'ಕೈ'ತಪ್ಪಿದ ಸಚಿವ ಸ್ಥಾನ: ಶಾಸಕರ ಅಸಮಾಧಾನ, ಬೆಂಬಲಿಗರ ಪ್ರತಿಭಟನೆ
ಬೆಂಗಳೂರು, ಜೂನ್ 6: ಕಾಂಗ್ರೆಸ್ನ ಸಂಭಾವ್ಯ ಸಚಿವರ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ, ಸಚಿವ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳ ಬೆಂಬಲಿಗರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡದ ಪಕ್ಷದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ವಿವಿಧೆಡೆ ವ್ಯಾಪಕ ಪ್ರತಿಭಟನೆ ಆರಂಭಿಸಿದ್ದಾರೆ.
ಶಾಸಕರಾದ ಎಂ.ಬಿ. ಪಾಟೀಲ್, ಅಜಯ್ ಸಿಂಗ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಿ.ಎಸ್. ಶಿವಳ್ಳಿ ಸೇರಿದಂತೆ ಅನೇಕ ಪ್ರಭಾವಿ ಮುಖಂಡರು ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದರು.
ಆದರೆ, ಈ ಆಕಾಂಕ್ಷಿಗಳಿಗೆ ಸಚಿವ ಸ್ಥಾನದ ದಕ್ಕುವುದಿಲ್ಲ ಎಂಬ ಮಾಹಿತಿ ದೆಹಲಿಯ ಮೂಲದಿಂದ ಲಭ್ಯವಾಗುತ್ತಿದ್ದಂತೆಯೇ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೊಗೆಯಾಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ 20ಕ್ಕೂ ಹೆಚ್ಚು ಶಾಸಕರಲ್ಲಿ ಬೇಸರ ಮೂಡಿಸಿದೆ.

ಪಕ್ಷದ ವರಿಷ್ಠರ ನಿರ್ಧಾರ ಶಾಸಕರ ಬೆಂಬಲಿಗರನ್ನು ಕೆರಳಿಸಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಹೋರಾಟದ ನೇತೃತ್ವ ವಹಿಸಿದ್ದ ಎಂ.ಬಿ. ಪಾಟೀಲ್ ಅವರು ಈ ಬಾರಿಯೂ ಸಚಿವ ಸ್ಥಾನ ಗಿಟ್ಟಿಸುವ ಭರವಸೆ ಹೊಂದಿದ್ದರು.
ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಸಚಿವರ ನಡುವೆ ಭಾರಿ ಅಂತರದಿಂದ ಗೆಲುವು ಸಾಧಿಸಿದ ಕಾಂಗ್ರೆಸ್ನ ಏಕೈಕ ನಾಯಕರಾಗಿಯೂ ಎಂ.ಬಿ. ಪಾಟೀಲ್ ಗುರುತಿಸಿಕೊಂಡಿದ್ದರು.
ಆದರೆ, ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದೆ ಇರುವುದು ಅವರ ಅಭಿಮಾನಿಗಳಲ್ಲಿ ಆಕ್ರೋಶ ಉಂಟು ಮಾಡಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಎದುರು ನೆರೆದ ಅಭಿಮಾನಿಗಳು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಲೇ ಬೆಳಿಗ್ಗೆಯೇ ಜೇವರ್ಗಿಯ ಸೊನ್ನಾ ಕ್ರಾಸ್ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
#Bengaluru: Supporters of Congress MLA Satish Jarkiholi stage protest near Vidhana Soudha, demanding that he be made a minister in the state cabinet. #Karnataka pic.twitter.com/TxnX6BIOJq
— ANI (@ANI) 6 June 2018
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅಜಯ್ ಸಿಂಗ್ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರ ಜತೆ ಸಭೆ ನಡೆಸಿದ್ದಾರೆ.
ಇನ್ನು ಕೆಲವು ಬೆಂಬಲಿಗರು ವಿಧಾನಸೌಧದ ಎದುರೇ ಕುಳಿತು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದರು.
ರಾಜೀನಾಮೆಗೆ ಮುಂದಾದ ಎಂ.ಬಿ. ಪಾಟೀಲ್?
ವರಿಷ್ಠರ ತೀರ್ಮಾನದಿಂದ ಅಸಮಾಧಾನಗೊಂಡಿರುವ ಎಂ.ಬಿ. ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಿಟ್ಟಿಗೆದ್ದಿರುವ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಅವರ ಮನವೊಲಿಕೆ ಪ್ರಯತ್ನಗಳು ಆರಂಭವಾಗಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಸಚಿವ ಸ್ಥಾನ ಏಕೆ ತಪ್ಪಿದೆ ಎನ್ನುವುದು ಗೊತ್ತಾಗಿಲ್ಲ. ದೆಹಲಿಯಲ್ಲಿರುವ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ತಿಳಿದಿದೆ. ಅವರು ದೆಹಲಿಯಿಂದ ಮರಳಿದ ಬಳಿಕ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.












Click it and Unblock the Notifications