ಕಾಂಗ್ರೆಸ್ ಪಕ್ಷದವರಿಗೆ ಕರ್ನಾಟಕದ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ: ಬೊಮ್ಮಾಯಿ
ಉಡುಪಿ, ನವೆಂಬರ್ 7: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಸೋಮವಾರ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಜಾಗ ಕಬಳಿಸಿದವರು ಕಾಂಗ್ರೆಸ್ ಪಕ್ಷದವರು ಎಂದು ಟೀಕಿಸಿದರು. ಒಡೆದು ಆಳುವ ನೀತಿ ಕಾಂಗ್ರೆಸ್ಸಿಗರದು. ಕಾಂಗ್ರೆಸ್ ಪಕ್ಷದವರಿಗೆ ಕರ್ನಾಟಕದ ಜನರಿಗೆ ಮುಖ ತೋರಿಸುವ ನೈತಿಕತೆ ಇಲ್ಲ ಎಂದು ಆಕ್ಷೇಪಿಸಿದರು.
ಹಾಸ್ಟೆಲ್ ಕಟ್ಟಡ ವಿಚಾರದಲ್ಲಿ ಭ್ರಷ್ಟಾಚಾರ, ಅನ್ನ ಭಾಗ್ಯದಲ್ಲಿ ಕನ್ನ, ಬಿಡಿಎ, ಭೂಮಿ, ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ಸಿಗರು. ಎಸ್ಸಿ ಎಸ್ಟಿ ಮೀಸಲಾತಿ ವಿಚಾರದಲ್ಲಿ ನಮಗೆ ಧೈರ್ಯ ಇತ್ತು. ಆದರೆ, ಕಾಂಗ್ರೆಸ್ಗೆ ಆ ಧಮ್ ಇರಲಿಲ್ಲ ಎಂದು ಟೀಕಿಸಿದರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಕೆಲಸ ಮಾಡುತ್ತಿದೆ. ಇದನ್ನು ಗಮನಿಸಿ ಬಿಜೆಪಿ ಸರಕಾರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.
5 ಬಿಲಿಯನ್ ಡಾಲರ್ ಆರ್ಥಿಕತೆಯ ಚಿಂತನೆಗೆ 1 ಬಿಲಿಯನ್ ಡಾಲರ್ ಕೊಡುಗೆಯನ್ನು ನೀಡಲು ಕರ್ನಾಟಕವು ಸಂಕಲ್ಪ ಮಾಡಿದೆ. ಅನೇಕ ಕೈಗಾರಿಕೆಗಳು ಕರಾವಳಿಯಲ್ಲಿ ಹೂಡಿಕೆ ಮಾಡಲಿವೆ. ಕರ್ನಾಟಕದ ಅಭಿವೃದ್ಧಿಗೆ ಕರಾವಳಿಯ ಕೊಡುಗೆ ಮಹತ್ವದ್ದಾಗಲಿದೆ ಎಂದು ತಿಳಿಸಿದರು. ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್, 4 ಸಾವಿರ ಹೆಚ್ಚುವರಿ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಿರುವುದು, ರೈತ ವಿದ್ಯಾನಿಧಿ ಯೋಜನೆ ಜಾರಿಯನ್ನು ಉಲ್ಲೇಖಿಸಿದ ಅವರು, ವಿದ್ಯಾನಿಧಿಯನ್ನು ಮೀನುಗಾರರ ಮಕ್ಕಳಿಗೂ ಕೊಡಲಾಗುತ್ತಿದೆ ಎಂದರು.
ಜನರ ಸಂಕಷ್ಟ ನಿವಾರಿಸಲು ನಾವು ಶ್ರಮಿಸುತ್ತಿದ್ದೇವೆ. ಮೀನುಗಾರರಿಗೆ 5 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಮೀನುಗಾರರಿಗೆ ಹೆಚ್ಚುವರಿ ಕೆರೋಸಿನ್ ನೀಡಲು ಬದ್ಧವಿದ್ದೇವೆ. ಪಡಿತರ ಮೂಲಕ ಕುಚ್ಚಲಕ್ಕಿ ವಿತರಿಸಲಿದ್ದೇವೆ ಎಂದು ತಿಳಿಸಿದರು.
ಈ ಭಾಗದ 8 ಮೀನುಗಾರರ ಬಂದರು ಅಭಿವೃದ್ಧಿಗೆ ಹೆಚ್ಚುವರಿ ಹಣ ಕೊಡಲಾಗಿದೆ. ಕೆಲಸ ಶೀಘ್ರವೇ ನಡೆಯಲಿದೆ. 100 ಹೈಸ್ಪೀಡ್ ಬೋಟ್ ಮಂಜೂರು ಮಾಡಿದ್ದೇವೆ. ಇದೇ ವರ್ಷ ಮಂಜೂರಾತಿ ಸಿಗಲಿದ್ದು, ಶೇಕಡಾ 40ರ ಸಬ್ಸಿಡಿಯೂ ಸಿಗಲಿದೆ ಎಂದು ವಿವರಿಸಿದರು. ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿಜಿ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿ 12 ವರ್ಷ ಕಾಲ ಉತ್ತಮ ಆಡಳಿತ ನೀಡಿದವರು. ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದವರು. ಅವರ ನೇತೃತ್ವದಲ್ಲಿ ದೇಶವು ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದರು.
ಸಾಗರ್ ಮಾಲಾ ಯೋಜನೆಗಳ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಸಿಆರ್ಜಡ್ ನಿಯಮಾವಳಿಯಲ್ಲಿ ಬದಲಾವಣೆಗೆ ಬೇಡಿಕೆ ಇದ್ದುದನ್ನು ಅನುಮತಿ ಕೊಟ್ಟಿದ್ದಾರೆ. 3 ದಶಕಗಳ ಬೇಡಿಕೆ ಇದಾಗಿತ್ತು. ಕಡಲ ತೀರದ ಆರ್ಥಿಕತೆಗೆ ಇದು ವೇಗ ಕೊಡಲಿದೆ ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ದೂರದೃಷ್ಟಿ ಇರುವ ಕಾರ್ಯಕ್ರಮಗಳನ್ನು ಮೋದಿಜಿ ನೀಡಿದ್ದಾರೆ. ಕೊಂಕಣ ರೈಲ್ವೆ ವಿದ್ಯುದೀಕರಣಕ್ಕೆ ಬಿಜೆಪಿ ಕಾರಣ. ಗತಿ ಶಕ್ತಿ ಯೋಜನೆ ಮೂಲಕ ಬಂದರುಗಳನ್ನು ಮುಖ್ಯ ನಗರಗಳಿಗೆ ಜೋಡಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು. 2 ತಿಂಗಳಿಗೊಮ್ಮೆ ಅದರ ಪ್ರಗತಿಯನ್ನು ಪ್ರಧಾನಿಯವರೇ ಪರಿಶೀಲಿಸುತ್ತಿದ್ದಾರೆ ಎಂದರು.
ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಭಾಷಣದ ಸರಕಾಗಿತ್ತು. ಅಹಿಂದ ಈಗ ಉಳಿದಿಲ್ಲ. ಹಿಂದುಳಿದ ವರ್ಗದ ಜನರು ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಆದರೆ, ಸಾಮಾಜಿಕವಾಗಿ ಕ್ರಾಂತಿಕಾರಿ ನಿರ್ಣಯಗಳನ್ನು ಮೋದಿಜಿ ಕೈಗೊಂಡಿದ್ದಾರೆ ಎಂದರು.