ಆಜಾನ್ ಕೂಗುತ್ತಿದ್ದಾಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ: ವಿಡಿಯೋ ಹಂಚಿಕೊಂಡು ವಿಜಯೇಂದ್ರ ಕಿಡಿ
ಬೆಂಗಳೂರು, ಮಾರ್ಚ್19: ಆಜಾನ್ ಕೂಗುತ್ತಿದ್ದಾಗ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನನ್ನು ಹೊರಗೆಳೆದು ಐವರು ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದ್ದು, ಈ ಘಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾ ಬಿ ವೈ ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ನಲ್ಲಿ ವಿಡಿಯೋ ಹಂಚಿಕೊಂಡಿರುವ ವಿಜಯೇಂದ್ರ ಅವರು, ವಿಧಾನ ಸೌಧದಲ್ಲೇ ಪಾಕ್ ಜಿಂದಾಬಾದ್ ಕೂಗಿದ ದುರುಳರ ದೃಷ್ಕೃತ್ಯದ ನಂತರ ಲಂಗು ಲಗಾಮು ಇಲ್ಲದೇ ದೇಶ ದ್ರೋಹಿ ಮನಸ್ಥಿತಿಯ ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ, ಪೋಲಿಸರ ಭಯ ಇಲ್ಲದಂತಹ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ.

ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಧಾರ್ಮಿಕ ಭಾವನೆಗಳಿಗೆ ನಿರಂತರ ದಕ್ಕೆಯುಂಟಾಗುವುದರ ಜತೆಗೇ ಹಿಂದೂ ನಾಗರಿಕರಿಗೆ ರಕ್ಷಣೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಜಾನ್ ಕೂಗುವಾಗ ಹನುಮಾನ್ ಚಾಲೀಸ್ ಹಾಕಬಾರದು ಎಂದು ಬೆಂಗಳೂರಿನ ಮೊಬೈಲ್ ಅಂಗಡಿಗೆ ನುಗ್ಗಿ ಅಮಾನುಷ ಹಲ್ಲೆ ನಡೆಸಿರುವ ಗೂಂಡಾ ಪ್ರಕರಣ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇಂಥಾ ಘಟನೆಗಳನ್ನು ನೋಡಿಕೊಂಡು ಬಿಜೆಪಿ ಸುಮ್ಮನೆ ಕೂರಲಾಗದು ಎಂದು ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.
ಹಲ್ಲೆಗೊಳಗಾಗಿರುವ ಮುಖೇಶ್ ಅವರಿಗೆ ಕೂಡಲೇ ರಕ್ಷಣೆ ಒದಗಿಸಬೇಕು. ಘಟನೆ ನಡೆದ ಪ್ರದೇಶದಲ್ಲಿ ಹಿಂದೂ ವ್ಯಾಪಾರಿ ಸಮುದಾಯ ನಿರ್ಭಯವಾಗಿ ವ್ಯವಹಾರ ನಡೆಸಲು ಅಗತ್ಯ ಭದ್ರತಾ ವ್ಯವಸ್ಥೆ ಈ ಕೂಡಲೇ ಕಲ್ಪಿಸಲು ಒತ್ತಾಯಿಸುವೆ. ಘಟನೆಗೆ ಸ್ಪಷ್ಟ ಸಾಕ್ಷಿ ಒದಗಿಸಿರುವ ವಿಡಿಯೋ ಆಧರಿಸಿ ಕೀಡಿಗೇಡಿ ಗೂಂಡಾಗಳೆಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಜಿಹಾದಿ ಮನಸ್ಥಿತಿಯ ಗೂಂಡಾಗಳು ಇನ್ನು ಮುಂದೆ ತಲೆ ಎತ್ತದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಲು ಆಗ್ರಹಿಸುವೆ ಎಂದು ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಸೌಧದಲ್ಲೇ ಪಾಕ್ ಜಿಂದಾಬಾದ್ ಕೂಗಿದ ದುರುಳರ ದೃಷ್ಕೃತ್ಯದ ನಂತರ
— Vijayendra Yediyurappa (Modi Ka Parivar) (@BYVijayendra) March 19, 2024
ಲಂಗು ಲಗಾಮು ಇಲ್ಲದೇ ದೇಶ ದ್ರೋಹಿ ಮನಸ್ಥಿತಿಯ ಗೂಂಡಾಗಳು ಅಟ್ಟಹಾಸ ಮೆರೆಯುತ್ತಿದ್ದಾರೆ, ಪೋಲಿಸರ ಭಯ ಇಲ್ಲದಂತಹ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಧಾರ್ಮಿಕ ಭಾವನೆಗಳಿಗೆ ನಿರಂತರ ದಕ್ಕೆಯುಂಟಾಗುವುದರ ಜತೆಗೇ… pic.twitter.com/EPwSMfNpOd
ಪ್ರತಿಭಟನೆ ಯಾವ ಪುರುಷಾರ್ಥಕ್ಕಾಗಿ?: ದಿನೇಶ್ ಗುಂಡೂರಾವ್
ಕೊನೆಗೂ ರಾಜ್ಯದ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸಂತೋಷದ ವಿಷಯ. ಆದರೆ ಈ ಪ್ರತಿಭಟನೆ ಯಾವ ಪುರುಷಾರ್ಥಕ್ಕಾಗಿ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶ್ನಿಸಿದ್ದಾರೆ.
ಸಮಾಜದ ಶಾಂತಿ ಭಂಗ ಉಂಟುಮಾಡುವವರ ವಿರುದ್ಧ ನಮ್ಮ ಸರ್ಕಾರ ತೀಕ್ಷ್ಣ ಕ್ರಮ ಕೈಗೊಳ್ಳಲಿದೆ. ಆದರೆ ಇಂತಹ ಘಟನೆಗಳು ನಡೆದಾಗ ಇವರಲ್ಲಿ ಹುಟ್ಟುವ ಈ ಆಕ್ರೋಶ, ಪ್ರತಿಭಟನೆ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾದಾಗ ಎಲ್ಲಿಹೋಗಿತ್ತು? ನಮ್ಮ ಜನರು ಬರದಿಂದ ತತ್ತರಿಸಿ ಕೇಂದ್ರದ ನೆರವಿಗೆ ಮೊರೆ ಇಟ್ಟಾಗ ಇವರಿಗೆ ಯಾಕೆ ಈ ಆಕ್ರೋಶ ಬರಲಿಲ್ಲ? ನಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾದಾಗ ಈ ಸಂಸದರಿಗೆ ಯಾಕೆ ಆಕ್ರೋಶ ಹುಟ್ಟಲಿಲ್ಲ? ನದಿ ನೀರಿನ ವಿಷಯದಲ್ಲಿ ಅನ್ಯಾಯವಾದಾಗ ಏಕೆ ಇವರ ರಕ್ತ ಕುದಿಯಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಬಿಜೆಪಿ ಸಂಸದರುಗಳಿಗೆ ಆಕ್ರೋಶ ಬಂದು ಬೀದಿಗಿಳಿಯಬೇಕಾದರೆ ಒಂದೋ ಚುನಾವಣೆ ಬರಬೇಕು ಇಲ್ಲವಾದಲ್ಲಿ ಯಾವುದಾದರೂ ಕೋಮು ಪ್ರಚೋಧನೆ ನೀಡುವ ಘಟನೆ ನಡೆಯಬೇಕು. ಆಗ ಸಮಾಜದ ನೆಮ್ಮದಿಗೆ ಬೆಂಕಿ ಹಚ್ಚಿ ತಮ್ಮ ಮತವನ್ನು ಸುಭದ್ರಗಳಿಸಿಕೊಳ್ಳಲು ಇವರು ಬೀದಿಗಿಳಿಯುತ್ತಾರೆ.
ಶೋಭಾ ಕರಂದ್ಲಾಜೆ ಹಾಗೂ ತೇಜಸ್ವಿ ಸೂರ್ಯ ಅವರಿಗೆ ನಾಚಿಕೆಯಾಗಬೇಕು ನಿಮಗೆ. ಅಧಿಕಾರದಲ್ಲಿದ್ದಾಗ ಕನ್ನಡಿಗರಿಗೆ ಅನ್ಯಾಯ ಎಸಗಿ ಈಗ ಚುನಾವಣೆಗಳಿರುವಾಗ ಬೀದಿಯಲ್ಲಿ ಕುಳಿತು ಪ್ರತಿಭಟಿಸುವ ನಿಮ್ಮ ನಾಟಕ ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥವಾಗಿದೆ. ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತದೆ, ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸುವ ನೀವು ನಾಡಿಗೂ, ಸಮಾಜಕ್ಕೂ ಕಂಟಕ ಎಂದು ಕಿಡಿಕಾರಿದ್ದಾರೆ.












Click it and Unblock the Notifications