ಕಾಂಗ್ರೆಸ್ಸಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡಲು ಹಕ್ಕಿಲ್ಲ: ತನಿಖೆ ಎದುರಿಸಲು ಬಿಜೆಪಿ ಸಿದ್ಧ:ಸಿಎಂ
ಬೆಂಗಳೂರು, ಸೆಪ್ಟೆಂಬರ್ 23: ''ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಹೆಜ್ಜೆ ಹೆಜ್ಜೆಗೂ ಹಗರಣ ನಡೆದಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಗುತ್ತಿಗೆದಾರ ಸಂಘದ ಆರೋಪ ಕುರಿತು ದಾಖಲೆಗಳಿದ್ದರೆ ಕೊಡಿ ತನಿಖೆ ನಡೆಸಲಾಗುವುದು'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ವಿಧಾನಸಭೆಯ ಅಧಿವೇಶನ ಮುಕ್ತಾಯದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಕಾಂಗ್ರೆಸ್ ಭ್ರಷ್ಟಾಚಾರ ಬಗ್ಗೆ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಕಾಂಗ್ರೆಸ್ನವರು ಭ್ರಷ್ಟರಾಗಿದ್ದಕೊಂಡು ಅಭಿಯಾನ ಮಾಡಿದರೂ ಸಹ ಸತ್ಯಕ್ಕೆ ಕೊನೆಗೆ ಜಯ ಸಿಗಲಿದೆ. ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಕಾಂಗ್ರೆಸ್ನ ಈ ಪ್ರವೃತ್ತಿ ಬಹಳ ದಿನ ನಡೆಯಲ್ಲ'' ಎಂದರು.
Breaking: ಸದನದಲ್ಲಿ ಜೆಡಿಎಸ್ ಧರಣಿ: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
''ಗುತ್ತಿಗೆದಾರರ ಸಂಘದ ಆರೋಪ ಕುರಿತು ಉತ್ತರಿಸಲಾಗಿದೆ. ಒಂದು ವಿಚಾರವನ್ನು ಪದೇ ಪದೇ ಹೇಳಿದರೆ ಅದು ಸತ್ಯವಾಗುವ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ. ಒಂದು ವರ್ಷದ ಹಿಂದೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ. ಒಂದು ದೂರು ದಾಖಲಿಸಿ ಸೂಕ್ತ ದಾಖಲೆ ಕೊಡಬೇಕು. ಆದರೆ ದಾಖಲೆ ಕೊಡಲಾಗಿಲ್ಲ. ಆ ಬಗ್ಗೆ ಸಣ್ಣ ದೂರು ನೀಡಿದರೆ ತನಿಖೆಗೆ ಆದೇಶಿಸಲಾಗುವುದು. ಲೋಕಾಯುಕ್ತಕ್ಕೆ ನೇರವಾಗಿ ಪ್ರಕರಣ ವಹಿಸುತ್ತೇನೆ'' ಎಂದು ಬೊಮ್ಮಾಯಿ ಹೇಳಿದರು.
ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ
ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಇಬ್ಬರು ಪದಾಧಿಕಾರಿಗಳು ಮಾತನಾಡಿದ್ದು, ಮಾಧ್ಯಮಗಳಲ್ಲಿ ವರದಿಯೂ ಆಗಿತ್ತು. ಅದಕ್ಕೆ ಉತ್ತರಿಸಿಲ್ಲ. ಮೂರು ತಲೆಮಾರಿಗಾಗುವಷ್ಟು ನಾವು ಮಾಡಿಕೊಂಡಿದ್ದೇವೆ, ಕಾಂಗ್ರೆಸ್ ಋಣದಲ್ಲಿದ್ದೇವೆ ಎಂದು ರಮೇಶ್ ಕುಮಾರ್ ಭಾಷಣ ಮಾಡಿದ್ದರು. ಕಾಂಗ್ರೆಸ್ನಲ್ಲಿಯೇ ಬೇಕಾದಷ್ಟಿದ್ದು, ಅದರ ಬಗ್ಗೆ ಅವರು ಚರ್ಚೆಗೆ ಸಿದ್ಧರಿಲ್ಲ. ಆದರೆ ಭ್ರಷ್ಟಾಚಾರದ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದರು.
ಚರ್ಚೆಯ ಮೂಲಕ ಅದೇನು ಸರಕಿದೆ (ದಾಖಲೆ) ಹೊರಗೆ ಬರಬೇಕು. ಸುಮ್ಮನೆ ಹಿಟ್ ಅಂಡ್ ರನ್ ಮಾಡುವುದಲ್ಲ. 40 ಪರ್ಸೆಂಟ್ ಭ್ರಷ್ಟಾಚಾರ ಎನ್ನುವ ಸಿದ್ದರಾಮಯ್ಯ ನವರು ಯಾರು ಹಣ ಕೊಟ್ಟಿದ್ದಾರೆ ಎಂದು ಹೇಳಬೇಕು. ನಾವು ಕೇಳುವುದಕ್ಕೆ ಸಿದ್ಧರಿದ್ದೇವೆ. ಚರ್ಚೆಯಾಗಲಿ ಎಂದೇ ನಾವೂ ಸದನದಲ್ಲಿ ಕೂತಿದ್ದೆವು. ಹೀಗಿದ್ದರೂ ಆ ವಿಷಯವನ್ನು ಮೊದಲೇ ತೆಗೆದುಕೊಳ್ಳದೇ ಏಕೆ ಕೊನೆಯಲ್ಲಿ ಪ್ರಸ್ತಾಪಿಸಿದರು?. ಕಳೆದ ವಾರವೇ ಸದನದಲ್ಲಿ ಆ ವಿಚಾರ ತೆಗೆದುಕೊಳ್ಳಬಹುದಾಗಿತ್ತು. ವಿರೋಧ ಪಕ್ಷಕ್ಕೆ ಯಾವತ್ತಾದರೂ ವಿಷಯ ಪ್ರಸ್ತಾಪಿಸಲು ಅಧಿಕಾರವಿದೆ. ಆದರೆ ವಿರೋಧ ಪಕ್ಷದಲ್ಲಿಯೇ ಹೊಂದಾಣಿಕೆ ಇಲ್ಲ ಎಂದು ಟೀಕಿಸಿದರು.
ಬಿಎಂಎಸ್ ಟ್ರಸ್ಟ್ ಅಕ್ರಮ: ಅಶ್ವಥ್ ನಾರಾಯಣ ರಾಜೀನಾಮೆಗೆ ಉಭಯ ಸದನಗಳಲ್ಲಿ ಜೆಡಿಎಸ್ ಪಟ್ಟು
ಕಾಂಗ್ರೆಸ್ ಪ್ರಾಯೋಜಿತ ಗುತ್ತಿಗೆದಾರರ ಸಂಘ
ಗುತ್ತಿಗೆದಾರರ ಸಂಘವು ಕಾಂಗ್ರೆಸ್ ಪ್ರಾಯೋಜಿತ ಸಂಘ. ಹೀಗಾಗಿ ಕಾಂಗ್ರೆಸ್ಸಿಗೆ ಸಂಘದ ಆರೋಪದಲ್ಲಿ ಹುರುಳಿಲ್ಲ ಎಂದು ಗೊತ್ತಿದೆ. ಭ್ರಷ್ಟಾಚಾರ ಆರೋಪ ವಿಚಾರದಲ್ಲಿ ಬಿಜೆಪಿ ಮುಕ್ತವಾಗಿದ್ದೇವೆ. ದೂರು ಬಂದರೆ ಖಂಡಿತ ತನಿಖೆಗೆ ನೀಡುತ್ತೇವೆ. ದಯವಿಟ್ಟು ದೂರು ಕೊಡಿ. ಗುತ್ತಿಗೆದಾರರ ಸಂಘದ ಬಗ್ಗೆಯೇ ಬಹಳಷ್ಟು ಸಂಶಯಗಳಿವೆ. ಯಾವುದೇ ಆಧಾರವಿಲ್ಲದೇ ಕಳೆದ ಒಂದು ವರ್ಷದಿಂದ ಈ ರೀತಿ ಆರೋಪಿಸುತ್ತಿದ್ದಾರೆ.
ಜಸ್ಟಿಸ್ ಕೆಂಪಣ್ಣ ಅವರು ನೀಡಿದ ವರದಿ ಬಗ್ಗೆಯೂ ಚರ್ಚೆಯಾಗಬೇಕು. ಕೆಂಪಣ್ಣ ಅವರು ತನಿಖೆ ಮಾಡಿ ವರದಿಯನ್ನು ನ್ಯಾಯಾಂಗ ಆಯೋಗಕ್ಕೆ ನೀಡಿದ್ದರು. ಅವರ ಬಗ್ಗೆ ನಮಗೆ ಕಳಕಳಿ, ಗೌರವ ಇದೆ. ಆ ವರದಿ ಬಗ್ಗೆ ನಾವು ಚರ್ಚೆಗೆ ಸಿದ್ಧ. ಈಗಾಗಲೇ ಸಚಿವ ಮುನಿರತ್ನ ಅವರು ಪ್ರಕರಣ ದಾಖಲಿಸಿ ದಾಖಲೆ ಒದಗಿಸಲು ಹತ್ತು ದಿನ ಸಮಯ ನೀಡಿದರು. ನ್ಯಾಯಾಲಯದಿಂದ ನೋಟೀಸು ಜಾರಿಯಾದರೂ ಯಾವ ಆಧಾರವನ್ನೂ ನೀಡಿಲ್ಲ. ನಾವು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುಧಾರಣೆಗಳೇನು ಮಾಡಬಹುದು ಎಂಬ ಬಗ್ಗೆ ಪತ್ರ ನೀಡಿದ್ದರು. ಆ ಸುಧಾರಣೆಗಳಿಗೆ ಆದೇಶ ಮಾಡಲಾಗಿದೆ. ಆದರೆ ಅವರು ನಿರ್ದಿಷ್ಟ ಪ್ರಕರಣದ ಬಗ್ಗೆ ದಾಖಲೆ ನೀಡಿದರೆ ತನಿಖೆ ಮಾಡುತ್ತೇವೆ. ಲೋಕಾಯುಕ್ತ ಸಂಸ್ಥೆ ನ್ಯಾಯಾಂಗದವರೇ ಮುಖ್ಯಸ್ಥರು. ಅಲ್ಲಿಗೇ ಕೊಡಲಿ. ಅಲ್ಲಿ ತನಿಖೆ ನಾಳೆಯೇ ಪ್ರಾರಂಭವಾಗುತ್ತದೆ.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ವಿಸ್ತರಣೆ ಮಾಡೋಣ್ಣ ಎಂದಿದ್ದಾರೆ. ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಕೈಗೊಂಡ ಕ್ರಮ ಬಗ್ಗೆ ಕಾಂಗ್ರೆಸ್ ಚರ್ಚೆ
ಎರಡು ವಾರಗಳ ಕಾಲ ನಡೆದ ವಿಧಾನಸಭೆ ಅಧಿವೇಶನದಲ್ಲಿ ಹತ್ತಾರು ವಿಚಾರ ಚರ್ಚೆಯಾಗಿವೆ. ನೂರಾರು ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ. ಪ್ರಮುಖವಾಗಿ ಪ್ರವಾಹದ ಪರಿಸ್ಥಿತಿ ಬಗ್ಗೆ ಎಲ್ಲ ಶಾಸಕರು ಕೂಲಂಕುಶವಾಗಿ ತಿಳಿಸಿ ನಾಲ್ಕು ದಿನಗಳ ಕಾಲ ಎರಡೂ ಸದನದಲ್ಲಿ ಚರ್ಚೆಯಾಗಿದೆ. ಕಂದಾಯ ಸಚಿವರು ಉತ್ತರ ನೀಡಿದ್ದಾರೆ. ನಾನು ಬೆಂಗಳೂರಿನ ಬಗ್ಗೆ ಉತ್ತರ ನೀಡಿದ್ದೇನೆ. ಪರಿಹಾರ ವಿಚಾರದಲ್ಲಿ ಕೂಡಲೇ ಕಾರ್ಯಗತಗೊಂಡಿದ್ದೇವೆ. ಅಧಿಕಾರಿಗಳ ಸಭೆ ನಡೆಸಿ ಅನುಷ್ಠಾನಕ್ಕೆ ಎಲ್ಲ ಕ್ರಮ ಕೈಗೊಂಡಿದ್ದೇವೆ.
ರಾಜಕೀಯವಾಗಿ ಹಲವಾರು ವಿಚಾರಗಳನ್ನು ಎತ್ತಲಾಗಿದೆ. ಆದರೆ ವಿರೋಧಪಕ್ಷಗಳು ಎತ್ತಿರುವ ಪಿಎಸ್ಐ ನೇಮಕಾತಿ ಪ್ರಕರಣ ಇನ್ನಿತರ ವಿಚಾರಗಳು ಅವರಿಗೇ ತಿರುಗೇಟಾಗಿದೆ. ಈಗಾಗಲೇ ನಾವು ಏನು ಕ್ರಮಗಳನ್ನು ತೆಗೆದುಕೊಂಡಿದ್ದೇವೋ ಅದರ ಬಗ್ಗೆಯೇ ಚರ್ಚೆ ಮಾಡಿದರು. ಅದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಹಿಂದೆ ಅವರ ಅವಧಿಯಲ್ಲಿ ಯಾವುದನ್ನು ಮಾಡಿರಲಿಲ್ಲವೋ ಆ ಬಗ್ಗೆ ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ. ಪೊಲೀಸ್ ಪೇದೆ ನೇಮಕಾತಿ, ಶಿಕ್ಷಕರ ನೇಮಕಾತಿ ಬಗ್ಗೆ ಈಗಾಗಲೇ ಸುಮಾರು ಜನರನ್ನು ಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಪ್ರತಿಪಕ್ಷಕ್ಕೆ ಮುಖ್ಯಮಂತ್ರಿ ತಿರುಗೇಟು ನೀಡಿದರು.
2006ರಿಂದ ಈವರೆಗೆ ನಡೆದ ಎಲ್ಲಾ ಅಕ್ರಮಗಳ ತನಿಖೆಯಾಗಲಿ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಕಾಲದಲ್ಲಿ ಅವರೇ ಆದೇಶ ಮಾಡಿರುವ ಆಯೋಗದ ಮೇಲೆ ಅವರೇ ಕ್ರಮ ತೆಗೆದುಕೊಂಡಿಲ್ಲ. ಇವೆಲ್ಲಾ ಮೇಲ್ನೋಟದ ಮಾತುಗಳು ಎಂದರು.