'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಬುಕ್ಕಿಂಗ್ ಆರಂಭ, ದರ
ಬೆಂಗಳೂರು, ಅಕ್ಟೋಬರ್ 30; ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯೋಜನೆಗೆ ಬುಕ್ಕಿಂಗ್ ಆರಂಭವಾಗಿದೆ. ಮುಜರಾಯಿ ಇಲಾಖೆ ವತಿಯಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾಶಿಯಾತ್ರೆ ಹೋಗುವ ಭಕ್ತರಿಗೆ 5 ಸಾವಿರ ರೂ. ಸಬ್ಸಿಡಿ ಸಹ ಸಿಗಲಿದೆ.
ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯೋಜನೆಯ ಕುರಿತು ಮಾಹಿತಿ ನೀಡಿದ್ದಾರೆ. ನವೆಂಬರ್ 11ರಂದು ವಾರಣಾಸಿಯ ಸಂಸದ, ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಈ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ; ಶೀಘ್ರವೇ ಮಾಡಲು ಸಿದ್ಧರಾಗಿ
ಯೋಜನೆ ಬುಕ್ಕಿಂಗ್ ಆರಂಭಿಸುವ ಸಚಿವರು ಕೆಲವು ದಿನಗಳ ಹಿಂದೆ ಐ. ಆರ್. ಸಿ. ಟಿ. ಸಿ, ಕೆ. ಎಸ್. ಟಿ. ಡಿ. ಸಿ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಯೋಜನೆಗಾಗಿಯೇ ವಿಶೇಷ ರೈಲನ್ನು ಬೆಂಗಳೂರಿನಲ್ಲಿ ಸಿದ್ಧಪಡಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ ರೈಲು ವಿನ್ಯಾಸ ಕಾರ್ಯ ಪೂರ್ಣಗೊಳ್ಳಲಿದ್ದು, ನವೆಂಬರ್ನಲ್ಲಿ ಯೋಜನೆ ಆರಂಭವಾಗಲಿದೆ.
ಕಾಶಿ ಅಭಿವೃದ್ಧಿ ಇಡೀ ದೇಶಕ್ಕೇ ಮಾರ್ಗಸೂಚಿಯಾಗಬಹುದು: ನರೇಂದ್ರ ಮೋದಿ
ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ನಲ್ಲಿ ಕಾಶಿಯ ಭವ್ಯತೆಯನ್ನು ಹೆಚ್ಚಿನ ಜನರು ನೋಡಲು ಅನುಕೂಲವಾಗುವಂತೆ ಕಾಶಿಗೆ ರಿಯಾಯಿತಿ ದರದ ಪ್ಯಾಕೇಜ್ ಘೋಷಣೆ ಮಾಡಿದ್ದರು. ಮುಜರಾಯಿ ಇಲಾಖೆ ಮೂಲಕ ಸರ್ಕಾರ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಎಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ.
'ದಿವ್ಯ ಕಾಶಿ ಭವ್ಯ ಕಾಶಿ' ಉದ್ಘಾಟನೆ: ರಾಜ್ಯದಲ್ಲೂ ಲೈವ್ ವೀಕ್ಷಣೆ
15 ಸಾವಿರ ರೂ. ದರ ನಿಗದಿ ಮಾಡಲಾಗಿದೆ
ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿ ಅನ್ವಯ ಪ್ಯಾಕೇಜ್ ದರ 15,000 ರೂ.ಗಳು. ಈ ಪ್ಯಾಕೇಜ್ 7 ರಾತ್ರಿ ಮತ್ತು 8 ಹಗಲು ಇರಲಿದೆ. ಈ ಪ್ಯಾಕೇಜ್ 4,161 ಕಿ. ಮೀ. ಸಂಚರಿಸಲಿದೆ. ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗ್ರಾಜ್-ಬೆಂಗಳೂರು ಮಾರ್ಗದಲ್ಲಿ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ರೈಲು ಸಂಚಾರ ನಡೆಸಲಿದೆ.
ಕರ್ನಾಟಕ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಈ ಪ್ಯಾಕೇಜ್ ಬುಕ್ ಮಾಡುವ ಪ್ರತಿಯೊಬ್ಬರಿಗೂ 5 ಸಾವಿರ ರೂ. ವಿಶೇಷ ರಿಯಾಯಿತಿ ಸಿಗಲಿದೆ ಎಂದು ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.
ದಿವ್ಯ ಕಾಶಿ, ಭವ್ಯ ಕಾಶಿ ನೋಡುವ ಅವಕಾಶ
ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಸಂಸದರಾದ ಬಳಿಕ ಕಾಶಿಯನ್ನು ಅಭಿವೃದ್ಧಿಗೊಳಿಸಿದ್ದಾರೆ. ದಿವ್ಯ ಕಾಶಿ, ಭವ್ಯ ಕಾಶಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಕರ್ನಾಟಕದ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾಶಿಯ ದರ್ಶನ ಮಾಡಲು ಅನುಕೂಲವಾಗುವಂತೆ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯೋಜನೆ ಆರಂಭಿಸಲಾಗಿದೆ.
ಈ ಯೋಜನೆಯ ವಿಶೇಷ ರೈಲು 14 ಬೋಗಿಗಳನ್ನು ಹೊಂದಿದೆ. 11 ಬೋಗಿ ಪ್ರಯಾಣಿಕರಿಗೆ ಮೀಸಲು. ಒಂದು ಬೋಗಿಯನ್ನು ದೇವಸ್ಥಾನದ ಮಾದರಿಯಲ್ಲಿ ವಿನ್ಯಾಸಗೊಳಿಸಿ, ಭಜನೆ ಮಾಡಲು ಅವಕಾಶ ನೀಡಲಾಗಿದೆ.
ಬೆಂಗಳೂರಿನಿಂದ ಹೊರಡುವ ರೈಲು
ಮುಜರಾಯಿ ಇಲಾಖೆ ಕೇಂದ್ರ ರೈಲ್ವೆ ಇಲಾಖೆ ಸಹಯೋಗದಲ್ಲಿ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಯೋಜನೆ ಆರಂಭಿಸುತ್ತಿದೆ. ಈ ಯೋಜನೆಯ ರೈಲು ಬೆಂಗಳೂರಿನಿಂದ ಹೊರಡಲಿದೆ. ಆದರೆ ಪ್ರಮುಖ ನಿಲ್ದಾಣಗಳಲ್ಲಿ ಭಕ್ತರು ರೈಲು ಹತ್ತಲು ಸಹ ಅವಕಾಶ ನೀಡಲಾಗಿದೆ.
ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗ ಮಾರ್ಗವಾಗಿ ಈ ರೈಲು ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ಗೆ ಸಂಚಾರ ನಡೆಸಲಿದೆ. ಈ ಪ್ಯಾಕೇಜ್ ವಾಸ್ತವ್ಯ, ಊಟ-ತಿಂಡಿ, ವಿಮೆ ವ್ಯವಸ್ಥೆ ಸಹ ಒಳಗೊಂಡಿದೆ.
ಬುಕ್ ಮಾಡಲು ವಿಳಾಸ ಇಲ್ಲಿದೆ
ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ ಪ್ಯಾಕೇಜ್ಗಾಗಿ ಭಕ್ತರು ಐಆರ್ಸಿಟಿಸಿ ಮತ್ತು ಐಟಿಎಂಎಸ್ ವೆಬ್ಸೈಟ್ ಮೂಲಕ ಅವಕಾಶ ನೀಡಲಾಗಿದೆ. ಈ ಪ್ಯಾಕೇಜ್ ದರ ಮೂಲತಃ 20 ಸಾವಿರ ರೂ.ಗಳು. ಆದರೆ ಕರ್ನಾಟಕ ಸರ್ಕಾರ ನೀಡುವ 5 ಸಾವಿರ ರೂ. ಸಬ್ಸಿಡಿ ಕಡಿತಗೊಳಿಸಿ ಜನರು 15 ಸಾವಿರ ರೂ. ಪಾವತಿ ಮಾಡಬೇಕಿದೆ.
ಶನಿವಾರದಿಂದಲೇ ಬುಕ್ಕಿಂಗ್ ಆರಂಭವಾಗಿದೆ ಜನರು ಬುಕ್ ಮಾಡಲು ವಿಳಾಸ https://www.irctctourism.com/pacakage_description?packageCode=SZKBG01