ಉಪ ಚುನಾವಣೆ ಗೆಲುವಿಗೆ ತಂಡ ಕಟ್ಟಿದ ಡಿ. ಕೆ. ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 08 : ಶಿರಾ ಮತ್ತು ಆರ್. ಆರ್. ನಗರ ಉಪ ಚುನಾವಣೆ ಕಣ ರಂಗೇರುತ್ತಿದೆ. ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಚುನಾವಣೆ ಗೆಲ್ಲಲು ಅವರು ತಂತ್ರ ರೂಪಿಸುತ್ತಿದ್ದಾರೆ.
ಆರ್. ಆರ್. ನಗರ ಕ್ಷೇತ್ರಕ್ಕೆ ಹೆಚ್. ಕುಸುಮಾ, ಶಿರಾ ಕ್ಷೇತ್ರಕ್ಕೆ ಟಿ. ಬಿ. ಜಯಚಂದ್ರ ಅಭ್ಯರ್ಥಿ ಎಂದು ಈಗಾಗಲೇ ಕಾಂಗ್ರೆಸ್ ಘೋಷಣೆ ಮಾಡಿದೆ. ಎರಡೂ ಕ್ಷೇತ್ರಗಳಲ್ಲಿಯೂ ಪ್ರಚಾರ ಕಾರ್ಯವನ್ನು ಆರಂಭಿಸಿದೆ.
ಉಪ ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಂಡಗಳನ್ನು ರಚನೆ ಮಾಡಿದ್ದಾರೆ. ಕರ್ನಾಟಕದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನರಿಗೆ ತಲುಪಿಸಿ, ಪಕ್ಷದ ಅಭ್ಯರ್ಥಿ ಗೆಲ್ಲಿಸುವುದು ಅವರ ತಂತ್ರವಾಗಿದೆ.
ನವೆಂಬರ್ 3ರಂದು ಆರ್. ಆರ್. ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.

ಆರ್. ಆರ್. ನಗರ ಚುನಾವಣೆ
ಆರ್. ಆರ್. ನಗರ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ. ಸಂಸದ ಡಿ. ಕೆ. ಸುರೇಶ್ ನೇತೃತ್ವದಲ್ಲಿ ಕನಕಪುರದ ಮುಖಂಡರ ತಂಡವನ್ನು ಡಿ. ಕೆ. ಶಿವಕುಮಾರ್ ರಚನೆ ಮಡಿದ್ದಾರೆ. ಆರ್. ಆರ್. ನಗರ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಡಿ. ಕೆ. ಸುರೇಶ್ ಸಂಸದರಾಗಿದ್ದಾರೆ.

ಶಿರಾ ಉಪ ಚುನಾವಣೆ
ತುಮಕೂರಿನ ಶಿರಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಟಿ. ಬಿ. ಜಯಚಂದ್ರ ಅಭ್ಯರ್ಥಿ. ಕೆ. ಎನ್. ರಾಜಣ್ಣ ಪುತ್ರ ರಾಜೇಂದ್ರ ನೇತೃತ್ವದಲ್ಲಿ ಶಿರಾದಲ್ಲಿ ತಂಡವನ್ನು ಡಿ. ಕೆ. ಶಿವಕುಮಾರ್ ರಚನೆ ಮಾಡಿದ್ದಾರೆ. ಕೆ. ಎನ್. ರಾಜಣ್ಣ, ಜಯಚಂದ್ರ ಮತ್ತು ಡಾ. ಜಿ.ಪರಮೇಶ್ವರ ನೇತೃತ್ವದಲ್ಲಿ ಶಿರಾ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಲಾಗುತ್ತದೆ.

ಪ್ರಚಾರ ಕಣಕ್ಕಿಳಿದ ಡಿಕೆಶಿ
ಆರ್. ಆರ್. ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರವನ್ನು ಆರಂಭಿಸುವ ಮೂಲಕ ಡಿ. ಕೆ. ಶಿವಕುಮಾರ್ ಉಪ ಚುನಾವಣೆ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಬುಧವಾರ ಚುನಾವಣಾ ಪೂರ್ವ ಸಭೆಯನ್ನು ಕಾರ್ಯಕರ್ತರ ಜೊತೆ ಡಿ. ಕೆ. ಶಿವಕುಮಾರ್ ನಡೆಸಿದ್ದಾರೆ.
Recommended Video

ಸಿದ್ದರಾಮಯ್ಯ ಪ್ರಚಾರ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಪಕ್ಷದ ಮುಖಂಡರ ಸಭೆಯನ್ನು ನಡೆಸಿದರು. 2013ರಲ್ಲಿ ಶಿರಾದಲ್ಲಿ ಗೆದ್ದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಟಿ. ಬಿ. ಜಯಚಂದ್ರ 2018ರಲ್ಲಿ ಕ್ಷೇತ್ರದಲ್ಲಿ ಸೋತಿದ್ದರು. ಈಗ ಉಪ ಚುನಾವಣೆ ಎದುರಾಗಿದ್ದು, ಅವರೇ ಅಭ್ಯರ್ಥಿ.












Click it and Unblock the Notifications