ಬಜೆಟ್ ಮಂಡನೆ ನಂತರ ಹುಟ್ಟಿಕೊಂಡ ‘ಆ’ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?
ಬೆಂಗಳೂರು, ಮಾರ್ಚ್ 10: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ 16ನೇ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಇದನ್ನು ಸರಿಗಟ್ಟುವುದು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ. ಪ್ರತಿ ಬಾರಿಯೂ ಯಾವುದೇ ಸರ್ಕಾರವಿದ್ದರೂ ಬಜೆಟ್ ಮಂಡನೆಯ ಬಳಿಕ ಬಜೆಟ್ ಗೆ ಸಂಬಂಧಿಸಿದಂತೆ ಪರವಿರೋಧಗಳ ಚರ್ಚೆ ಒಂದಷ್ಟು ದಿನ ಜೀವಂತವಾಗಿರುತ್ತದೆ. ಆ ನಂತರ ಎಲ್ಲರೂ ಮರೆತು ಬಿಡುತ್ತಾರೆ. ಆದರೆ ಈ ಬಾರಿ ಬಜೆಟ್ ಬಳಿಕ ಬೇರೆಯದ್ದೇ ಆದ ಚರ್ಚೆಗಳು ಮುನ್ನಲೆಗೆ ಬರುತ್ತಿದ್ದು, ಮುಂದಿನ ಬಜೆಟ್ ನ್ನು ಯಾರು ಮಂಡಿಸುತ್ತಾರೆ ಎಂಬ ಪ್ರಶ್ನೆಯೊಂದು ರಾಜಕೀಯ ಪಡಸಾಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿದೆ.
ಸಾಮಾನ್ಯವಾಗಿ ಬಜೆಟ್ ಮಂಡನೆಯ ನಂತರ ಆಡಳಿತ ಪಕ್ಷದವರು ಅದನ್ನು ಹೊಗಳುತ್ತಾರೆ. ವಿರೋಧ ಪಕ್ಷದವರು ತೆಗಳುತ್ತಾರೆ. ಇದು ಇದ್ದದ್ದೇ.. ಈ ಬಾರಿಯಂತೂ ಬಜೆಟ್ ವಿಚಾರ ಇನ್ನೊಂದಷ್ಟು ದಿನಗಳ ಕಾಲ ಸುದ್ದಿಯಲ್ಲಿರುತ್ತದೆ ಎನ್ನುವುದನ್ನು ತಳ್ಳಿ ಹಾಕಲಾಗದು. ಸಿದ್ದರಾಮಯ್ಯ ಬಜೆಟ್ ಕುರಿತಂತೆ ವಿಶ್ಲೇಷಣೆಗಳು ಬೇರೆ, ಬೇರೆ ರೀತಿಯಲ್ಲಿ ನಡೆಯುತ್ತಿವೆ.

ಇದೆಲ್ಲದರ ನಡುವೆ ರಾಜಕೀಯವಾಗಿ ಹತ್ತು ಹಲವು ಸಂಶಯಗಳು, ಚರ್ಚೆಗಳು, ಹುಟ್ಟಿಕೊಂಡಿದ್ದು, ಮುಂದಿನ ದಿನಗಳಲ್ಲಿ ವಿಪಕ್ಷಗಳು ಇದನ್ನು ಹೇಗೆ ಬಳಸಿಕೊಳ್ಳುತ್ತವೆ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಆಡಳಿತ ಪಕ್ಷದಲ್ಲಿಯೇ ಮುಂದಿನ ಬಜೆಟ್ ನ್ನು ಮಂಡಿಸುವವರು ಯಾರು ಎಂಬ ಗೊಂದಲವೂ ಇಲ್ಲದಿಲ್ಲ. ಹೀಗಾಗಿಯೇ ಈ ವಿಚಾರದಲ್ಲಿ ರಾಜಕೀಯ ಮತ್ತು ಜನವಲಯ ಹೀಗೆ ಎರಡು ಕಡೆಯೂ ಚರ್ಚೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ಬಳಿಕ ಅವರ ಬಣದ ಶಾಸಕರು ಮತ್ತು ಸಚಿವರಿಗೆ ಶಕ್ತಿ ಬಂದಂತಾಗಿದೆ. ಜತೆಗೆ ಸಿಎಂ ಅಧಿಕಾರ ಹಸ್ತಾಂತರವಿಲ್ಲ ಮುಂದೆಯೂ ಸಿದ್ದರಾಮಯ್ಯ ಅವರೇ ಸಿಎಂ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದು, ಇದರೊಂದಿಗೆ ಈ ವಿಚಾರಕ್ಕೆ ಬರಬೇಡಿ ಎಂಬ ಪರೋಕ್ಷ ಸಂದೇಶವನ್ನು ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸುವ ಕೆಲಸವನ್ನು ಬೆಂಬಲಿಗರು ತುಂಬಾ ಚೆನ್ನಾಗಿಯೇ ಮಾಡುತ್ತಿದ್ದಾರೆ.

ಹೀಗಾಗಿಯೇ ಸಿದ್ದರಾಮಯ್ಯನವರು 19 ಬಜೆಟ್ ಮಂಡನೆ ಮಾಡುತ್ತಾರೆಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಮುಂದೆಯೂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟು ಕೊಡಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುವ ಕೆಲಸವನ್ನು ಮಾಡಿದ್ದಾರೆ.
ಋಣಮುಕ್ತರಾದರಾ ಸಿಎಂ ಸಿದ್ದರಾಮಯ್ಯ?
ಈಗಾಗಲೇ ಡಿ.ಕೆ.ಶಿವಕುಮಾರ್ ನಾನು ಹಿಂದೂವಾಗಿ ಹುಟ್ಟಿದ್ದೇನೆ.. ಹಿಂದೂವಾಗಿಯೇ ಸಾಯುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಜತೆಗೆ ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿ ಬಂದಿದ್ದಾರೆ. ಅದರಾಚೆಗೆ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದೆಲ್ಲ ಬೆಳವಣಿಗೆ ಕಾಂಗ್ರೆಸ್ ಜತೆಗೆ ನಿಂತಿರುವ ಅಲ್ಪ ಸಂಖ್ಯಾತ ಮತದಾರರಿಗೆ ಗೊಂದಲ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವ ಸಲುವಾಗಿ ಅವರಿಗೆ ಬಜೆಟ್ ನಲ್ಲಿ ಒಂದಷ್ಟು ಯೋಜನೆಯನ್ನು ಘೋಷಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂಬುದನ್ನು, ಸಿದ್ದರಾಮಯ್ಯ ಅವರು ಸಾರಿದ್ದಾರೆ. ಅಲ್ಲದೆ ತಮಗೆ ಮತನೀಡಿ ಅಧಿಕಾರಕ್ಕೆ ತರುವಲ್ಲಿ ಸಹಾಯ ಮಾಡಿದ ಆ ವರ್ಗದ ಋಣ ತೀರಿಸಿಕೊಂಡಿದ್ದಾರೆ.

ಯಾವುದೇ ಸರ್ಕಾರವಿರಲಿ ಸಂವಿಧಾನದ ಆಶಯದಂತೆ ಎಲ್ಲರಿಗೂ ಎಲ್ಲವನ್ನು ತಲುಪಿಸಲೇ ಬೇಕಾಗುತ್ತದೆ. ಆದರೆ ಸಿದ್ದರಾಮಯ್ಯ ಅವರು ಒಂದಷ್ಟು ಯೋಜನೆಗಳನ್ನು ಘೋಷಣೆ ಮಾಡಿ ಅಲ್ಪಸಂಖ್ಯಾತ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ಇನ್ನಷ್ಟು ನಂಬಿಕೆ ಬರುವಂತಾಗಿದೆ. ಎಲ್ಲೋ ಒಂದು ಕಡೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಗಳಿಂದ ಮುಕ್ತವಾಗಲು ಕೆಲವೊಂದು ಯೋಜನೆಗಳನ್ನು ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಆದರೆ ಅದರಿಂದ ಲಾಭವಾಗುತ್ತಾ ಗೊತ್ತಿಲ್ಲ.
ಮುಂದಿನ ಬಜೆಟ್ ಮಂಡಿಸುವವರ ಬಗ್ಗೆ ಚರ್ಚೆ
ಬಿಜೆಪಿ ಸಿದ್ದರಾಮಯ್ಯ ಅವರ ಬಜೆಟ್ ನ್ನು ಹಲಾಲ್ ಬಜೆಟ್ ಎಂದು ಟೀಕೆ ಮಾಡಿದೆ. ಆ ಮೂಲಕ ಹಿಂದೂ ವಿರೋಧಿ ಎಂಬುದಾಗಿ ಬಿಂಬಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹಿಂದೆ ಸಿದ್ದರಾಮಯ್ಯ ಅವರು ಅಧಿಕಾರ ನಡೆಸಿದ ವೇಳೆಯೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಬಹುಸಂಖ್ಯಾತ ಹಿಂದೂಗಳಲ್ಲಿ ಸಿದ್ದರಾಮಯ್ಯ ಹಿಂದೂವಿರೋಧಿ ಎಂಬ ಭಾವನೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಬಜೆಟ್ ನ್ನೇ ಮುಂದಿಟ್ಟುಕೊಂಡು ಆ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಸಿದ್ದರಾಮಯ್ಯನವರ ಅದೃಷ್ಟ ಚೆನ್ನಾಗಿದೆ. ಕಾರಣ ವಿಪಕ್ಷ ಬಿಜೆಪಿ ಹೋಳಾಗಿದೆ. ಇಲ್ಲಿ ನಾಯಕರು ಒಗ್ಗಟ್ಟಿಲ್ಲದ ಕಾರಣ ಅವರ ಹೋರಾಟ ಫಲ ಕೊಡಲ್ಲ ಎನ್ನುವುದು ಅಷ್ಟೇ ಸತ್ಯ.
ಮುಂದಿನ ದಿನಗಳು ಹೇಗಿವೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಗೆ ಬಿಟ್ಟು ಕೊಡುತ್ತಾರಾ? ಅಥವಾ ಅವರೇ ಉಳಿಸಿಕೊಂಡು ಮುಂದಿನ ಬಜೆಟ್ ಮಂಡಿಸುತ್ತಾರಾ? ಹೀಗೆ ಪ್ರಶ್ನೆಗಳು ಮೇಲಿಂದ ಮೇಲೆ ಹುಟ್ಟಿಕೊಳ್ಳುತ್ತಾ ಹೋಗುತ್ತಿವೆ. ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದು ಹಿಂದಿನಿಂದಲೂ ಪ್ರಚಲಿತದಲ್ಲಿರುವ ಮಾತಾಗಿದ್ದು, ಆ ಮಾತಿನಂತೆಯೇ ಆಗಾಗ್ಗೆ ಹೊಸ, ಹೊಸ ಬೆಳವಣಿಗೆಗಳು ನಡೆದಿವೆ. ಆದ್ದರಿಂದ ಬಜೆಟ್ ನಂತರ ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.












Click it and Unblock the Notifications