ಪೊಲೀಸ್ ಇಲಾಖೆಗೆ ಪೆನ್ನು-ಪೇಪರ್ ಕೊಡಲೂ ಸರ್ಕಾರದ ಬಳಿ ಕಾಸಿಲ್ಲ: ಬಿಜೆಪಿ ಗೇಲಿ
ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಂದಾಗಿ ದಿವಾಳಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವ ಪರಿ ದಿವಾಳಿ ಆಗಿದೆ ಎಂದರೆ, ಪೊಲೀಸ್ ಇಲಾಖೆಗೆ ಪೆನ್ನು ಪೇಪರ್ ನೀಡುವುದಕ್ಕೂ ಕಾಸಿಲ್ಲದೆ ಪರದಾಡುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಪೆನ್ನು ಪೇಪರ್ ಖರೀದಿಗೂ ಹಣ ನೀಡದಿರುವುದು ಆಕಸ್ಮಿಕವಲ್ಲ, ನಿಮ್ಮ ದಿವಾಳಿತನ ಎಂದು ವಾಗ್ದಾಳಿ ನಡೆಸಿದೆ.
ಈ ಹಿಂದೆ ಜವಾಹರಲ್ಲಾಲ್ ನೆಹರು ಸಮಯದಲ್ಲೂ ಭಾರತೀಯ ಸೇನೆಗೂ ಇಂತಹ ದುಸ್ಥಿತಿಯನ್ನು ಕಾಂಗ್ರೆಸ್ ತಂದಿತ್ತು. ಚಪಾತಿ ಮೇಲೆ ಮಾಹಿತಿ ಬರೆದು ಕಳುಹಿಸುವ ದಯನೀಯ ಸ್ಥಿತಿ ನಿರ್ಮಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಪೊಲೀಸ್ ಇಲಾಖೆಗೂ ಈ ಪರಿಸ್ಥಿತಿ ತಂದಿಟ್ಟಿದೆ ಎಂದು ಬಿಜೆಪಿ ದೂರಿದೆ.

ಸುಳ್ಳುಗಳೆ ಕಾಂಗ್ರೆಸ್ನ ನೈಜ ಸಿದ್ಧಾಂತ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ತೃಣಕ್ಕೆ ಸಮಾನವಾದ ಕೆಲಸವನ್ನು ಮಹಾನ್ ಸಾಧನೆ ಎಂದು ಬಿಂಬಿಸುವುದರಲ್ಲಿ ಕಾಂಗ್ರೆಸ್ಸಿಗರದ್ದು ಎತ್ತಿದ ಕೈ ಎಂದು ಹರಿಹಾಯ್ದಿದೆ. ಇತ್ತಿಚೆಗಷ್ಟೆ ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕ ನಂಬರ್ 2ನೇ ಸ್ಥಾನ ಪಡೆದಿದೆ, ಕಾಂಗ್ರೆಸ್ನ ಉದ್ಯೋಗ ಸ್ನೇಹಿ ನೀತಿಯಿಂದಲೇ ಕರ್ನಾಟಕ ಇಂತಹ ಸಾಧನೆ ಮಾಡಿದೆ ಎಂದು ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಕಾಂಗ್ರೆಸ್ನ ಈ ಸಾಧನೆಯ ಪೋಸ್ಟರ್ ಕೇವಲ ಇಮೇಜ್ ಕಾರ್ಡ್ಗೆ ಸೀಮಿತವಾಗಿತ್ತೆ ಹೊರತು, ಅದರಲ್ಲಿ ಕೊಂಚವೂ ಅಂಕಿ-ಸಂಖ್ಯೆಗಳ ದತ್ತಾಂಶ ಇರಲಿಲ್ಲ. ಅಲ್ಲಿಗೆ ಕಾಂಗ್ರೆಸ್ನ ಈ ಸಾಧನೆ ಮತ್ತೊಂದು ಬೋಗಸ್ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಅವಧಿಯಲ್ಲೇ ನೇರ ಬಂಡವಾಳ ಹೂಡಿಕೆ ಉತ್ತಮ
ಅಂಕಿ-ಅಂಶಗಳಿಗೆ ಬಂದರೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಾದ 2023-24ರಲ್ಲಿ ಕರ್ನಾಟಕಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆ ಕೇವಲ 54,539.3 ಕೋಟಿ ರೂಪಾಯಿ. ಇನ್ನು 2024-25ರಲ್ಲಿ ಕರ್ನಾಟಕಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆ ಕೇವಲ 57,003.41 ಕೋಟಿ ರೂಪಾಯಿ. ಆದರೆ ಕರ್ನಾಟಕದ ವಿದೇಶಿ ಬಂಡವಾಳ ನೇರ ಹೂಡಿಕೆ ಉತ್ತಮ ಸ್ಥಿತಿಯಲ್ಲಿದ್ದದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಕಾಂಗ್ರೆಸ್ ಎಂದಿಗೂ ಮರೆಮಾಚಬಾರದು ಎಂದು ತಿರುಗೇಟು ನೀಡಿದೆ.
ಕೋವಿಡ್ ಮಹಾಮಾರಿಯಿಂದ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿದ್ದಾಗ ಅಂದಿನ ಬಿಜೆಪಿ ಸರ್ಕಾರ ತನ್ನ 2021-22ರ ಅವಧಿಯಲ್ಲಿ ಬರೋಬ್ಬರಿ ₹1 ಲಕ್ಷದ 83 ಸಾವಿರ ಕೋಟಿ ಹೂಡಿಕೆಯನ್ನು ಆಕರ್ಷಿಸಿ, ಕರ್ನಾಟಕದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಕಾಂಗ್ರೆಸ್ ಅವಧಿಯಲ್ಲಿ 57,003 ಕೋಟಿಗೆ ಕುಸಿದಿದೆ. ಅಂದರೆ ಬರೋಬ್ಬರಿ 1,25,996.59 ಕೋಟಿಯಷ್ಟು ಹೂಡಿಕೆ ಕರ್ನಾಟಕದ ಕೈತಪ್ಪಿದರೂ ಕಾಂಗ್ರೆಸ್ ತನ್ನ ಅವಧಿಯಲ್ಲಿ ಕರ್ನಾಟಕಕ್ಕೆ ದಾಖಲೆ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಂದಿದೆ ಎಂದು ಹೇಳಿಕೊಳ್ಳುತ್ತಿರುವುದು ಅತ್ಯಂತ ಹಾಸ್ಯಾಸ್ಪದ.
ಹೂಡಿಕೆ ಅಥವಾ ಪ್ರಗತಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಬೇಕು, ಪ್ರಗತಿಯ ಕುಸಿತವನ್ನೇ ಸಾಧನೆ ಎಂದು ಕಾಂಗ್ರೆಸ್ ಸರ್ಕಾರ ಹಲಬುತ್ತಿರುವುದನ್ನು ನೋಡಿದರೆ, ಕಾಂಗ್ರೆಸ್ ಅರೇಬಿಕ್ ಕ್ಯಾಲೆಂಡರ್ನಡಿ ಕಾರ್ಯನಿರ್ವಹಿಸುತ್ತಿರಬಹುದು ಎಂಬ ಅನುಮಾನ ಮೂಡುತ್ತದೆ ಎಂದು ಟಾಂಗ್ ನೀಡಿದೆ.












Click it and Unblock the Notifications