ಸಮೀಕ್ಷೆ: ಸಿದ್ದರಾಮಯ್ಯ ಅವರ ಕೈ ಹಿಡಿದ ಅನ್ನಭಾಗ್ಯ ಯೋಜನೆ
ಬೆಂಗಳೂರು, ಆಗಸ್ಟ್ 21: ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿ ಫೋರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ವರದಿ ನೀಡಿದೆ. ಇದರ ಜತೆಗೆ ಸರ್ಕಾರದ ಯೋಜನೆಗಳು ಹಾಗೂ ಸಮಸ್ಯೆಗಳ ಬಗ್ಗೆ ಕೂಡಾ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಈ ವರದಿಯಂತೆ ಸರ್ಕಾರದ ಜನಪ್ರಿಯ ಯೋಜನೆಗಳ ಪೈಕಿ ಅನ್ನಭಾಗ್ಯಕ್ಕೆ ಜನತೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ಸಂದರ್ಶಿಸಿ ಈ ಸಮೀಕ್ಷೆಯ ವರದಿಯನ್ನು ತಯಾರಿಸಲಾಗಿದೆ.
ಈ ಪೈಕಿ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳ ವಿವಿಧ ಧರ್ಮ, ಜಾತಿಯ ಜನರನ್ನು ಮಾತನಾಡಿಸಿ, ವಿವಿಧ ವಿಭಾಗಗಳಲ್ಲಿ ಜನರ ಬೇಡಿಕೆಗಳೇನು? ಸರ್ಕಾರದ ಸಾಧನೆಗಳೇನು? ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆಗೆ 4 ಸಾವಿರ ಕೋಟಿ ರು ವೆಚ್ಚ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ದಾರ ಕುಟುಂಬದ ಒಬ್ಬರಿಗೆ 7 ಕೆ.ಜಿಯಂತೆ ಒಂದು ರುಪಾಯಿದರದಲ್ಲಿ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಇದರ ಜತೆಗೆ ಉಪ್ಪು, ತಾಳೆ ಎಣ್ಣೆ ಸಬ್ಸಿಡಿ ದರದಲ್ಲಿ ಲಭ್ಯದಲ್ಲಿ ಪೂರೈಸಲಾಗುತ್ತಿದೆ.

ಶ್ರೇಯಾಂಕ ಪಟ್ಟಿ ಹೀಗಿದೆ:
ಅನ್ನಭಾಗ್ಯ : ಶೇ79
ಮಧ್ಯಾಹ್ನದ ಬಿಸಿಯೂಟ: ಶೇ38
ವಿದ್ಯಾಸಿರಿ: ಶೇ26
ಕ್ಷೀರಭಾಗ್ಯ: ಶೇ16
ಕೃಷಿಭಾಗ್ಯ: ಶೇ 11
ಇದೇ ರೀತಿ ಈ ಸರ್ಕಾರದ ಆಡಳಿತ ಅವಧಿಯಲ್ಲಿ ಸಾರ್ವಜನಿಕರು ಅನುಭವಿಸಿದ ಸಮಸ್ಯೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೊನೆ ಸ್ಥಾನದವರೆಗಿನ ಪಟ್ಟಿ
ಕುಡಿಯುವ ನೀರಿನ ಕೊರತೆ: ಶೇ 37
ಹದಗೆಟ್ಟ ರಸ್ತೆ: ಶೇ 26
ಕಸ ವಿಂಗಡಣೆ ಹಾಗೂ ಸಂಸ್ಕರಣೆ: ಶೇ 15
ನಿರುದ್ಯೋಗ : ಶೇ 11
ವಿದ್ಯುತ್ ವ್ಯತ್ಯಯ : ಶೇ 11
ನೀರಾವರಿ ಯೋಜನೆ ಕೊರತೆ : ಶೇ 11
ಮಿಕ್ಕಂತೆ ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ಬೆಲೆ ಏರಿಕೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಜನತೆ ಉತ್ತರಿಸಿದ್ದಾರೆ.












Click it and Unblock the Notifications