ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ ದಾಟುವುದಿಲ್ಲ : ದಿನೇಶ್ ಗುಂಡೂರಾವ್
ಹುಬ್ಬಳ್ಳಿ, ಮೇ 05: ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಸಿಂಗಲ್ ಡಿಜಿಟ್ ದಾಟುವುದಿಲ್ಲ. ಕಾಂಗ್ರೆಸ್ ಗೆ ನಿರೀಕ್ಷೆ ಮೀರಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗ್ತಿದೆ. ಇದು ಸತ್ಯ ಹಾಗೂ ಸುಳ್ಳಿನ ನಡುವಿನ ಹೋರಾಟದ ಚುನಾವಣೆಯಾಗಿದೆ. ಪ್ರಧಾನಿ ಮೋದಿಯವರು ಚುನಾವಣೆಯಲ್ಲಿ ಸುಳ್ಳಿನ ಆಶ್ರಯ ಪಡೆದಿದ್ದಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರದಲ್ಲಿ ಕರ್ನಾಟಕದ ಪರ ಕೆಲಸ ಮಾಡುವಂತಹ ಸಂಸದರು ನಮ್ಮ ರಾಜ್ಯಕ್ಕೆ ಬೇಕು. ರಾಜ್ಯದಿಂದ ಆಯ್ಕೆಯಾಗಿದ್ದ ಬಹುತೇಕ ಬಿಜೆಪಿ ಸಂಸದರು ಕರ್ನಾಟಕವನ್ನ ಮರೆತಿದ್ದಾರೆ. ಅದರಲ್ಲೂ ಪ್ರಲ್ಹಾದ್ ಜೋಶಿಯವರು ಕೇಂದ್ರದಲ್ಲಿ ಸಚಿವರಾದ ಮೇಲೆ ಸಂಪೂರ್ಣವಾಗಿ ಕರ್ನಾಟಕವನ್ನ ಮರೆತಿದ್ದಾರೆ. ರಾಜ್ಯದ ಪರ ಕೇಂದ್ರ ಸರ್ಕಾರದಲ್ಲಿ ಧ್ವನಿ ಎತ್ತಿ ಕರ್ನಾಟಕಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಇವರಿಗೆ ರಾಜಕೀಯ ಅಧಿಕಾರಕ್ಕೆ ಮಾತ್ರ ಕರ್ನಾಟಕ ಬೇಕು. ಗೆದ್ದಮೇಲೆ ಕೇಂದ್ರದಲ್ಲಿ ಮನಬಂದಂತೆ ವರ್ತಿಸುವ ಅಹಂ ನಲ್ಲಿ ಪ್ರಲ್ಹಾದ್ ಜೋಶಿಯವರಿದ್ದಾರೆ. ಕರ್ನಾಟಕಕ್ಕೆ ಜೋಶಿಯವರ ಕೊಡುಗೆ ಏನು. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಒಂದು ಬಾರಿಯಾದರು ಕೇಂದ್ರ ಸರ್ಕಾರದಲ್ಲಿ ಧ್ವನಿ ಎತ್ತಿದ್ದಾರೆಯೇ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಕೇಂದ್ರಕ್ಕೆ ಹೋದಮೇಲೆ ಅಹಂಕಾರದಲ್ಲಿ ಮೇರೆಯುವ ಬಿಜೆಪಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲು ನಿಶ್ಚಯಿಸಿದ್ದಾರೆ ಎಂದರು.
10 ವರ್ಷದಲ್ಲಿ ತಾವು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಚುನಾವಣೆಯಲ್ಲಿ ಚರ್ಚೆ ಮಾಡಲಿಲ್ಲ. ಬದಲಿಗೆ ಸಮಾಜದಲ್ಲಿ ದ್ವೇಷ ಬಿತ್ತುವಂತಹ, ಸಮಾಜವನ್ನ ಒಡೆಯುವಂತಹ ಮಾತುಗಳನ್ನ ಆಡಿದ್ದಾರೆ. ಜನರಿಗೆ ಇವರ ಮೋಸದ ಮಾತುಗಳ ಅರಿವಾಗಿದೆ. ಬಡವರು, ಮಹಿಳೆಯರು, ಮಧ್ಯಮ ವರ್ಗದ ಪರ ಗ್ಯಾರಂಟಿ ಯೋಜನೆಗಳನ್ನ ನೀಡಿರುವ ಕಾಂಗ್ರೆಸ್ ಗೆ ಜನರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಲಿದೆ ಎಂದರು.
ದೇಶದ ಆರ್ಥಿಕ ಪರಸ್ಥಿತಿ ಬಗ್ಗೆ ಬಿಜೆಪಿ ಮಾತಾಡಬಹದು ಅಂದುಕೊಂಡಿದ್ದೇವು. ಸುಳ್ಳಿನ ಆಧಾರದ ಮೇಲೆ ದೇಶ ವಿಭಜನೆ ಮಾಡೋದು ಬಿಜೆಪಿ ಪ್ರಚಾರವಾಗಿದೆ. ಬಿಜೆಪಿ ಯಾವಾಗಲೂ ಮೀಸಲಾತಿ ವಿರೋಧಿ ಪಕ್ಷ. ಮಂಡಲ ಆಯೋಗ ರಚನೆಯಾದಾಗ ಅದರ ವಿರುದ್ದ ಇದ್ದವರು ಬಿಜೆಪಿ. RSS ಮತ್ತು ಬಿಜೆಪಿಯ ಆಂತರಿಕ ಅಜೇಂಡಾ ಸಂವಿಧಾನದ ವಿರೋಧಿಸುವುದು ಆಗಿದೆ ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಬಿಜೆಪಿ ದೇಶದಲ್ಲಿ ಕೆಟ್ಟ ವಾತಾವರಣ ನಿರ್ಮಾಣ ಮಾಡಿದೆ.ಅವರು ಮಾಡದೆ ಒಂದು ಹೇಳೋದೆ ಒಂದು. ನೇಹಾ ಹತ್ಯೆ ಪ್ರಕರಣವನ್ನ ರಾಜಕೀಯಕ್ಕೆ ಬಳಸಿಕೊಂಡ್ರು. ಇವರು ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಕೊಟ್ಟಿದ್ದೀರಾ.? ಆರೋಪಿ ಬ್ರಿಜ್ ಭೂಷಣ್ ಅವರಿಗೆ ಬಿಜೆಪಿ ಸರ್ಕಾರ ಸಹಾಯ ಮಾಡಿದೆ. ಮಣಿಪುರ ಘಟನೆ ಬಗ್ಗೆ ಮೋದಿ ಮಾತನಾಡಲಿಲ್ಲ.
ಬಿಜೆಪಿ ಜನರ ವಿಶ್ವಾಸ ಗಳಿಸಿದ್ದರೆ ಕಾಶ್ಮೀರದಲ್ಲಿ ಏಕೆ ಅಭ್ಯರ್ಥಿಗಳನ್ನ ನಿಲ್ಲಿಸಲಿಲ್ಲ. ಬಿಜೆಪಿಯ ಸುಳ್ಳಿನ ಬಣ್ಣ ಬಯಲಾಗುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಉತ್ತರ ಕರ್ನಾಟಕ ಭಾಗದ ಅನೇಕ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೆವೆ. ಅಹಂಕಾರದಲ್ಲಿ ಪ್ರಹ್ಲಾದ ಜೋಶಿ ಇದ್ದರು, ಕರ್ನಾಟಕಕ್ಕೆ ಏನ್ ಮಾಡಿದ್ರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಕಾಂಗ್ರೆಸ್ ಪಕ್ಷಕ್ಕೆ ನೀವು ವೋಟ್ ಹಾಕಬೇಕು. ಸುಳ್ಳುಗಳನ್ನ ನಿತ್ಯ ಹೇಳುವ ಬಿಜೆಪಿಯನ್ನ ಮನೆಗೆ ಕಳುಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಜನರಿಗೆ ಮನವಿ ಮಾಡಿದರು.












Click it and Unblock the Notifications