ಬಿಜೆಪಿಯವರು ತಲೆಕೆಳಗೆ ಮಾಡಿ ಮಂಗಳೂರಿಗೆ ಹೋದರೂ ಪ್ರಯೋಜನವಿಲ್ಲ
ಬಿಜೆಪಿ ಯುವಮೋರ್ಚಾದವರು ಬೈಕ್ ನಲ್ಲಿ ಅಲ್ಲಾ.. ತಲೆಕೆಳಗೆ ಮಾಡಿಕೊಂಡು ಬೆಂಗಳೂರಿನಿಂದ ಮಂಗಳೂರಿಗೆ ರ್ಯಾಲಿ ನಡೆಸಿದರೂ, ರಾಜ್ಯಕ್ಕೂ ಏನೂ ನಷ್ಟವಿಲ್ಲ, ಜೊತೆಗೆ ಕಾಂಗ್ರೆಸ್ಸಿಗೆ ಇದರಿಂದ ಏನೂ ತೊಂದರೆಯಿಲ್ಲ, ಸಚಿವ ಯು ಟಿ ಖಾದರ್ ಲೇವಡಿ.
ಬೆಂಗಳೂರು, ಆ 29: ಬಿಜೆಪಿ ಯುವಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರ್ಯಾಲಿ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಯು ಟಿ ಖಾದರ್, ಬಿಜೆಪಿಯವರಿಂದ ರಾಜ್ಯಕ್ಕೆ ಏನೂ ಪ್ರಯೋಜನವಿಲ್ಲ ಎಂದಿದ್ದಾರೆ.
ಬಿಜೆಪಿ ಯುವಮೋರ್ಚಾದವರು ಬೈಕ್ ನಲ್ಲಿ ಅಲ್ಲಾ.. ತಲೆಕೆಳಗೆ ಮಾಡಿಕೊಂಡು ಬೆಂಗಳೂರಿನಿಂದ ಮಂಗಳೂರಿಗೆ ರ್ಯಾಲಿ ನಡೆಸಿದರೂ, ರಾಜ್ಯಕ್ಕೂ ಏನೂ ನಷ್ಟವಿಲ್ಲ, ಜೊತೆಗೆ ಕಾಂಗ್ರೆಸ್ಸಿಗೆ ಇದರಿಂದ ಏನೂ ತೊಂದರೆಯಿಲ್ಲ ಎಂದು ಖಾದರ್ ಲೇವಡಿ ಮಾಡಿದ್ದಾರೆ.

ನಮ್ಮ ಸರಕಾರ ನಾಲ್ಕು ವರ್ಷಗಳ ಅವಧಿಯಲ್ಲಿ ನುಡಿದಂತೆ ನಡೆದಿದೆ, ನಮಗೆ ಬಿಜೆಪಿಯವರು ಸರ್ಟಿಫಿಕೇಟ್ ನೀಡಬೇಕಾಗಿಲ್ಲ. ಬಿಜೆಪಿಯವರ ಸತ್ಯ ಏನು ಅನ್ನೋದು ಇಡೀ ರಾಜ್ಯದ ಜನತೆಗೆ ಗೊತ್ತಿದೆ ಎಂದು ಯು ಟಿ ಖಾದರ್ ಹೇಳಿದ್ದಾರೆ.
ದಲಿತ ಯುವತಿಯನ್ನು ನಮ್ಮ ಮುಖಂಡ ರಾಹುಲ್ ಗಾಂಧಿ ಮದುವೆಯಾಗಲಿ ಎನ್ನುವ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಅವರ ಹೇಳಿಕೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಯಾವುದೇ ಪಕ್ಷದ ಮುಖಂಡರಿರಲಿ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಖಾದರ್ ಪ್ರತಿಕ್ರಿಯಿಸಿದ್ದಾರೆ.
ಎಪಿಎಲ್ ಮತ್ತು ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದವರಿಗೆ, ಸೆಪ್ಟಂಬರ್ ಮಾಸಾಂತ್ಯದೊಳಗೆ ಕಾರ್ಡ್ ಅವರ ಮನೆಬಾಗಿಲಿಗೆ ವಿತರಣೆಯಾಗಲಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ ಸುಮಾರು ತೊಂಬತ್ತು ಸಾವಿರ ಅರ್ಜಿಗಳು ಬಂದಿವೆ ಎಂದು ಖಾದರ್ ಹೇಳಿದ್ದಾರೆ.
RSS ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆಯ ಹಿಂದೆ ಪಿಎಫ್ಐ ಸಂಘಟನೆಯ ಪಾತ್ರವಿರುವುದರಿಂದ, ಆ ಸಂಘಟನೆಯನ್ನು ನಿಷೇಧಿಸಲು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಸೆಪ್ಟಂಬರ್ 7ರಂದು 'ಮಂಗಳೂರು ಚಲೋ' ಬೈಕ್ ರ್ಯಾಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬಿಜೆಪಿ ಮುಖಂಡ ಬಿ ಎಲ್ ಸಂತೋಷ್ ಈ ಪ್ರತಿಭಟನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.












Click it and Unblock the Notifications