43 ಸೈಟ್ ಹಂಚಿಕೆಯ ಅಕ್ರಮ ಆರೋಪ, ಪಾಸಿಕ್ಯೂಷನ್ಗಾಗಿ ದೂರು ಸಲ್ಲಿಕೆ: ಎಂಬಿ ಪಾಟೀಲಗೆ ಗೌರ್ನರ್ ಸಂಕಷ್ಟ?
ಬೆಂಗಳೂರು, ಸೆಪ್ಟಂಬರ್ 03: ಸಿದ್ಧಾರ್ಥ್ ವಿಹಾರ ಟ್ರಸ್ಟ್ಗೆ ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ. ಸ್ವಜನಪಕ್ಷಪಾತದ ಮೂಲಕ ಬೇಕಾದವರಿಗೆ ನಿವೇಶನ ಹಂಚಿಕೆ ಆಗಿದೆ. ಆದ್ದರಿಂದ ಕೈಗಾರಿಕೆ ಹಾಗೂ ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಇತ್ತೀಚೆಗೆ ಮುಖಂಡರಿಬ್ಬರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ಕುರಿತು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದರಿಂದ ಸಚಿವರಿಗೆ ಸಂಕಷ್ಟ ಎದುರಾಗುವ ಮಾತುಗಳು ಕೇಳಿ ಬರುತ್ತಿವೆ.
ಹೌದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬಕ್ಕೆ ಸೇರಿ ಸಿದ್ಧಾರ್ಥ್ ವಿಹಾರ ಟ್ರಸ್ಟ್ಗೆ ಸಿಎ ನಿವೇಶನ ನೀಡಲಾಗಿತ್ತು. ಈ ಟ್ರಸ್ಟ್ ಜೊತೆಗೆ ಎಂಬಿ ಪಾಟೀಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಪ್ರತಿಷ್ಠಿತ ವ್ಯಕ್ತಿಗಳ ಸಂಸ್ಥೆ ಮತ್ತು ಸಮೂಹಗಳಿಗೆ KIADB ನಿಯಮ ಉಲ್ಲಂಘಿಸಿ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೀಗೆ ಎಂಬಿ ಪಾಟೀಲ್ ವಿರುದ್ಧ ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹಾಗೂ ಇದೇ ವಿಚಾರವಾಗಿ ಕ್ರಮ ಕೈಗೊಳ್ಳೂವಂತೆ ಆಗ್ರಹಿಸಿ ಬಿಜೆಪಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.
43 ಸೈಟ್ ಹಂಚಿಕೆಯಲ್ಲಿ ಅಕ್ರಮ?: ಪ್ರಾಸಿಕ್ಯೂಷನ್ಗೆ ಮನವಿ
ಇನ್ನೂ ದಿನೇಶ್ ಕಲ್ಲಹಳ್ಳಿ ಅವರು ಕೆಐಎಡಿಬಿ ಮೂಲಕ ನಿಯಮ ಬಾಹಿರವಾಗಿ ಸ್ವಜನಪಕ್ಷಪಾತ ಮೂಲಕ 43ಸೈಟ್ ನೀಡಿದ್ದನ್ನು ಆಕ್ಷೇಪಿಸಿ ಮತ್ತು ಅಕ್ರಮ ನಡೆದಿದೆ ಎಂದು ಆರೋಪಿಸಿ ಸಚಿವ ಎಂಬಿ ಪಾಟೀಲ್ ಅವರ ವಿರುದ್ಧ ದೂರಿನಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದಾರೆ.
ಸರ್ಕಾರ, ರಾಜ್ಯಪಾಲರ ಮಧ್ಯೆ ಸಂಘರ್ಷ
ಈ ದೂರುಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ. ಈ ಮೂಲಕ ಮುಡಾ ಹಗರಣ ವಿಚಾರವಾಗಿ ರಾಜ್ಯಪಾಲರ ಮೇಲೆ ಮುಗಿ ಬಿದಿದ್ದ ಸರ್ಕಾರಕ್ಕೆ ಇದೀಗ ರಾಜ್ಯಪಾಲರು ಚಾಟಿ ಬೀಸಿದ್ದಾರೆ. ಸ್ಪಷ್ಟನೆ ಸಮಂಜಸವಾಗದಿದ್ದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯದ ಸಂಘರ್ಷವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿವೇಶನ ಹಂಚಿಕೆಯಲ್ಲಿ ಸ್ವಜನಪಕ್ಷಪಾತ ಆರೋಪ
ಸರ್ಕಾರಕ್ಕೆ ಸಿಎ ನಿವೇಶನಗಳ ಹಂಚಿಕೆಗಾಗಿ ಒಟ್ಟು 190ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಈ ಪೈಕಿ ಸಿದ್ಧಾರ್ಥ್ ವಿಹಾರ ಟ್ರಸ್ಟ್ ಸೇರಿದಂತೆ ಒಟ್ಟು 43 ಸಂಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸಾಕಷ್ಟು ಅಕ್ರಮದ ವಾಸನೆ ಕಂಡು ಬರುತ್ತಿದೆ. ಕೆಐಎಡಿಬಿ ನಿಯಮಗಳು ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಅವರು ಆರೋಪಿಸಿದ್ದರು.
ಇನ್ನೂ ಎಐಸಿಸಿ ಅಧ್ಯಕ್ಷರ ಕುಟುಂಬಕ್ಕೆ ಸೇರಿರುವ ಸಿದ್ಧಾರ್ಥ್ ವಿಹಾರ ಟ್ರಸ್ಟ್ಗೆ ಅತೀ ಕಡಿಮೆ ಬೆಲೆಗೆ ನಿಯಮ ಮೀರಿ ಸಿನಿ ಸೈಟ್ ಮಾರಾಟ ಮಾಡಲಾಗಿದೆ. ಆದ್ದರಿಂದ ಈ ಕುರಿತು ನೀವು ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯಪಾಲರಿಗೆ ಸಲ್ಲಿಸಿದ ದೂರಿನಲ್ಲಿ ಕೋರಿದ್ದಾರೆ.
ಈ ಸಂಬಂಧ ಸೋಮವಾರ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ರವಾನಿಸಿದ್ದಾರೆ.












Click it and Unblock the Notifications