ಯಡಿಯೂರಪ್ಪ ಸೂಚಿಸಿದ ವ್ಯಕ್ತಿಯೇ ರಾಜ್ಯದ ಮುಂದಿನ ಸಿಎಂ?
ಬೆಂಗಳೂರು, ಮೇ. 26: ಬಿ. ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ವಿಚಾರದಲ್ಲಿ ಕೇಂದ್ರ ವರಿಷ್ಠರು ಎಚ್ಚರಿಕೆ ಹೆಜ್ಜೆ ಇಡಬೇಕು. ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿಸುವ ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ಬಿಜೆಪಿಯ ಭವಿಷ್ಯ ರಾಜ್ಯದಲ್ಲಿ ಕರಾಳವಾಗಲಿದೆ. ಈ ಸತ್ಯ ಅರಿತಿರುವ ದಿಲ್ಲಿ ನಾಯಕರು ಯಡಿಯೂರಪ್ಪ ಅವರ ಸಮ್ಮತಿ ಮೇರೆಗೆ ಅವರು ಸೂಚಿಸಿದ ವ್ಯಕ್ತಿಯನ್ನು ಸಿಎಂ ಮಾಡಿದರೂ ಅಚ್ಚರಿ ಪಡಬೇಕಿಲ್ಲ!
ವಯೋ ಸಹಜ ಹಾಗೂ ಕೊರೊನಾ ನಿರ್ವಹಣೆ ವಿಫಲ ಹಿನ್ನೆಲೆಯಲ್ಲಿ ಸಿಎಂ ಸ್ಥಾನ ಬದಲಿಸುವ ಚಟುವಟಿಕೆ ಗರಿಗೆದರಿದೆ. ಇನ್ನೊಂದಡೆ ಸಿಎಂ ಯಾರು ಎಂಬ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಇದರ ನಡುವೆ ಯಡಿಯೂರಪ್ಪ ಅವರ ವಿರೋಧದ ನಡುವೆ ಸಿಎಂ ಸ್ಥಾನದಲ್ಲಿ ಕೂತು ಆಡಳಿತ ನಡೆಸುವುದು ಮುಳ್ಳಿನ ಹಾದಿಯಾಗಲಿದೆ. ಯಡಿಯೂರಪ್ಪ ಅವರನ್ನು ವಿರೋಧದ ನಡುವೆ ಆಡಳಿತ ನಡೆಸಿದ್ದೇ ಆದಲ್ಲಿ ಭವಿಷ್ಯದಲ್ಲಿ ಬಿಜೆಪಿ ಪಕ್ಷ ಉಳಿಯಲಿದೆಯೇ? ಎಂಬ ಚರ್ಚೆ ಕೂಡ ಆರಂಭವಾಗಿದೆ.
ಕರ್ನಾಟಕದ ಹೊಸ ಮುಖ್ಯಮಂತ್ರಿ ಹೆಸರು ಘೋಷಿಸಲಿರುವ ಪ್ರಧಾನಿ ಮೋದಿ!
ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಿಸಿದ ಅಗ್ರಗಣ್ಯ ನಾಯಕ. ಜಾತಿ ವಿಚಾರವಾಗಿ ಹೇಳುವುದಾದರೆ ಅಖಂಡ ಕರ್ನಾಟಕದ ಲಿಂಗಾಯುತ ಸಮುದಾಯದ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಬಿಜೆಪಿ ಪಕ್ಷದಲ್ಲಿ ಇರಬಹುದು. ಜಾತಿ ವಿಚಾರಕ್ಕೆ ಬಂದರೆ ಯಡಿಯೂರಪ್ಪಗೆ ತೊಂದರೆ ಆಗುತ್ತದೆ ಎಂದರೆ ಎಲ್ಲಾ ಪಕ್ಷದ ನಾಯಕರು ಬೆಂಬಲಕ್ಕೆ ನಿಲ್ಲುತ್ತಾರೆ. ಅಷ್ಟರ ಮಟ್ಟಿಗೆ ಪ್ರಭಾವ ಇರುವ ನಾಯಕ ಯಡಿಯೂರಪ್ಪ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಮಠ ಮಾನ್ಯಗಳಿಗೆ ನೇರವಾಗಿ ಸಾವಿರಾರು ಕೋಟಿ ಬಿಡುಗಡೆ ಮಾಡಿದ್ದು, ಮಠದ ಸ್ವಾಮೀಜಿಗಳೆಲ್ಲರೂ ಯಡಿಯೂರಪ್ಪರನ್ನೇ ಏಕೈಕ ನಾಯಕ ಅಂತ ನಂಬಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡರೆ ಇಡೀ ಲಿಂಗಾಯುತ ಸಮುದಾಯವನ್ನೇ ಎದುರು ಹಾಕಿಕೊಂಡು ಯಡಿಯೂರಪ್ಪ ವಿರೋಧವಾಗಿ ಸಿಎಂ ಬದಲಾವಣೆ ಮಾಡುವ ಧೈರ್ಯ ಕೇಂದ್ರ ನಾಯಕರು ತೋರಿಸಲಿದ್ದಾರೆಯೇ ?
ಅಧಿಕಾರ ಕೊಟ್ಟವರನ್ನೇ ಬಿಟ್ಟಿಲ್ಲ ಯಡಿಯೂರಪ್ಪ: ದಶಕದ ಹಿಂದಿನ ಕರ್ನಾಟಕ ರಾಜಕೀಯ ಇತಿಹಾಸ ನೋಡಿದರೆ ಕಣ್ಣೆದುರು ಬರುವುದು ಗಣಿ ರೆಡ್ಡಿಗಳು. ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿ ಬಿಜೆಪಿ ಪಕ್ಷಕ್ಕೆ ಮೊದಲು ಅಧಿಕಾರ ತಂದುಕೊಟ್ಟು ಯಡಿಯೂರಪ್ಪ ಅವರನ್ನು ಕುರ್ಚಿಯಲ್ಲಿ ಕೂರಿಸಿದ್ದು ಜನಾರ್ದನ ರೆಡ್ಡಿ. ಶಾಸಕರ ಖರೀದಿ ಮಾಡಿ ಬಿಜೆಪಿಗೆ ಅಧಿಕಾರ ತಂದುಕೊಟ್ಟವರು. ರೆಡ್ಡಿಗಳ ಕೈ ಗೊಂಬೆಯಾಗಿ ಯಡಿಯೂರಪ್ಪ ಮೊದಲ ಸಿಎಂ ಆಗಿ ಆಡಳಿತ ನಡೆಸುತ್ತಿದ್ದರು. ದಿನಗಳು ಕಳೆದಂತೆ ಜನಾರ್ದನ ರೆಡ್ಡಿ ಗಣಿ ಅಕ್ರಮದ ತನಿಖೆ ಎದುರಿಸುವ ಪರಿಸ್ಥಿತಿ ಎದುರಾಯಿತು. ಗಣಿರೆಡ್ಡಿಯ ವಿರೋಧಿಗಳು ಯಡಿಯೂರಪ್ಪ ಜತೆ ಜೋಡಿಸಿದ್ದೇ, ಜನಾರ್ದನ ರೆಡ್ಡಿಯ ಪ್ರಭಾವ ಸಂಪೂರ್ಣ ಕುಸಿದು ಹೋಯಿತು. ಗಣಿ ಕೇಸು, ಸಿಬಿಐ ತನಿಖೆ, ಲೋಕಾಯುಕ್ತ ವರದಿ ಎದುರಿಸುವುದರಲ್ಲಿ ಕಾಲ ಕಳೆಯುವಂತಾಯಿತು. ಅಲ್ಲಿಂದ ಯಡಿಯೂರಪ್ಪ ಮಠ ಮಾನ್ಯಗಳನ್ನು ಬೆಳೆಸಿದರು. ಕೈಗೆ ತೋಚಿದಷ್ಟು ಹಣವನ್ನು ಮಠ ಮಾನ್ಯಗಳಿಗೆ ಬಜೆಟ್ನಲ್ಲಿ ನೀಡಿದರು. ಹೀಗೆ ಲಿಂಗಾಯುತ ಸಮುದಾಯದ ಬಹುದೊಡ್ಡ ನಾಯಕನಾಗಿ ಬೆಳೆದು ನಿಂತರು.
Recommended Video
ಪಕ್ಷದ ವಿಚಾರಕ್ಕೆ ಬಂದರೆ, ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡ ಬಿಜೆಪಿಗೆ ಪ್ರತಿಯಾಗಿ ಕೆಜೆಪಿ ಪಕ್ಷವನ್ನು ಕಟ್ಟಿದರು. ನನ್ನ ಒಂದು ಕಣ್ಣು ಓದರೂ ಪರವಾಗಿಲ್ಲ, ನೀನು ಉಳಿಯಬಾರದು ಎಂಬ ಯಡಿಯೂರಪ್ಪ ಅವರ ತೀರ್ಮಾನ ಬಿಜೆಪಿಯ ನಿರ್ನಾಮಕ್ಕೆ ನಾಂದಿ ಹಾಡಿತ್ತು. ಯಡಿಯೂರಪ್ಪ ಇಲ್ಲದ ಬಿಜೆಪಿ ಊಹಿಸಿಕೊಳ್ಳದ ನಾಯಕರು ಕೊನೆಗೂ ಯಡಿಯೂರಪ್ಪ ಅವರ ಮನವೊಲಿಸಿ ಬಿಜೆಪಿಗೆ ಕರೆ ತಂದಿರುವುದು ಯಾರೂ ಮರೆತಿಲ್ಲ. ಹೀಗಾಗಿ ಯಡಿಯೂರಪ್ಪ ಅವರನ್ನು ವಿರೊಧ ಕಟ್ಟಿಕೊಂಡು ಬಿಜೆಪಿ ಪಕ್ಷದ ಅಸ್ತಿತ್ವವನ್ನು ಊಹಿಸಿಕೊಳ್ಳುವುದು ಕಷ್ಟ. ಹೀಗಾಗಿ ಯಡಿಯೂರಪ್ಪ ಅವರನ್ನು ಬಿಟ್ಟು ನೂತನ ಸಿಎಂ ನೇಮಕ ಮಾಡುವುದು ಕಷ್ಟದ ಪರಿಸ್ಥಿತಿ. ಯಡಿಯೂರಪ್ಪ ಅವರನ್ನು ಸೂಚಿಸಿದ ವ್ಯಕ್ತಿಯನ್ನೇ ಈ ಬಾರಿಯೂ ಸಿಎಂ ಮಾಡುತ್ತಾರೆ ಎಂಬ ವಾದ ಯಡಿಯೂರಪ್ಪ ಅವರ ಆಪ್ತ ವಲಯದ ಮಾತು. ಇದನ್ನು ಪರಿಗಣಿಸಿ ಹೇಳುವುದಾದರೆ ಒಂದು ಆಯಾಮದಲ್ಲಿ ಯಡಿಯೂರಪ್ಪ ಅವರು ಸೂಚಿಸಿದ ವ್ಯಕ್ತಿಯೇ ಸಿಎಂ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.