ಸಿ-ಫೋರ್ ಸಮೀಕ್ಷೆ : ಯಾರು, ಏನು ಹೇಳಿದರು?
ಬೆಂಗಳೂರು, ಆ.21 : ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ-ಫೋರ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಪಕ್ಷ 120-132 ಸ್ಥಾನಗಳನ್ನು ಪಡೆಯಲಿದೆ ಎಂಬುದು ಸಮೀಕ್ಷೆ ವರದಿ. ಈ ಸಮೀಕ್ಷೆ ಬಗ್ಗೆ ಬಿಸಿ-ಬಿಸಿ ಚರ್ಚೆಯಾಗುತ್ತಿದೆ.
ರಾಜ್ಯದ 165 ಕ್ಷೇತ್ರಗಳಲ್ಲಿ 24,679 ಮತದಾರರನ್ನು ಮಾತನಾಡಿಸಿ ಸಮೀಕ್ಷೆ ಮಾಡಲಾಗಿದೆ ಎಂದು ಸಿ-ಫೋರ್ ಹೇಳಿದೆ. ಬಿಜೆಪಿ 60-72, ಜೆಡಿಎಸ್ 24-30, ಇತರೆ 1-6 ಸ್ಥಾನಗಳನ್ನು ಪಡೆಯಬಹುದು ಎಂದು ವರದಿ ಹೇಳುತ್ತಿದೆ.

ಸಿ-ಫೋರ್ ಸಮೀಕ್ಷೆ ಬಗ್ಗೆ ವಿವಿಧ ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಇದು ನಮ್ಮ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಬಂದಿರುವರುವ ಫಲಿತಾಂಶ ಎಂದು ಹೇಳಿದ್ದಾರೆ. ಈ ವರದಿ ನೋಡಿ ಬಿಜೆಪಿ ಭಯಪಟ್ಟಿದೆ ಎಂದು ನಾಯಕರು ಹೇಳುತ್ತಿದ್ದಾರೆ.
ಬಿಜೆಪಿ ನಾಯಕರು ಸಮೀಕ್ಷೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರ ತನ್ನ ಬೆನ್ನು ತಟ್ಟಿಕೊಳ್ಳಲು ಈ ಸಮೀಕ್ಷೆ ಮಾಡಿಸಿದೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಇದು ಸರ್ಕಾರದ ಜಾಹೀರಾತು ಭಾಗ್ಯದ ಪರಿಣಾಮ ಬಂದ ಸಮೀಕ್ಷೆ ಎಂದು ಲೇವಡಿ ಮಾಡಿದೆ. ಸಮೀಕ್ಷೆ ಬಗ್ಗೆ ಯಾರು, ಏನು ಹೇಳಿದರು?...

ಬಿಜೆಪಿ ನಾಯಕರಿಗೆ ಭರ ಶುರುವಾಗಿದೆ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಈ ಸಮೀಕ್ಷೆ ನೋಡಿ ಬಿಜೆಪಿ ನಾಯಕರಿಗೆ ಭಯ ಆರಂಭವಾಗಿದೆ. ಸರ್ಕಾರದ ವಿರುದ್ಧ ಪ್ರತಿದಿನ ಆರೋಪ ಮಾಡುತ್ತಾರೆ. ಆದರೆ, ಯಾವುದಕ್ಕೂ ದಾಖಲೆಗಳಿಲ್ಲ. ಜನರ ಮನಸ್ಸಿನಲ್ಲಿ ಏನಿದೆ? ಎಂಬುದು ಸಮೀಕ್ಷೆಯಿಂದ ತಿಳಿದಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಮಾಧಾನ ಮಾಡಿಕೊಳ್ಳಲು ವರದಿ ಮಾಡಿಸಿರಬಹುದು
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, 'ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳಲು ಸರ್ಕಾರವೇ ಹೀಗೆ ವರದಿ ಮಾಡಿಸಿರಬಹುದು. ಇದನ್ನು ಸಂಶಯದಿಂದಲೇ ನೋಡಬೇಕು' ಎಂದು ಹೇಳಿದ್ದಾರೆ.

ಜನತೆಯ ಮನಸ್ಸಿನ ಕನ್ನಡಿ
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ರಾಜ್ಯದ ಜನರ ಮನಸ್ಸಿನಲ್ಲಿ ಏನಿದೆ? ಎನ್ನುವುದನ್ನು ಸಮೀಕ್ಷೆ ತಿಳಿಸಿದೆ. ವಾಸ್ತವಕ್ಕೆ ಈ ಸಮೀಕ್ಷೆ ಹತ್ತಿರವಾಗಿದೆ. ಕಾರ್ಯಕರ್ತರ ಉತ್ಸಾಹವನ್ನು ಸಮೀಕ್ಷೆ ಹೆಚ್ಚಿಸಿದೆ. ಸಿದ್ದರಾಮಯ್ಯ ಅವರ ವರ್ಚಸ್ಸಿನ ಮುಂದೆ ಯಡಿಯೂರಪ್ಪ ಲೆಕ್ಕಕ್ಕೆ ಇಲ್ಲ' ಎಂದು ಹೇಳಿದ್ದಾರೆ.

ಜಾಹೀರಾತು ಭಾಗ್ಯದ ಮೊದಲ ಫಲಾನುಭವಿ
ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಸಮೀಕ್ಷೆ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ ಕೊಟ್ಟಿದ್ದರು. ಇದೀಗ ಸಿ-ಫೋರ್ ಸಂಸ್ಥೆಗೆ ಜಾಹೀರಾತು ಭಾಗ್ಯ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಜಾಹೀರಾತು ಭಾಗ್ಯದ ಮೊದಲ ಫಲಾನುಭವಿ ಸಿ-ಫೋರ್ ಸಂಸ್ಥೆಗೆ ಅಭಿನಂದನೆ' ಎಂದು ಸಮೀಕ್ಷೆಯನ್ನು ಲೇವಡಿ ಮಾಡಿದ್ದಾರೆ.

ಜನ ಕಾಂಗ್ರೆಸ್ ಮೇಲೆ ವಿಶ್ವಾಸ ಹೊಂದಿದ್ದಾರೆ
ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, 'ಬಿಜೆಪಿ ಪರವಾಗಿ ಚುನಾವಣೆ ಸಂದರ್ಭದಲ್ಲಿ ಸಿ-ಫೋರ್ ಸಮೀಕ್ಷೆ ಬಂದಿತ್ತು, ಬಿಜೆಪಿಗೆ ಆಗ ಅದು ಸರಿ ಇತ್ತು. ಈಗ ಕಾಂಗ್ರೆಸ್ ಪರವಾಗಿ ಬಂದಿದ್ದಕ್ಕೆ ಸರಿ ಇಲ್ಲ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ. 'ಕಳೆದ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ಆದ್ದರಿಂದ ಜನರು ಪಕ್ಷದ ಮೇಲೆ ವಿಶ್ವಾಸ ಹೊಂದಿದ್ದಾರೆ' ಎಂದು ಜಾರ್ಜ್ ಹೇಳಿದರು.

ಸಮಯ ಮತ್ತು ಸಮೀಕ್ಷೆ ಸಂಶಯ ಹುಟ್ಟುಹಾಕಿದೆ
ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್, 'ಸಮೀಕ್ಷೆ ಬಿಡುಗಡೆಯಾಗಿರುವ ಸಮಯ ಮತ್ತು ರೀತಿ ಸಂಶಯಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಬಿಡುಗಡೆ ಮಾಡುವ ಅಗತ್ಯವೇನಿತ್ತು?. ಎಸಿಬಿ ದುರುಪಯೋಗ ಪ್ರಕರಣದ ಗಮನ ಬೇರೆ ಕಡೆ ಸೆಳೆಯಲು ಈ ಸಮೀಕ್ಷೆ ವರದಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲಿದೆ' ಎಂದು ಹೇಳಿದ್ದಾರೆ.












Click it and Unblock the Notifications