KPSC: 'ಕೆಪಿಎಸ್ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ'
ಬೆಂಗಳೂರು, ಮೇ 08: ಕೆಪಿಎಸ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಯಾವುದೇ ಹೋರಾಟ ಮಾಡಿದರೂ ಬಿಜೆಪಿ ಅವರ ಜೊತೆಯಲ್ಲಿ ಇರಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಕಟಿಸಿದರು.
ಇಂದು(ಗುರುವಾರ) ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು ಮತ್ತು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅªರ ಉಪಸ್ಥಿತಿಯಲ್ಲಿ ಪರೀಕ್ಷಾರ್ಥಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ವಿವರಿಸಿದರು. ಅವರಿಗೆ ಆಗಿರುವ ಅನ್ಯಾಯವನ್ನು ವಿವರವಾಗಿ ನಮಗೂ ತಿಳಿಸಿದ್ದಾರೆ ಎಂದು ಹೇಳಿದರು. ಕನ್ನಡದಲ್ಲಿ ಪರೀಕ್ಷೆ ಬರೆದ ಸುಮಾರು 70 ಸಾವಿರ ಜನರಿದ್ದಾರೆ. 70-80 ಪ್ರಶ್ನೆಗಳು ತಪ್ಪಾಗಿ ಮುದ್ರಿತವಾಗಿದ್ದು, ಅವರಿಗೆ ಅನ್ಯಾಯವಾಗಿದೆ. ಕೆಲವರು ಮಾತ್ರ ಕೋರ್ಟಿಗೆ ಹೋಗಿದ್ದಾರೆ. ಮರುಪರೀಕ್ಷೆಗೆ ಆದೇಶವೂ ಆಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೇಳುವುದೇ ಒಂದು ಮಾಡುವುದೇ ಒಂದು ಎಂದು ಆಕ್ಷೇಪಿಸಿದರು. ಮೇಲ್ಮನೆಯಲ್ಲಿ ಪ್ರಶ್ನಿಸಿದಾಗ ವಿದ್ಯಾರ್ಥಿಗಳ ಪರ ಇದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಕೋರ್ಟ್ ಆದೇಶ ನೋಡಿ ಮರುಪರೀಕ್ಷೆ ಮಾಡುವುದಾಗಿ ಹೇಳಿದ್ದರು. ಆದರೆ, ಕೋರ್ಟ್ ಆದೇಶ ಬಂದರೂ ಮೀನಾಮೇಷ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೊನ್ನೆ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಗಳು ಸಕಾಲದಲ್ಲಿ ಸ್ಥಳ ಸೇರಿರಲಿಲ್ಲ. ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಪೊಲೀಸರು ಅವರನ್ನು ಹೊಡೆದು ಜೀಪಿನಲ್ಲಿ ತುಂಬಿಕೊಂಡು ಹೋದುದನ್ನು ಕಣ್ಣಾರೆ ನೋಡಿದ್ದೇವೆ ಎಂದು ತಿಳಿಸಿದರು. ಪ್ರಶ್ನಿಸಿದವರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಸರಿಯೇ? ಪೊಲೀಸಿನವರ ಮೂಲಕ ಅವರನ್ನು ಹದ್ದುಬಸ್ತಿನಲ್ಲಿ ಇಡುವುದು ಸರಿಯೇ ಎಂದು ಕೇಳಿದರು. ಇದು ಸುಲಿಗೆ ಸರಕಾರ. ಇದು ಸ್ಕೀಂ ಸರಕಾರವಲ್ಲ; ಸ್ಕ್ಯಾಮ್ ಸರಕಾರ. ಚೆನ್ನಾಗಿ ಸುಲಿಗೆ ಮಾಡಿ ತಲುಪಿಸುತ್ತಿದ್ದ ನಿವೃತ್ತ ಅಧಿಕಾರಿಗಳನ್ನು ನಿವೃತ್ತರಾದರೂ ಬಿಡುತ್ತಿಲ್ಲ; ಒಂದು ವರ್ಷ, ಎರಡು ವರ್ಷ, ಮೂರು ವರ್ಷ, ಕೆಲವರನ್ನು ಆರೇಳು ವರ್ಷ ಇಟ್ಟುಕೊಂಡಿದ್ದಾರೆ. ಹೊಸದಾಗಿ ಬಂದವರಿಗೆ ಸುಲಿಗೆಯ ಅನುಭವ ಇರದಿರುವುದೇ ಇದಕ್ಕೆ ಕಾರಣ ಎಂದು ವ್ಯಂಗ್ಯವಾಡಿದರು.












Click it and Unblock the Notifications