ಯಡಿಯೂರಪ್ಪ ವಿರುದ್ಧ ಕೆಲ ಬಿಜೆಪಿ ನಾಯಕರ ಷಡ್ಯಂತ್ರ?
ಬೆಂಗಳೂರು, ಸೆಪ್ಟೆಂಬರ್ 23 : ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 21ರಂದು ಸರ್ವಪಕ್ಷ ಸಭೆ ಕರೆದಿದ್ದಾಗ ಭಾರತೀಯ ಜನತಾ ಪಕ್ಷ ಬಹಿಷ್ಕಾರ ಹಾಕಿದ್ದು ಎಲ್ಲ ವಲಯಗಳಿಂದ ಟೀಕೆಗೆ ಗುರಿಯಾಗಿತ್ತು. ಈಗ, ಬಿಜೆಪಿಯೊಳಗೇ ಬಹಿಷ್ಕಾರ ಹಾಕಿದ್ದ ಸಂಗತಿ ಕುರಿತಂತೆ ಅಸಮಾಧಾನದ ಹೊಗೆಯಾಡುತ್ತಿದೆ.
ಬಹಿಷ್ಕಾರ ಹಾಕಿದ್ದರ ಹಿಂದೆ ಕೆಲವರ ಸಂಚಿರಬಹುದೆ ಎಂಬ ಅನುಮಾನಗಳು ಕೂಡ ಆರಂಭವಾಗಿವೆ. ಇದಕ್ಕೆ ಪೂರಕವೆಂಬಂತೆ, ತಮಿಳುನಾಡಿಗೆ ನೀರು ಹರಿಸಬಾರದು ಎಂದು ಸಿದ್ದರಾಮಯ್ಯ ಸಂಪುಟ ತೀರ್ಮಾನಕ್ಕೆ ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ತಕ್ಷಣವೇ ಅಭಿನಂದಿಸಿ ಹೇಳಿಕೆ ಬಿಡುಗಡೆ ಮಾಡಿದ್ದರು. [ಬಿಜೆಪಿ ನಾಯಕರೇ ನಿಮ್ಮ ಪಲಾಯನವಾದ ತಪ್ಪು]
ಬಿಜೆಪಿ ಉತ್ತಮ ಅವಕಾಶವನ್ನು ಕೈಬಿಟ್ಟಿತಾ ಎಂಬ ಬಗ್ಗೆ ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಗಳು ನಡೆದಿದ್ದವು. ಅವಕಾಶ ಕೈಚೆಲ್ಲಿರುವುದು ಅತ್ಲಾಗಿರಲಿ, ಬಿಜೆಪಿ ನಾಯಕರು ಅಂದಿನ ಪರಿಸ್ಥಿತಿ ಮತ್ತು ಸರಕಾರದ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂಪೂರ್ಣ ಸೋತಿದ್ದರು. ಸಿದ್ದರಾಮಯ್ಯ ಈರೀತಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಊಹಿಸಿರಲೂ ಇಲ್ಲ.
ಇದೆಲ್ಲದರ ಹಿಂದೆ ದೆಹಲಿ ನಾಯಕರ ಕುಮ್ಮಕ್ಕು ಇದೆ, ತಮ್ಮ ನಾಯಕ ಯಡಿಯೂರಪ್ಪ ಅವರ ವಿರುದ್ಧ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಸಮಾಧಾನ ಉಗುಳಲು ಆರಂಭಿಸಿದರು. ಅಲ್ಲದೆ, ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದರೆ, ತಮಿಳುನಾಡಿಗೆ ನೀರು ಬಿಡದಿರುವ ಹಿಂದಿನ ನಿರ್ಧಾರದ ಲಾಭವನ್ನು ಕರ್ನಾಟಕ ಬಿಜೆಪಿ ಪಡೆಯಬಹುದಿತ್ತು. ಆದರೆ, ಹಾಗಾಗಲಿಲ್ಲ ಎಂಬ ಮಾತುಗಳೂ ಕೇಳಿಬಂದವು. ['ಮೋದಿ ಮೋಸ' ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಫುಲ್ ಗೂಸಾ]

ಬಿಎಸ್ವೈ ವಿರುದ್ಧ ಒಳ ಷಡ್ಯಂತ್ರ
ಮುಂದೆ ಚುನಾವಣೆ ನಡೆದು, ಬಿಜೆಪಿ ಗೆದ್ದರೂ ಯಡಿಯೂರಪ್ಪ ಅಧಿಕಾರಕ್ಕೆ ಮರಳಬಾರದು ಎಂಬ ಹುನ್ನಾರದಿಂದ ದೆಹಲಿಯ ಕೆಲ ನಾಯಕರು ಈ ಒಳಸಂಚನ್ನು ರಚಿಸಿದ್ದಾರೆ. ಕಾವೇರಿ ವಿವಾದ ಮುಂದಿಟ್ಟುಕೊಂಡು ಯಡಿಯೂರಪ್ಪನವರ ರಾಜಕೀಯ ಜೀವನವನ್ನು ಮುಗಿಸಿಹಾಕುವ ಸಂಚು ನಡೆಯುತ್ತಿದೆ ಎಂದು ಯಡಿಯೂರಪ್ಪನವರ ಹಿಂಬಾಲಕರು ಕೆಂಡಕಾರುತ್ತಿದ್ದಾರೆ.

ಅವಕಾಶ ಕೈಚೆಲ್ಲಿದ ಕೇಂದ್ರ
ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಕಾವೇರಿ ವಿವಾದವನ್ನು ಕೇಂದ್ರ ಸರಕಾರ ಹೆಚ್ಚು ಆಸಕ್ತಿ ತೋರಿ, ಅತ್ಯಂತ ಜಾಣ್ಮೆಯಿಂದ ನಿಭಾಯಿಸಬಹುದಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಕರ್ನಾಟಕದಲ್ಲಿ ಇನ್ನಷ್ಟು ಬಲಾಢ್ಯವಾಗುವ ಅವಕಾಶವೂ ಇತ್ತು. ಆ ಎಲ್ಲ ಅವಕಾಶ ಈಗ ಕೈಚೆಲ್ಲಿ ಮೈಕೈ ಪರಚಿಕೊಳ್ಳುವಂತಾಗಿದೆ.

ಕಾಂಗ್ರೆಸ್ ಹೀರೋ, ಬಿಜೆಪಿ ಜೀರೋ
ಕರ್ನಾಟಕ ಬಿಜೆಪಿಯಲ್ಲಿ ಆಲ್ ಈಸ್ ನಾಟ್ ವೆಲ್. ಒಬ್ಬ ನಾಯಕನನ್ನು ಕಂಡರೆ ಮತ್ತೊಬ್ಬರಿಗಾಗಲ್ಲ. ಕಾವೇರಿ ವಿಷಯದಲ್ಲಿ ಕಾಂಗ್ರೆಸ್ ಅತ್ಯಂತ ದುರ್ಬಲವಾಗಿತ್ತು. ಆದರೆ, ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಹೇಳಿ ಕಾಂಗ್ರೆಸ್ ಹೀರೋ ಆಗಿದೆ, ಸರ್ವಪಕ್ಷ ಬಹಿಷ್ಕಾರ ಮಾಡಿ ಕರ್ನಾಟಕ ಬಿಜೆಪಿ ಜೀರೋ ಆಗಿದೆ!

ಸಿದ್ದು ಅಚ್ಚರಿಯ ಬೆಳವಣಿಗೆ
ಎಲ್ಲಕ್ಕಿಂತ ಮುಖ್ಯವಾಗಿ, ಕಾಂಗ್ರೆಸ್ ಸಂಪುಟದ ನಿರ್ಧಾರವನ್ನು ಬೆಂಬಲಿಸುವುದಲ್ಲದೆ, ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಿ, ಮುಂದೆ ನಡೆಯಲಿರುವ ರಾಜಕೀಯ ನಡೆಗಳ ಬಗ್ಗೆ ಜಾತ್ಯತೀತ ಜನತಾದಳ ಸ್ಪಷ್ಟ ಸೂಚನೆ ನೀಡಿದೆ. ಸಿದ್ದರಾಮಯ್ಯ ಅವರು ದೇವೇಗೌಡರನ್ನು ಭೇಟಿಯಾಗಿ ಅವರ ಮನ ಗೆದ್ದಿದ್ದಾರೆ. ಮುಂದಿನ ಸರಕಾರ ರಚಿಸುವಲ್ಲಿ ಇದು ಮಹತ್ವದ ಬೆಳವಣಿಗೆಯಾದರೂ ಅಚ್ಚರಿಯಿಲ್ಲ.

ಮುಖಕ್ಕೆ ಅಂಟಿರುವ ಮಸಿ
ಈಗ, ಮುಖಕ್ಕೆ ಅಂಟಿರುವ ಮಸಿಯನ್ನು ಅಳಿಸಿಕೊಳ್ಳಲು ಬಿಜೆಪಿ ಸರ್ವಪ್ರಯತ್ನವನ್ನು ಮಾಡಬೇಕಿದೆ. ಮುಸುಕಿನ ಗುದ್ದಾಟವಾಡುತ್ತಿರುವ ಬಿಜೆಪಿ ನಾಯಕರು ಒಗ್ಗಟ್ಟಾಗಿ ಜನರನ್ನು ಎದುರಿಸಬೇಕಾಗಿದೆ. ಇದು ಅಷ್ಟು ಸರಳ ಸಂಗತಿಯಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳಲ್ಲಿ ಜನರ ಮನವನ್ನು ಗೆಲ್ಲಲು ಹರಸಾಹಸ ಪಡಬೇಕಿದೆ.












Click it and Unblock the Notifications