ಎಚ್.ಡಿ.ಕುಮಾರಸ್ವಾಮಿ ಸಂಪುಟ : ಯಾವ ಖಾತೆ ಯಾರಿಗೆ?
Recommended Video
ಬೆಂಗಳೂರು, ಮೇ 29 : ಕರ್ನಾಟಕ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಇಂದು ಬಗೆಹರಿಯುವ ಸಾಧ್ಯತೆ ಇದೆ. ಬುಧವಾರ ಅಥವ ಗುರುವಾರ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್-ಜೆಡಿಎಸ್ ಬಯಸಿವೆ. ಖಾತೆ ಹಂಚಿಕೆ ಬಿಕ್ಕಟ್ಟು ಇಂದು ಬಗೆಹರಿಯುವ ಸಾಧ್ಯತೆ ಇದೆ.
ಹಣಕಾಸು ಖಾತೆ ಹಂಚಿಕೆ ವಿಚಾರದಲ್ಲಿ ಭಾರೀ ಹಗ್ಗ-ಜಗ್ಗಾಟ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಎಚ್.ಡಿ.ದೇವೇಗೌಡರ ಜೊತೆ ಚರ್ಚೆ ನಡೆಸಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ತಿಳಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿ
ಹಣಕಾಸು, ಗೃಹ ಎರಡೂ ಖಾತೆಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದರೆ ಜೆಡಿಎಸ್ ಬಳಿ ಮುಖ್ಯಮಂತ್ರಿ ಹುದ್ದೆ ಇದ್ದೂ ಪ್ರಯೋಜನವಿಲ್ಲ. ಗೃಹ ಖಾತೆಯನ್ನು ನಿಮಗೆ ನೀಡುತ್ತೇವೆ. ಹಣಕಾಸು ಖಾತೆಯನ್ನು ನಮಗೆ ಕೊಡಿ ಎಂದು ಜೆಡಿಎಸ್ ಬೇಡಿಕೆ ಇಟ್ಟಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗುವವರು ಯಾರು?, ಪಟ್ಟಿ!
ಕಾಂಗ್ರೆಸ್-ಜೆಡಿಎಸ್ ಸಂಭಾವ್ಯ ಖಾತೆ, ಸಚಿವರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದೆ. ಮಂಗಳವಾರ ಸಂಜೆ ಅಥವ ಬುಧವಾರ ಖಾತೆ ಹಂಚಿಕೆ ಬಿಕ್ಕಟ್ಟು, ಬಗೆಹರಿದು ಈ ವಾರವೇ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ...ಯಾರಿಗೆ ಯಾವ ಖಾತೆ ಇಲ್ಲಿದೆ ಪಟ್ಟಿ...
ಸಂಪುಟ ವಿಸ್ತರಣೆ : ಕಾಂಗ್ರೆಸ್ ಬೇಡಿಕೆ ಇಟ್ಟಿರುವ 5 ಖಾತೆಗಳು!
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳು. ಸಿಎಂ ಬಳಿ ಗುಪ್ತಚರ ಖಾತೆ ಇರುತ್ತದೆ. ಉಳಿದಂತೆ ಹಣಕಾಸು, ಡಿಎಪಿಆರ್ ಖಾತೆಯನ್ನು ಕುಮಾರಸ್ವಾಮಿ ಅವರ ಬಳಿ ಇಟ್ಟುಕೊಳ್ಳಲಿದ್ದಾರೆ.
ಡಾ.ಜಿ.ಪರಮೇಶ್ವರ ಕೈಗೆ ಗೃಹ ಖಾತೆ
ಸರ್ಕಾರದಲ್ಲಿ ಮುಖ್ಯಮಂತ್ರಿ ಬಿಟ್ಟರೆ 2ನೇ ಸ್ಥಾನ ಗೃಹ ಇಲಾಖೆಗೆ. ರಾಜ್ಯದ ಶಾಂತಿ-ಸುವ್ಯವಸ್ಥೆ ಕಾಪಾಡುವ ಹೊಣೆ ಗೃಹ ಸಚಿವರ ಮೇಲಿರುತ್ತದೆ. ಗೃಹ ಖಾತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಗೃಹ ಸಚಿವರಾಗಲಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಪರಮೇಶ್ವರ ಅವರು ಕೆಲವು ತಿಂಗಳು ಗೃಹ ಖಾತೆ ಸಚಿವರಾಗಿದ್ದರು.
ಕಂದಾಯ ಇಲಾಖೆ
ಸರ್ಕಾರದಲ್ಲಿ ಕಂದಾಯ ಇಲಾಖೆಗೆ ಹೆಚ್ಚಿನ ಮಹತ್ವವಿದೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಖಾತೆ ಇದಾಗಿದೆ. ಕಂದಾಯ ಖಾತೆ ಜೆಡಿಎಸ್ಗೆ ಬರಲಿದೆ. ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು ಕಂದಾಯ ಖಾತೆ ಸಚಿವರಾಗುವ ಸಾಧ್ಯತೆ ಇದೆ.
ಲೋಕೋಪಯೋಗಿ ಖಾತೆ
ಸರ್ಕಾರದ ಮತ್ತೊಂದು ಮಹತ್ವದ ಖಾತೆ ಲೋಕೋಪಯೋಗಿ. ಈ ಖಾತೆ ಸಹ ಜೆಡಿಎಸ್ಗೆ ಒಲಿಯುವ ಸಾಧ್ಯತೆ ಇದೆ. ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಿಂದೆಯೂ ಅವರು ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಜೆಡಿಎಸ್ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಕೃಷಿ ಖಾತೆ ಯಾರಿಗೆ?
ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾದ ಬಂಡೆಪ್ಪ ಕಾಶೆಂಪೂರ ಅವರು ಕೃಷಿ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇಂಧನ ಖಾತೆ ಕಾಂಗ್ರೆಸ್ಗೆ
ಇಂಧನ ಖಾತೆ ಕಾಂಗ್ರೆಸ್ ಪಾಲಾಗಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿಯೂ ಅವರು ಇಂಧನ ಸಚಿವರಾಗಿದ್ದರು.
ಜಲ ಸಂಪನ್ಮೂಲ ಖಾತೆ
ಜಲಸಂಪನ್ಮೂಲ ಖಾತೆ ಕಾಂಗ್ರೆಸ್ಗೆ ಹೋಗಲಿದೆ. ಎಂ.ಬಿ.ಪಾಟೀಲ್ ಅಥವ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಖಾತೆಯ ಜವಾವ್ದಾರಿ ವಹಿಸಿಕೊಳ್ಳಲಿದ್ದಾರೆ. ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆಯ ಜವಾಬ್ದಾರಿ ಹೊತ್ತಿದ್ದರು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಮಂಡ್ಯದ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರಾಭಿವೃದ್ಧಿ ಖಾತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಜೆ.ಜಾರ್ಜ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಗೆ ಸಿಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಕೆ.ಜೆ.ಜಾರ್ಜ್ ಮೊದಲು ಗೃಹ ಸಚಿವರಾಗಿದ್ದರು. ಬಳಿಕ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹೊಣೆ ಹೊತ್ತಿದ್ದರು.
ಬೃಹತ್ ಕೈಗಾರಿಕೆ ಖಾತೆ
ಆರ್.ವಿ.ದೇಶಪಾಂಡೆ ಅವರಿಗೆ ಬೃಹತ್ ಕೈಗಾರಿಕಾ ಖಾತೆ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಹ ಅವರು ಪ್ರವಾಸೋದ್ಯಮ, ಬೃಹತ್ ಕೈಗಾರಿಕಾ ಖಾತೆ ಹೊಣೆ ನಿರ್ವಹಿಸಿದ್ದರು. ರಾಜ್ಯದಕ್ಕೆ ಬಂಡವಾಳವನ್ನು ಆಕರ್ಷಣೆ ಮಾಡಲು ಹೂಡಿಕೆದಾರರ ಸಮಾವೇಶವನ್ನು ನಡೆಸಿದ್ದರು.
ಯು.ಟಿ.ಖಾದರ್, ಡಾ.ಕೆ.ಸುಧಾಕರ್
ಆರೋಗ್ಯ ಇಲಾಖೆ ಕಾಂಗ್ರೆಸ್ ಪಾಲಾಗಲಿದೆ. ಯು.ಟಿ.ಖಾದರ್ ಅಥವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಆರೋಗ್ಯ ಖಾತೆಯ ಹೊಣೆಯನ್ನು ನಿರ್ವಹಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದರು.
ಬೊಕ್ಕಸಕ್ಕೆ ಆದಾಯ ತಂದು ಕೊಡುವ ಖಾತೆ
ಅಬಕಾರಿ ಇಲಾಖೆ ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವ ಖಾತೆಯಾಗಿದೆ. ಈ ಖಾತೆ ಕಾಂಗ್ರೆಸ್ ವಶವಾಗಲಿದೆ. ಸತೀಶ್ ಜಾಕಿಹೊಳಿ ಅವರು ಅಬಕಾರಿ ಖಾತೆ ಸಚಿವರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರಿಗೆ ಅಬಕಾರಿ ಖಾತೆ ನೀಡಲಾಗಿತ್ತು. ಆದರೆ, ಅವರು ಖಾತೆ ಬೇಡ ಎಂದು ಸಣ್ಣ ಕೈಗಾರಿಕೆ ಖಾತೆ ಪಡೆದಿದ್ದರು.
ಎಚ್.ಕೆ.ಪಾಟೀಲ್ ಅವರ ಹೆಗಲಿಗೆ
ಎಚ್.ಕೆ.ಪಾಟೀಲ್ ಅವರಿಗೆ ಉನ್ನತ ಶಿಕ್ಷಣ ಖಾತೆ ಸಿಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಗಾಮೀಣಾಭಿವೃದ್ಧಿ ಖಾತೆಯ ಹೊಣೆ ಹೊತ್ತುಕೊಂಡಿದ್ದರು.
ಎಂ.ಕೃಷ್ಣಪ್ಪ ವಸತಿ ಸಚಿವರು?
ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ವಸತಿ ಸಚಿವರಾಗುವ ಸಾಧ್ಯತೆ ಇದೆ. ಈ ಮೂಲಕ ವಸತಿ ಖಾತೆಯೂ ಕಾಂಗ್ರೆಸ್ ಪಾಲಾಗಲಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಕೃಷ್ಣಪ್ಪ ವಸತಿ ಖಾತೆಯನ್ನು ನಿರ್ವಹಿಸಿದ್ದರು.