ನಂಗೆ ಮಾಟ ಮಾಡಿದ್ರೆ, ಉಲ್ಟಾ ಹೊಡೆಯುತ್ತೆ: ಸಚಿವ ರೇವಣ್ಣ ಹೇಳಿದ್ದು ಯಾರಿಗೆ?
Recommended Video

ಹಾಸನ, ಜುಲೈ 9: ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ದೇವೇಗೌಡ್ರು-ರಾಹುಲ್ ಗಾಂಧಿಯ ಬ್ಯಾಂಕ್ ಗ್ರೌಂಡ್ ವರ್ಕ್ ಹೇಗೆ ಕೆಲಸ ಮಾಡಿತ್ತೋ, ಅದಾದ ನಂತರ ಕುಮಾರಸ್ವಾಮಿ ಪದಗ್ರಹಣ, ನೂತನ ಸಚಿವರ ಪ್ರಮಾಣವಚನ.. ಅಷ್ಟೆಲ್ಲಾ ಯಾಕೆ, ಬಜೆಟ್ ಮಂಡನೆಗೆ ದಿನ ನಿಗದಿ ಪಡಿಸಿದ್ದೇ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ.
ಮಹಾನ್ ದೈವಭಕ್ತರು ಜೊತೆಗೆ ತೀರಾ ನಂಬಿಕೆ, ಮೂಢನಂಬಿಕೆಗಳನ್ನು ನಂಬುವ ರೇವಣ್ಣ, ಅದು ಹೇಗೆ ಜಾತ್ಯಾತೀಯ ಜನತಾದಳದ ಮುಖಂಡರು ಆದರು ಎಂದು ಸಾರ್ವಜನಿಕರು ಬೇಕಾದಷ್ಟು ಬಾರಿ ಚರ್ಚೆ ಮಾಡಿದ ಉದಾಹರಣೆಗಳಿವೆ.
ಈಗ, ಹಾಸನದಲ್ಲಿ ಸಚಿವ ರೇವಣ್ಣ ನೀಡಿರುವ ಹೇಳಿಕೆ ಇವರ ನಂಬಿಕೆ, ಅಪನಂಬಿಕೆಯ ಮೇಲೆ ಕನ್ನಡಿ ಹಿಡಿದಂತಿದೆ. ನನ್ನದು ಸ್ವಾತಿ ನಕ್ಷತ್ರ, ನನಗೆ ಯಾರಾದರೂ ವಾಮಾಚಾರ ಮಾಡಿದ್ರೆ , ಮಾಡಿಸಿದವರಿಗೇ ಅದು ತಿರುಗುಬಾಣವಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಅವರು ಎಚ್ಚರಿಕೆ ನೀಡಿದ್ದು ಯಾರಿಗೆ ಎನ್ನುವುದು ಗೊತ್ತಾಗಿಲ್ಲಾ...
ನಗರದಲ್ಲಿ ಮಾತನಾಡುತ್ತಿದ್ದ ರೇವಣ್ಣ, ಬಿಜೆಪಿಯವರು ರಾಜ್ಯದ ಜನರ ಮತ್ತು ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಅಧಿಕಾರ ಪಡೆಯಲು ಸಾಧ್ಯವಾಗಲಿಲ್ಲ ಎನ್ನುವ ಹತಾಶೆ ಅವರಿಗೆ ಕಾಡುತ್ತಿದೆ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.
ನಾವು ಜಾತಿ ಆಧಾರಿತ ರಾಜಕೀಯ ಮಾಡಿದವರಲ್ಲ. ರೈತರ ಸಾಲಮನ್ನಾ ವಿಚಾರದಲ್ಲಿ ಸರಕಾರ ಜಾತಿ ರಾಜಕೀಯ ಮಾಡುತ್ತಿದೆ ಎನ್ನುವ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಜನ ಇದನ್ನು ನಂಬಬಾರದು ಎಂದು ರೇವಣ್ಣ ಹೇಳಿದ್ದಾರೆ. ವಾಮಾಚಾರದ ವಿಚಾರದಲ್ಲಿ ರೇವಣ್ಣ ಹೇಳಿದ್ದೇನು, ಮುಂದೆ ಓದಿ..

ಸ್ವಾತಿ ನಕ್ಷತ್ರದವರಿಗೆ ಮಾಟಮಂತ್ರ ಪ್ರಯೋಗ ಮಾಡಿದರೆ ಅದು ತಾಟುವುದಿಲ್ಲ
ನಾನು ದೇವರನ್ನು ನಂಬುವವನು, ನನ್ನ ಕುಟುಂಬ ಕೂಡಾ ಹಾಗೇ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ನನ್ನದು ಸ್ವಾತಿ ನಕ್ಷತ್ರ, ಈ ನಕ್ಷತ್ರದವರಿಗೆ ಮಾಟಮಂತ್ರ ಪ್ರಯೋಗ ಮಾಡಿದರೆ ಅದು ತಾಟುವುದಿಲ್ಲ. ಬದಲಿಗೆ, ನನಗೆ ವಾಮಾಚಾರ ಮಾಡಿದವರಿಗೇ ಅದು ಉಲ್ಟಾ ಹೊಡೆಯುತ್ತದೆ - ರೇವಣ್ಣ.

ಮೋದಿಯವರ ಬಳಿ ಚರ್ಚಿಸಿದ್ದರು, ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿತ್ತು
ರೈತರ ಸಾಲಮನ್ನಾ ಘೋಷಣೆಯ ಮುನ್ನ ಕುಮಾರಸ್ವಾಮಿ, ಪ್ರಧಾನಿ ಮೋದಿಯವರ ಬಳಿ ಚರ್ಚಿಸಿದ್ದರು. ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿತ್ತು ಕೂಡಾ, ಆದರೆ ರಾಜ್ಯ ಬಿಜೆಪಿಯವರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಇದೆಲ್ಲಾ ಜನರಿಗೆ ಗೊತ್ತಾಗುವ ದಿನ ದೂರವಿಲ್ಲ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದಾರೆ.

ಸರಿಯಾದ ಬಂಗ್ಲೆ ಸಿಕ್ಕಿದ ಕೂಡಲೇ ಬೆಂಗಳೂರಿನಿಂದಲೇ ಕಾರ್ಯಾರಂಭ
ಸದ್ಯ ಪ್ರತೀದಿನ ನಾನು ಹೊಳೆನರಸೀಪುರದಿಂದ ಬೆಂಗಳೂರಿಗೆ ಅಪ್ & ಡೌನ್ ಮಾಡುತ್ತಿದ್ದೇನೆ, ಅಲ್ಲಿ ಸರಿಯಾದ ಬಂಗ್ಲೆ ಸಿಕ್ಕಿದ ಕೂಡಲೇ ಬೆಂಗಳೂರಿನಿಂದಲೇ ಕಾರ್ಯಾರಂಭ ಮಾಡುತ್ತೇನೆ. ಇದಕ್ಕೂ ಸೂಕ್ತ ವಾಸ್ತುವಿರುವ ಮನೆಸಿಗದೇ ಇರುವುದು ಕಾರಣವೇ ಎನ್ನುವುದನ್ನು ರೇವಣ್ಣ ಸ್ಪಷ್ಟಪಡಿಸಲಿಲ್ಲ.

ಪೂಜೆ ಸರಿಯಾಗಲಿಲ್ಲವೆಂದು ಪುರೋಹಿತರಿಗೆ ವಾಸ್ತುಪಾಠ
ರಾಹುಕಾಲ, ಗ್ರಹಗತಿ, ಗಳಿಗೆ ನೋಡಿಯೇ ಹೆಜ್ಜೆಯಿಡುವ ರೇವಣ್ಣ, ಕಳೆದ ವಾರ ಸರಕಾರೀ ಸಮಾರಂಭದ ಶಂಕುಸ್ಥಾಪನೆಯ ವೇಳೆ ಪೂಜೆ ಸರಿಯಾಗಲಿಲ್ಲವೆಂದು ಪುರೋಹಿತರಿಗೆ ವಾಸ್ತುಪಾಠ ಮಾಡಿದ್ದರು. ಆ ಬಾಗಿಲು ಈಶಾನ್ಯಕ್ಕೆ ಬರಬೇಕು, ಮತ್ತೊಂದು ಬಾಗಿಲು ನಂದಿಮೂಲೆಯಲ್ಲಿರಬೇಕೆಂದು ಎಲ್ಲರ ಮುಂದೆ ಪೂಜೆಗೆ ಬಂದಿದ್ದ ಪುರೋಹಿತರಿಗೆ ರೇವಣ್ಣ ಪಾಠ ಮಾಡಿದ್ದರು.

ರಾಜಕಾರಣದಲ್ಲಿ ಹಿನ್ನಡೆ ಆಗದಂತೆ ನೋಡಿಕೊಳ್ಳುತ್ತದೆ
ರೇವಣ್ಣ ಅವರ ಜನ್ಮ ದಿನಾಂಕ 17ನೇ ಡಿಸೆಂಬರ್, 1957. ಸ್ವಾತಿ ನಕ್ಷತ್ರ, ತುಲಾ ರಾಶಿ. ಇವರ ಜಾತಕದಲ್ಲಿ ಹಲವು ಮುಖ್ಯ ಯೋಗಗಳಿವೆ. ಅದರಲ್ಲಿ ಉಲ್ಲೇಖಾರ್ಹವಾದದ್ದು ಗಜಕೇಸರಿ ಯೋಗ. ಈ ಯೋಗವು ರಾಜಕಾರಣದಲ್ಲಿ ಹಿನ್ನಡೆ ಆಗದಂತೆ ನೋಡಿಕೊಳ್ಳುತ್ತದೆ. ಜತೆಗೆ ಅದೃಷ್ಟ ತರುತ್ತದೆ ಎನ್ನುತ್ತದೆ ರೇವಣ್ಣನವರ ಜಾತಕ ವಿಮರ್ಶೆ.












Click it and Unblock the Notifications