುಕೊಂಡು ಚರ್ಚೆ ನಡೆಸಲಾಗುತ್ತದೆ.