ವರುಣಾ ಕ್ಷೇತ್ರದಲ್ಲಿ ಬಿಎಸ್ ವೈ ಹಾಗೂ ಸಿದ್ಧರಾಮಯ್ಯ ನಡುವೆ ಒಳ ಒಪ್ಪಂದ: ಬಿ ವೈ ವಿಜಯೇಂದ್ರ ಹೇಳಿದ್ದೇನು?
ಮೈಸೂರು,ಏಪ್ರಿಲ್22: ಚುನಾವಣಾ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ವಿಜಯೇಂದ್ರ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ ನಡುವೆ ಯಾವುದೇ ರೀತಿಯ ಒಳ ಒಪ್ಪಂದವಾಗಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ವರುಣ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ಧಾರೆ. ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ-ಸಿದ್ಧರಾಮಯ್ಯ ನಡುವೆ ಯಾವುದೇ ರೀತಿಯ ಒಳ ಒಪ್ಪಂದವಾಗಿಲ್ಲ. ಯಡಿಯೂರಪ್ಪ ನವರು ಎಂದೂ ಕೂಡ ಒಳ ಒಪ್ಪಂದದ ರಾಜಕೀಯ ಮಾಡಿಲ್ಲ. ವರುಣದಿಂದಲೇ ರಾಜ್ಯದ ಜನರು ನನ್ನನ್ನು ಗುರುಸಿದರು. ಹೀಗಾಗಿ ವರುಣ ಮೇಲೆ ನನಗೆ ಅಪಾರ ಪ್ರೀತಿಯಿದೆ. ಆದರೆ ಯಡಿಯೂರಪ್ಪ ಅವರು ಸತತವಾಗಿ ಪ್ರತಿನಿಧಿಸುತ್ತಾ ಬಂದಿದ್ಧ ಶಿಕಾರಿಪುರದಲ್ಲಿ ಪ್ರತಿನಿಧಿಸಬೇಕಾಗಿದ್ಧರಿಂದ ವರುಣದಿಂದ ಸ್ಪರ್ಧಿಸಲಾಗಿಲ್ಲ. ನಾನು ಮತ್ತೊಮ್ಮೆ ವರುಣಕ್ಕೆ ಬಂದು ಸೋಮಣ್ಣನವರ ಪರ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಬಗ್ಗೆ ನಾನು ಕೀಳಾಗಿ ಟೀಕಿಸುವುದಿಲ್ಲ. ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಬಹುದಿತ್ತು. ಆದರೆ ಕಾಂಗ್ರೆಸ್ ಗೆ ಹೋಗಿದ್ದು ದೊಡ್ಡ ದುರಂತ. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಕಾಂಗ್ರೆಸ್ ಪಕ್ಷ ಸೇರಿದ್ದು ಬೇಸರ ತರಿಸಿದೆ. ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ರನ್ನು ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತು. ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಸೋಲಲಿದ್ದು, ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿ. ವೈ ವಿಜಯೇಂದ್ರ ತಿಳಿಸಿದರು.
ರಾಜ್ಯದ ಜನ ಬಿಜೆಪಿ ಪರ ಇದ್ದಾರೆ. ಕಾಂಗ್ರೆಸ್ ಜೆಡಿಎಸ್ ಗೆ ಖಂಡಿತವಾಗಿ ಬೆಂಬಲ ಸಿಗಲ್ಲ. ಸ್ಪಷ್ಟ ಬಹುಮತ ಬರತ್ತೆ. 130ಕ್ಕೂ ಹೆಚ್ಚು ಸ್ಥಾನ ಬಿಜೆಪಿಗೆ ಸಿಗಲಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಸಾಮರಸ್ಯ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಗೆಲುವು ನಿಶ್ಚಿತ: ಯತೀಂದ್ರ
ಇನ್ನೂ ವರುಣಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಗೆಲ್ಲುವುದು ನಿಶ್ಚಿತ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ದ ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ಸಿದ್ದರಾಮಯ್ಯನವರನ್ನ ಸೋಲಿಸಲು ಸಾಧ್ಯವಿಲ್ಲ ಎಂದʼರು.
ಸಿದ್ದರಾಮಯ್ಯ ಸೋಲಿನ ಭಯದಿಂದ ಧವನ್ ರಾಕೇಶ್ ಕರೆ ತಂದು ಪ್ರಚಾರ ಮಾಡುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಮಾತನಾಡಿ, ಯತೀಂದ್ರ ಸಿದ್ಧರಾಮಯ್ಯ, ಪ್ರತಾಪ್ ಸಿಂಹ ಅವರ ಮನೆಯವರನ್ನ ಎಲ್ಲಿಯೂ ಕರೆದುಕೊಂಡು ಹೋಗಿಲ್ವೇ. ಧವನ್ ರಾಕೇಶ್ ನಾಮಪತ್ರ ಸಲ್ಲಿಸುವ ದಿನ ತಾತನಿಗೆ ಶುಭ ಕೋರಲು ಬಂದಿದ್ದ. ಧವನ್ ರಾಕೇಶ್ ಎಲ್ಲಿಯೂ ಸಹ ಪ್ರಚಾರಕ್ಕೆ ಬಂದಿಲ್ಲ. ನಮ್ಮ ಕುಟುಂಬ ಯಾವತ್ತೂ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ತಿರುಗೇಟು ನೀಡಿದರು.
ಇನ್ನೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾವ ಕ್ಷೇತ್ರದಲ್ಲಾದರೂ ಸ್ಪರ್ಧೆ ಮಾಡಬಹುದು. ಸಚಿವರಾದ ವಿ ಸೋಮಣ್ಣನವರ ವರುಣ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications