ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಮೇಲಾಗುವ ಪರಿಣಾಮ ಏನು?
Recommended Video

ಬೆಂಗಳೂರು, ನವೆಂಬರ್ 08: ಉಪ ಚುನಾವಣೆ ಫಲಿತಾಂಶ ಜೆಡಿಎಸ್ಗಿಂತಲೂ ಕಾಂಗ್ರೆಸ್ಗೆ ಹೆಚ್ಚಿನ ಸಂತಸ ತಂದಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಅದು ಭಾರಿ ಅಂತರದಿಂದ ವಿಜಯ ಸಾಧಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಾಗದೆ ನಿರಾಸೆ ಅನುಭವಿಸಿದ್ದ ಕಾಂಗ್ರೆಸ್ಗೆ ಉಪಚುನಾವಣೆ ಗೆಲುವು ಅದಕ್ಕಿಂತಲೂ ಮುಖ್ಯವಾಗಿ ಬಿಜೆಪಿಯ ಸೋಲು ಅಲ್ಪ ಮಟ್ಟಿಗಿನ ನೆಮ್ಮದಿ ತಂದಿರಲಿಕ್ಕೂ ಸಾಕು.
ಲೋಕಸಭೆ ಚುನಾವಣೆ ಮುಂದಿರುವ ಹೊತ್ತಿನಲ್ಲಿ ಈ ಉಪಚುನಾವಣೆ ಗೆಲುವು ಹೊಸ ಹುಮ್ಮಸ್ಸು ಮೂಡಿಸಿದೆ. ಕಾಂಗ್ರೆಸ್ಗೆ ದಕ್ಷಿಣ ಭಾರತದ ಅತ್ಯಂತ ಪ್ರಮುಖ ರಾಜ್ಯವಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಸೀಟು ಗೆಲ್ಲಿಸುವ ಭರವಸೆಯನ್ನು ರಾಜ್ಯ ನಾಯಕರು ಈ ಉಪಚುನಾವಣೆ ಮೂಲಕ ಹೈಕಮಾಂಡ್ಗೆ ಕೊಟ್ಟಿದ್ದಾರೆ.

ರೈಸ್ ಆಫ್ ಡಿ.ಕೆ.ಶಿವಕುಮಾರ್
ಬಳ್ಳಾರಿಯ ಗೆಲುವು ಕರ್ನಾಟಕ ಚುನಾವಣಾ ಇತಿಹಾಸದ ಪ್ರಮುಖ ಚುನಾವಣಾ ಗೆಲುವುಗಳಲ್ಲಿ ಒಂದು ಎನ್ನಬಹುದಾದಷ್ಟು ಪ್ರಮುಖ ಗೆಲುವು. ಇಂತಹಾ ಅದ್ಭುತ ಗೆಲುವಿಗೆ ಕಾರಣೀಭೂತರಾದ ಡಿ.ಕೆ.ಶಿವಕುಮಾರ್ ಅವರ ಸ್ಥಾನ ಕಾಂಗ್ರೆಸ್ನಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಏರಲಿದೆ. ಸಂಪುಟ ವಿಸ್ತರಣೆ ಸಮಯದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮೇಲೆ ಹಿಡಿತವನ್ನು ಗಟ್ಟಿಮಾಡಿಕೊಳ್ಳಲಿದ್ದಾರೆ.

ಹೈಕಮಾಂಡ್ಗೆ ಸಂದೇಶ ಕಳಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಈಗಲೂ ಪಕ್ಷದ ಸ್ಟಾರ್ ಮುಖಂಡ ಎಂಬ ಸಂದೇಶವನ್ನು ರಾಜ್ಯ ಮತ್ತು ದೆಹಲಿಯ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಕಳುಹಿಸಿದಂತಾಗಿದೆ. ಈ ಉಪಚುನಾವಣೆಯಲ್ಲಿ ಕೈ ಗೆಲುವಿಗೆ ಸಿದ್ದರಾಮಯ್ಯ ಪ್ರಚಾರ ಬಹುಮುಖ್ಯ ಕಾರಣಗಳಲ್ಲೊಂದು, ಬಳ್ಳಾರಿ ರೆಡ್ಡಿ ಮತ್ತು ರಾಮುಲು ಅವರನ್ನು ಎದುರಿಸಿದ ರೀತಿ ಕೈ ಕಾರ್ಯಕರ್ತರಲ್ಲಿ ಹುರುಪು ತರಿಸಿತು. ಪಕ್ಷಕ್ಕೆ ನನ್ನ ನಾಯಕತ್ವದ ಅವಶ್ಯಕತೆ ಇದೆ ಎಂಬುದನ್ನು ಈ ಚುನಾವಣೆ ಮೂಲಕ ಸಿದ್ದರಾಮಯ್ಯ ಸಾಬೀತು ಮಾಡಿದರು.

ಮುಖಂಡರು, ಕಾರ್ಯಕರ್ತರಲ್ಲಿ ವಿಶ್ವಾಸ
ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟವಾಗಿದೆ ಎಂಬ ಮಾತು ಕೆಲವು ಕೈ ಮುಖಂಡರು ಮತ್ತು ಕಾರ್ಯಕರ್ತರಿಂದ ಕೇಳಿ ಬರುತ್ತಿತ್ತು. ಆದರೆ ಈ ಚುನಾವಣಾ ಗೆಲುವು ಆ ಅನುಮಾನಗಳನ್ನು ದೂರ ಮಾಡಿ, ಒಟ್ಟಿಗಿದ್ದರೆ ಗೆಲುವು ಸುಲಭ ಎಂಬುದನ್ನು ಮನಗಾಣಿಸುವಲ್ಲಿ ಯಶಸ್ವಿಯಾಗಿದೆ. ಇದು ಲೋಕಸಭೆ ಚುನಾವಣೆ ವೇಳೆ ಕಾರ್ಯಕರ್ತರ ನಡುವಿನ ಗೊಂದಲ ಪರಿಹರಿಸಲು ಸಹಾಯಕವಾಗುತ್ತದೆ.

ಡಿ.ಕೆ.ಶಿ vs ಸಿದ್ದರಾಮಯ್ಯಕ್ಕೆ ನಾಂದಿ ?
ಈಗಾಗಲೇ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತೆರೆ-ಮರೆ ಗುದ್ದಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಭರ್ಜರಿ ವಿಜಯ ಡಿ.ಕೆ.ಶಿವಕುಮಾರ್ ಬಲ ಹೆಚ್ಚಿಸಿ ಸಿದ್ದರಾಮಯ್ಯ ಅವರೊಂದಿಗಿನ ಗುದ್ದಾಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅಪಾಯವೂ ಇದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿ
ಮೈತ್ರಿಯ ಶಕ್ತಿ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್ ಮುಖಂಡರ ಅರಿವಿಗೆ ಬಂದಿದೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆಗಳನ್ನು ಮೈತ್ರಿ ಮೂಲಕವೇ ಎದುರಿಸುವ ನಿರ್ಧಾರ ಕೈ ಪಾಳಯ ಮಾಡಲಿದೆ. (ಈಗಾಗಲೇ ಮಾಡಿದೆ).

ದೇಶದ ರಾಜಕೀಯದ ಮೇಲೂ ಪರಿಣಾಮ
ಜೆಡಿಎಸ್-ಕಾಂಗ್ರೆಸ್ನ ಈ ಉಪಚುನಾವಣೆ ಗೆಲುವು ದೇಶದ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇಲ್ಲದೇ ಇಲ್ಲ. ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆ ಕೈಜೋಡಿಸಿ ಗೆಲುವು ಸವಿಯಬಹುದು ಆ ಮೂಲಕ ಬಿಜೆಪಿಯನ್ನು ಸುಲಭವಾಗಿ ಮಣಿಸಬಹುದು ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶವನ್ನು ಉದಾಹರಣೆಯಾಗಿ, ಮಹಾಘಟಬಂಧನ್ ಸ್ಥಾಪಿಸಲು ಆಸಕ್ತವಾಗಿರುವ ಕಾಂಗ್ರೆಸ್ ಮತ್ತು ಇತರ ನಾಯಕರು ಬಳಸಬಹುದು.

ಭಿನ್ನಮತೀಯರಿಗೆ ನಡುಕ ಹುಟ್ಟಿಸಿದ ಫಲಿತಾಂಶ
ಕಾಂಗ್ರೆಸ್ ಭಿನ್ನಮತೀಯ ಶಾಸಕರಿಗೆ ಈ ಫಲಿತಾಂಶ ನಡುಕ ಹುಟ್ಟಿಸಿರುವುದು ಸುಳ್ಳಲ್ಲ. ಪಕ್ಷಕ್ಕೆ ಕೈಕೊಡುತ್ತೇವೆಂದು ಭೀತಿ ಹುಟ್ಟಿಸುವವರಿಗೆ, ಮೈತ್ರಿ ಮಾಡಿಕೊಂಡು ನಿಮ್ಮನ್ನೇ ಸೋಲಿಸುತ್ತೇವೆ ಎಂದು ಮುಖಂಡರು ಎದುರು ಸವಾಲು ಹಾಕಬಹುದು. ಸಂಪುಟ ವಿಸ್ತರಣೆ ಹತ್ತಿರದಲ್ಲೇ ಇರುವ ಕಾರಣ ಕಾಂಗ್ರೆಸ್ ಮುಖಂಡರು ಈ ಉಪಚುನಾವಣೆ ಫಲಿತಾಂಶವನ್ನು ಅತೃಪ್ತರನ್ನು ತಹಬದಿಗೆ ತರಲು ಬಳಸಬಹುದು.












Click it and Unblock the Notifications