ಅಮಿತ್ ಶಾ ಕರ್ನಾಟಕ ಪ್ರವಾಸ, ಬೆಂಗಳೂರು ಮತ್ತು ಹೊಳಲ್ಕೆರೆ
ಬೆಂಗಳೂರು, ಜನವರಿ 8: ಕರ್ನಾಟಕ ವಿಧಾಸಬೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜಿಪಿ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಇದರಕ್ಕೆ ಪೂರಕವೆಂಬಂತೆ ಡಿಸೆಂಬರ್ 31ರಂದು ಬೆಂಗಳೂರಿಗೆ ಬಂದು ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮತ್ತೆ ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ.
ನಾಳೆ ಅಂದರೆ ಮಂಗಳವಾರ (ಜನವರಿ 9) ಸಂಜೆ 4.45ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಯಲಹಂಕದ ರಾಯಲ್ ಅರ್ಕೆಡ್ ಹೋಟೆಲ್ ಗೆ ತೆರಳಲಿದ್ದಾರೆ. ಬಳಿಕ ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ರಾಜ್ಯ ಬಿಜೆಪಿ ಜಿಲ್ಲಾಧ್ಯಕ್ಷರ ಸಭೆ ನಡೆಸಲಿದ್ದಾರೆ.
ಎಚ್.ಆಂಜನೇಯ ತವರು ಕ್ಷೇತ್ರದಲ್ಲಿ ಅಮಿತ್ ಶಾ ಭಾಷಣ!
ಸಭೆಯಲ್ಲಿ ರಾಜ್ಯ ನಾಯಕರ ಬಗ್ಗೆ ಅಭಿಪ್ರಾಯ ಸೇರಿದಂತೆ ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ನಂತರ ಜನವರಿ 10ರಂದು ಅಮಿತ್ ಶಾ ಅವರು ಯಲಹಂಕದ ರಾಯಲ್ ಅರ್ಕೆಡ್ ಹೋಟೆಲ್ ನಿಂದ ರಸ್ತೆ ಮಾರ್ಗವಾಗಿ ಚಿತ್ರದುರ್ಗಾ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.
ಬಳಿಕ ಅಂದು ಸಂಜೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಅಮಿತ್ ಶಾ ಹೋದ ಬಳಿಕ ಇದೇ ಜನವರಿ 28ರಂದು ಪ್ರಧಾನಿ ನರೇಂಧ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.
ದೇಶದಲ್ಲಿಯೇ ಕಾಂಗ್ರೆಸ್ ಧೂಳಿಪಟವಾಗಿದ್ದು, ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ಶತಾಯಗತಾಯವಾಗಿ ಈ ಬಾರಿಯ ಕಾಂಗ್ರೆಸ್ ನ್ನು ಮಣ್ಣುಮುಕ್ಕಿಸಲು ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ತಮ್ಮ ಚುನಾವಣಾ ಸ್ಟ್ರಟರ್ಜಿಗಳನ್ನು ಬೋಧನೆ ಮಾಡುತ್ತಿದ್ದಾರೆ.