25 ಲಕ್ಷ ಹಣ ಪತ್ತೆ : ಸಿದ್ದರಾಮಯ್ಯ ಭೇಟಿಯಾದ ಪುಟ್ಟರಂಗ ಶೆಟ್ಟಿ
ಬೆಂಗಳೂರು, ಜನವರಿ 06 : ವಿಧಾನಸೌಧದಲ್ಲಿ 25 ಲಕ್ಷ ರೂ. ಹಣ ಪತ್ತೆ ಪ್ರಕರಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಚಿವ ಪುಟ್ಟರಂಗ ಶೆಟ್ಟಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಶನಿವಾರ ರಾತ್ರಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡಿದರು.
ಒಂದು ಗಂಟೆಗಳ ಕಾಲ ಸಿದ್ದರಾಮಯ್ಯ ಅವರ ಜೊತೆ ಪುಟ್ಟರಂಗ ಶೆಟ್ಟಿ ಅವರು ಮಾತುಕತೆ ನಡೆಸಿದ್ದು, 'ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನನ್ನ ವಿರುದ್ಧ ಪಿತೂರಿ ನಡೆದಿದೆ' ಎಂದು ಹೇಳಿದರು.

ಸಿದ್ದರಾಮಯ್ಯ ಸೂಚನೆಯಂತೆ ಪುಟ್ಟರಂಗ ಶೆಟ್ಟಿ ಅವರು ಭೇಟಿ ಮಾಡಿದ್ದರು. ಆಗ ಪುಟ್ಟರಂಗ ಶೆಟ್ಟಿ ಅವರ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಇದರಿಂದಾಗಿ ಭೇಟಿ ಬಳಿಕ ಅವರು ಸಪ್ಪೆ ಮುಖ ಮಾಡಿಕೊಂಡು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಅಲ್ಲಿಂದ ತೆರಳಿದರು.
ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಸಿಕ್ಕಿ ಹಾಕಿಕೊಂಡ ಹಣಕ್ಕೆ ಯಾರು ಜವಾಬ್ದಾರರು1 ) ಸಂಬಂಧಪಟ್ಟ ಸಚಿವರು 2 ) ಸರಕಾರದ ಮುಖ್ಯಸ್ಥ , Sri @hd_kumaraswamy 3 ) ಸಮನ್ವಯ ಸಮಿತಿ ಮುಖ್ಯಸ್ಥ ರು Sri @siddaramaiah 4)ಪುಟುಗೋಸಿ ಅಂತ ಬಿಟ್ಟು ಬಿಡಬೇಕಾ ? Sri @dineshgrao ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ? ನಾಚಿಕೆ ಇಲ್ಲದ ಮದುವೆ pic.twitter.com/eQ4X9PvDlR
— Sadananda Gowda (@DVSBJP) January 5, 2019
ಶುಕ್ರವಾರ ಸಂಜೆ ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್ ದಾಖಲೆ ಇಲ್ಲದ 25 ಲಕ್ಷ ಹಣವನ್ನು ತೆಗೆದುಕೊಂಡು ಹೋಗುವಾಗ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಆಪ್ತರಾದ ಪುಟ್ಟರಂಗ ಶೆಟ್ಟಿ ಅವರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲು ಬಿಜೆಪಿ ತೀರ್ಮಾನಿಸಿದೆ.












Click it and Unblock the Notifications