ಬಿಎಲ್ ಸಂತೋಷ್ ವಿರುದ್ಧ ತಿರುಗಿ ಬಿದ್ದ ಕಾರ್ಯಕರ್ತರು: ಕಾಂಗ್ರೆಸ್ ಗೆಲುವಿಗೆ ನಿಮ್ಮ ಕೊಡುಗೆಯೇ ಹೆಚ್ಚಾಗಿದೆ
ಬಿಎಲ್ ಸಂತೋಷ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಕಾಡೆ ಮಲಗಿದೆ. ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಿರುವ ಅದು ಕೇವಲ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಸೋಲು ಸಹಜವಾಗಿಯೇ ಹಲವು ತಲೆದಂಡಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಈಗಾಗಲೇ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಲಿನ ಹೊಣೆ ಹೊತ್ತಿದ್ದಾರೆ.
ರಾಜ್ಯ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಬಿಜೆಪಿ ಬೆಂಬಲಿಗರು ತಿರುಗಿಬಿದ್ದಿದ್ದಾರೆ. ಬಿಎಲ್ ಸಂತೋಷ್ ಕಾರ್ಯವೈಖರಿಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಸೋಲಲು ಕಾಂಗ್ರೆಸ್ನವರಿಗಿಂತ ನಿಮ್ಮ ಪಾತ್ರವೇ ದೊಡ್ಡದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಮೊಳೆ ಹೊಡೆದಿದ್ದಾರ, ಇನ್ನೂ ಒಂದಷ್ಟು ಸ್ಥಾನಗಳನ್ನು ಗೆದ್ದಿದೆ, ಅದರ ಬುಡಕ್ಕೂ ಮೊಳೆ ಹೊಡೆಯಬೇಡಿ ಎಂದು ಕಿಡಿ ಕಾರಿದ್ದಾರೆ.

ಸೋಲಿನ ಬಳಿಕ ಬಿಎಲ್ ಸಂತೋಷ್ ತಮ್ಮ ಫೇಸ್ಬುಕ್ ಖಾತೆಯಲ್ಲಿ "ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ ಪಾಠ ಕಲಿಯುತ್ತೇವೆ, ಟೀಕೆಗಳಿಗೆ, ಕುಹಕಗಳಿಗೆ , ಒಡಕು ಮಾತುಗಳಿಗೆ ಉತ್ತರ ಕೊಡುತ್ತೇವೆ. ನಾವು ಇರಲಿಕ್ಕೆ, ಗೆಲ್ಲಲಿಕ್ಕೆ ಬಂದವರು, ಸೋಲು ಕ್ಷಣಿಕ, ಮುನ್ನಡೆ ಸತತ ಇನ್ನು 12 ತಿಂಗಳ ಒಳಗೆ 31000 ಬೂತ್ಗಳಿಗೆ ಇನ್ನೂ 10 ಸಾವಿರ ಸೇರಿಸಿ 41000 ಬೂತ್ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ." ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಬಂದಿರುವ ಬಹುತೇಕ ಉತ್ತರಗಳು ಬಿಜೆಪಿ ಬೆಂಬಲಿಗರದ್ದೇ ಆಗಿದ್ದು ಬಿಎಲ್ ಸಂತೋಷ್ ವಿರುದ್ಧ ಕಿಡಿ ಕಾರಿದ್ದಾರೆ. "ಇಂತಹ ಬುರುಡೆ ಬಿಡೋದು ಬಿಟ್ಟು ಬನ್ನಿ ಮನೆ ಮನೆಗೆ ಹೋಗಿ ಮತ ಕೇಳಿ ಪಕ್ಷ ಸಂಘಟನೆ ಮಾಡಿ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷ್ಣ ನಂಜನಗೂಡ್ ಎನ್ನುವವರು ಪ್ರತಿಕ್ರಿಯೆ ನೀಡಿ, "ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಹೇಳುತ್ತೇನೆ ಈ ಸೋಲಿಗೆ ನೀವೇ ಹೊಣೆ. ಬಿಎಸ್ ಯಡಿಯೂರಪ್ಪ ಮೇಲಿನ ನಿಮ್ಮ ಅಸಹನೆ ಈ ಮಟ್ಟಿಗೆ ಫಲಿತಾಂಶ ತಂದಿದೆ ದಯವಿಟ್ಟು ಕರ್ನಾಟಕ ಬಿಜೆಪಿ ವಿಷಯಕ್ಕೆ ಬರದೇ ಇರಿ" ಎಂದು ಮನವಿ ಮಾಡಿದ್ದಾರೆ.

ಚರಿತ್ರ ಕುಮಾರ್ ಎನ್ನುವವರು ಪ್ರತಿಕ್ರಿಯೆ ನೀಡಿ, "ನೀವು ಮತ್ತು ನಿಮ್ಮ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಮಾತಿಗೆ ಬೆಲೆ ಕೊಡದೆ ನಿಮಗೆ ಇಷ್ಟ ಬಂದವರಿಗೆ ಬಿ ಫಾರಂ ಕೊಟ್ಟದ್ದು ಒಂದು ಪ್ರಮುಖ ಕಾರಣ. ಇನ್ನು ಐದು ವರ್ಷ ಕಾರ್ಯಕರ್ತರ ಮೇಲೆ ದೌರ್ಜನ್ಯ, ದಾಳಿ, ಪ್ರಾಣಹಾನಿ ನಡೆದರೆ ನೀವು ಮತ್ತು ನಿಮ್ಮ ರಾಜ್ಯಾಧ್ಯಕ್ಷ ಹಾಗೂ ಕೆಲುವು ರಾಜ್ಯ ನಾಯಕರೇ ನೇರ ಹೊಣೆ." ಎಂದು ಕಿಡಿ ಕಾರಿದ್ದಾರೆ.
ಗುಜರಾತ್ ಮಾದರಿ ಇಲ್ಲಿಗೆ ತರಬೇಡಿ
"ಬೇರೆ, ದೆಹಲಿಯಲ್ಲಿ ಕುಳಿತು ಜನಾಭಿಪ್ರಾಯ ಸಂಗ್ರಹಿಸುವುದನ್ನು ಬಿಟ್ಟು ಕಾರ್ಯಕರ್ತರ ಸಲಹೆ ಕೇಳಿ, ಯಡಿಯೂರಪ್ಪ ಅವರನ್ನು ಕೈ ಬಿಟ್ಟಿದ್ದೆ ಈ ಸ್ಥಿತಿಗೆ ಕಾರಣ, ಕೋವೀಡ್ ಸಂದರ್ಭದಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಚುನಾವಣೆ ಸಂದರ್ಭದಲ್ಲಿ ನಿಲ್ಲಿಸಿದ್ದು, ಪಾನ್ ಕಾರ್ಡ್ಗೆ ಬಡ ಜನರಿಂದ ಆಧಾರ್ ನೋಂದಣಿಗೆ 1000 ತಗೊಂಡಿದ್ದು, ಬಿಪಿಎಲ್ ಕಾರ್ಡ್ದಾರರು ವಾಹನ ಹೊಂದಿದ್ದರೆ ಅಂತವರ ಮೇಲೆ ಕ್ರಮ ಕೈ ಗೊಂಡಿದ್ದು ಬಹಳಷ್ಟು ಹೊಡೆತ ನೀಡಿತು" ಎಂದು ಪರೀಕ್ಷಿತ್ ಗೌಡ ಮೂಡಿಗೆರೆ ಅಭಿಪ್ರಾಯಪಟ್ಟಿದ್ದಾರೆ.
ಇದರ ಜೊತೆ ಇನ್ನೂ ಕೆಲವು ಸಂತೋಷ್ ಮಾತಿಗೆ ಸಮ್ಮತಿ ವ್ಯಕ್ತಪಡಿಸಿದ್ದು, ನಾವು ಬಿಜೆಪಿ ಜೊತೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅಧಿಕಾರ ಸಿಕ್ಕಾಗ ದುರಹಂಕಾರದಿಂದ ನಡೆದುಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ, ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.












Click it and Unblock the Notifications