ಬ್ರಾಹ್ಮಣರ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ನಿಗಮ ಅಥವಾ ಪ್ರಾಧಿಕಾರ?
ರಾಜ್ಯ ಸರಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನೋ ಅಥವಾ ಪ್ರಾಧಿಕಾರವನ್ನೋ ರಚಿಸಲು ಮುಂದಾಗಿದೆ. ಬ್ರಾಹ್ಮಣರಿಗಷ್ಟೇ ಅಲ್ಲ, ವೈಶ್ಯ ಸಮಾಜದ ಅಭಿವೃದ್ಧಿಗೂ ಇಂಥದ್ದೊಂದು ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ ಎಂಬುದು ಸದ್ಯದ ಸುದ್ದಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮೇಲ್ಜಾತಿಗಳ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯತ್ನ ಇದಾಗಿರಬಹುದು.
ಆದರೆ, ಮೊದಲಿಗೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರವೋ ನಿಗಮವೋ ರಚನೆಯಾದರೆ ಅದರಿಂದ ಆ ಸಮುದಾಯದಲ್ಲೇ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಒಂದಿಷ್ಟು ಅನುದಾನ ಮೀಸಲಿಡಬಹುದು. ವಿದ್ಯಾಭ್ಯಾಸ, ವೃತ್ತಿ, ಉದ್ಯಮ ಸೇರಿದಂತೆ ಸಮುದಾಯದ ಅಭಿವೃದ್ಧಿಗಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲು ಹಣಕಾಸಿನ ನೆರವು ನೀಡಬಹುದು.
ಅರ್ಚಕರ ಮದುವೆಯಾದರೆ ಸರಕಾರದಿಂದ 3 ಲಕ್ಷ, ಮದುವೆ ಖರ್ಚಿಗೆ 1 ಲಕ್ಷ
ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ ತೆಲಂಗಾಣದಲ್ಲಿ ಈಚೆಗೆ ಘೋಷಣೆ ಮಾಡಿರುವ ಅರ್ಚಕರ ಮದುವೆಗೆ ಹಣಕಾಸಿನ ನೆರವಿನಂಥ, ಆರ್ಥಿಕ ಸಹಾಯದಂಥ ಯೋಜನೆಗಳನ್ನು ಕೂಡ ರೂಪಿಸಬಹುದು. ಈ ಆಲೋಚನೆ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೆದುಳು ಕೆಲಸ ಮಾಡಿದಂತಿದೆ. ಶಿವಮೊಗ್ಗ ನಗರ ಶಾಸಕ ಪ್ರಸನ್ನ್ ಕುಮಾರ್, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೆ ಎಂದಿದ್ದಾರೆ.
ಬಹು ದಿನಗಳ ಬೇಡಿಕೆ
ಬ್ರಾಹ್ಮಣ ಸಮುದಾಯದ ಬಹುದಿನಗಳ ಬೇಡಿಕೆಯಾದ ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರ ನೆರವು ನೀಡಬೇಕು, ಅದಕ್ಕಾಗಿ ಬ್ರಾಹ್ಮಣ ಸಮುದಾಯ ಅಭಿವೃದ್ಧಿ ನಿಗಮವನ್ನೋ ಪ್ರಾಧಿಕಾರವನ್ನೋ ರಚಿಸಬೇಕು ಎಂಬುದನ್ನು ಈಗ ಪರಿಗಣಿಸಿದಂತಿದೆ. ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಸಿದ್ದರಾಮಯ್ಯ ಅವರು ಮೇಲ್ಜಾತಿಗಳ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಈ ಯೋಜನೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪ್ರಸನ್ನಕುಮಾರ್ ಮನವಿ
ಶಿವಮೊಗ್ಗ ನಗರ ಶಾಸಕ ಪ್ರಸನ್ನ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಮಾಡಿಕೊಡಲು ಪ್ರಾಧಿಕಾರವನ್ನೋ, ಅಭಿವೃದ್ಧಿ ನಿಗಮವನ್ನೋ ರಚಿಸಬೇಕು ಎಂಬ ಬೇಡಿಕೆಯನ್ನಿಟ್ಟಿದ್ದೆ. ಅದನ್ನು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ತೆಗೆದುಕೊಂಡು, ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಬ್ರಾಹ್ಮಣ, ವೈಶ್ಯರಿಗೆ ನೆರವು
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಈ ಬಗ್ಗೆ ಮಾತನಾಡಿದ್ದು, ವೈಶ್ಯ ಹಾಗೂ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸರಕಾರದಿಂದ ನೆರವು ನೀಡಬೇಕು ಎಂಬ ಚಿಂತನೆ ಇತ್ತು. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಪ್ರಾಧಿಕಾರ ಅಥವಾ ನಿಗಮ ರಚಿಸಲು ಸರಕಾರ ಚಿಂತಿಸಿದೆ ಎಂದಿದ್ದಾರೆ.
ಚುನಾವಣೆ ಹತ್ತಿರ ಬಂದಾಗ ಎಲ್ಲ ಜಾತಿಗಳ ನೆನಪು
ಆದರೆ, ಸರಕಾರದ ಈ ನಡೆಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಬ್ರಾಹ್ಮಣರು, ಲಿಂಗಾಯತರು ಎಲ್ಲ ನೆನಪಾಗುತ್ತಾರೆ. ಎಲ್ಲ ಜಾತಿಗಳ ಪಟ್ಟಿ ಇಟ್ಟುಕೊಂಡು ಎಲ್ಲರಿಗೂ ಅಭಿವೃದ್ಧಿ ಪ್ರಾಧಿಕಾರ ರಚಿಸಲಿ. ಎಲ್ಲರನ್ನೂ ಎಸ್ ಸಿ, ಎಸ್ ಟಿಗೆ ಸೇರಿಸಲಿ ಎಂದಿದ್ದಾರೆ.