ದೇವೇಗೌಡರ 'ವಿಷ'ದ ಮಾತು: ಪರಮೇಶ್ವರ್ ವಿಡಿಯೋ ನೆನಪಿಸಿ ಕೆಣಕಿದ ಬಿಜೆಪಿ
ಬೆಂಗಳೂರು, ಫೆಬ್ರವರಿ 14: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಕೀಳಾಗಿ ಮಾತನಾಡಿದ್ದಾರೆ ಎಂದು ಜೆಡಿಎಸ್ ತೀವ್ರ ಆಕ್ಷೇಪ ಪ್ರತಿಭಟನೆ ನಡೆಸಿದೆ. ಅದಕ್ಕೆ ಪ್ರತಿಯಾಗಿ ಪ್ರೀತಂ ಗೌಡ ಮನೆ ಮೇಲೆ ನಡೆದ ದಾಳಿಯನ್ನು ಖಂಡಿಸಿ ಬಿಜೆಪಿ ಮುಖಂಡರು ಜೆಡಿಎಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ನಡುವೆ ಜೆಡಿಎಸ್ ಮತ್ತು ಕಾಂಗ್ರೆಸ್ ಆಕ್ರೋಶಕ್ಕೆ ಒಳಗಾಗಿರುವ ಬಿಜೆಪಿಗೆ ಹಳೆಯ ವಿಡಿಯೋವೊಂದು ಅಸ್ತ್ರವಾಗಿ ದೊರೆತಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಗಿನ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ದೇವೇಗೌಡರು ವಿಷ ತೆಗೆದುಕೊಳ್ಳುತ್ತಾರೆ ಎಂದು ಕಾದಿದ್ದೇ ಬಂತು, ಆದರೆ ತೆಗೆದುಕೊಳ್ಳಲಿಲ್ಲ ಎಂದು ಲೇವಡಿ ಮಾಡಿದ್ದರು. ಆ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪರಮೇಶ್ವರ್ ಮನೆ ಮೇಲೆ ಕಲ್ಲು ತೂರುತ್ತಾರೆಯೇ ಎಂದು ಪ್ರಶ್ನಿಸಿದೆ.

2014ರ ಏಪ್ರಿಲ್ 2ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಕಾರ್ಯಕ್ರಮವೊಂದರಲ್ಲಿ ಪರಮೇಶ್ವರ್ ಮಾತನಾಡುತ್ತಿದ್ದರು.
ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿದ್ದರಂತೆ ಡಿ.ಸಿ.ಎಂ ಪರಮೇಶ್ವರ್. ಅವರ ಮನೆಯ ಮೇಲೂ ಕಲ್ಲು ತೂರುತ್ತಾರಾ ಜೆ.ಡಿ.ಎಸ್ ನ ಸ್ವಾಭಿಮಾನಿ ಕಾರ್ಯಕರ್ತರು? pic.twitter.com/qa7K9s8VIC
— BJP Karnataka (@BJP4Karnataka) 14 February 2019
'2013, ಒಂಬತ್ತು ತಿಂಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ದೊಡ್ಡಗೌಡರು ಒಂದು ಮಾತು ಹೇಳಿದ್ದರು. 'ನಾವೇ ಅಧಿಕಾರಕ್ಕೆ ಬರುತ್ತೇವೆ' ಎಂದು. ಆ ಹೇಳಿಕೆಯ ಕಟಿಂಗ್ ಕೂಡ ಇಟ್ಟಿದ್ದೀನಿ. ಕರ್ನಾಟಕದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ಬಾರದೆ ಇದ್ದರೆ ವಿಷ ತೆಗೆದುಕೊಂಡು ಸಾಯುತ್ತೇನೆ ಎಂಬ ಹೇಳಿಕೆ ನೀಡಿದ್ದರು. ನಾನು ಕಾಯುತ್ತಲೇ ಇದ್ದೇನೆ ಇಂದು ತಗೋತಾರೆ, ನಾಳೆ ತಗೋತಾರೆ ಎಂದು. ತಗೋತಾನೆ ಇಲ್ಲ. ಏನು ಮಾಡಬೇಕು ಹೇಳಿ?' ಎಂದು ಪರಮೇಶ್ವರ್ ವ್ಯಂಗ್ಯವಾಡಿದ್ದರು. ಆಗ ಇಡೀ ಸಭೆ ಜೋರಾಗಿ ನಕ್ಕಿತ್ತು.
ಈ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದೆ. ದೇವೇಗೌಡರು ವಿಷ ಸೇವಿಸುವುದನ್ನು ಕಾಯುತ್ತಿದ್ದರಂತೆ ಡಿ.ಸಿ.ಎಂ ಪರಮೇಶ್ವರ್. ಅವರ ಮನೆಯ ಮೇಲೂ ಕಲ್ಲು ತೂರುತ್ತಾರಾ ಜೆ.ಡಿ.ಎಸ್ ನ ಸ್ವಾಭಿಮಾನಿ ಕಾರ್ಯಕರ್ತರು? ಎಂದು ಬಿಜೆಪಿ ಪ್ರಶ್ನಿಸಿದೆ.












Click it and Unblock the Notifications