ಕಾಂಗ್ರೆಸ್ ಸಂಭ್ರಮಾಚರಣೆಗೆ ಕರೆ ಕೊಟ್ಟ ಡಿಕೆಶಿಗೆ ಯಾವ ಪುರುಷಾರ್ಥಕ್ಕೆ ಎಂದಿದ್ಯಾರು?
ರಾಜ್ಯ ಕಾಂಗ್ರೆಸ್ ಸರ್ಕಾರವು ಎರಡು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ವತಿಯಿಂದ ಅದ್ಧೂರಿ ಸಂಭ್ರಮಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿಯು ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಸಂಭ್ರಮ? ಎಂದು ಡಿ.ಕೆ.ಶಿವಕುಮಾರ್ ಅವರನ್ನು ಟೀಕಿಸಿದೆ. ಜೊತೆಗೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ಕಾಲೆಳೆದಿದೆ.
ಅರೆಬರೆಯಾಗಿ ಅನುಷ್ಠಾನಗೊಂಡಿರುವ ಗ್ಯಾರಂಟಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಹೊಸ ಯೋಜನೆ, ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿಲ್ಲ. ಆದರೂ ಸರ್ಕಾರ ಎರಡು ವರ್ಷ ಪೂರೈಸಿರುವುದನ್ನು ಹಬ್ಬದಂತೆ ಸಂಭ್ರಮಿಸಿಲು ಡಿಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಬೆಲೆ ಏರಿಸಿ ಬಡವರಿಗೆ ಪಂಗನಾಮ ಹಾಕಿದ್ದಕ್ಕಾಗಿಯೇ? ಜನಪರ ಯೋಜನೆಗಳನ್ನು ಘೋಷಿಸದ ಕಾರಣಕ್ಕಾಗಿಯೇ? ರಾಜ್ಯ ಕಾನೂನು ಸುವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಕ್ಕಾಗಿಯೇ? ಅಕ್ರಮಗಳ ಮೇಲೆ ಅಕ್ರಮ ನಡೆಸಿರುವುದಕ್ಕಾಗಿಯೇ? ಅಥವಾ ದಲಿತರ ಹಣವನ್ನು ತಿಂದು ತೇಗಿದ್ದಕ್ಕಾಗಿಯೇ? ನಿಮ್ಮ ಸಂಭ್ರಮ ಎಂದು ಲೇವಡಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ 60% ಕಮಿಷನ್ ಆರೋಪವನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಬಹಿರಂಗಗೊಳಿಸಿದ್ದಾರೆ. ರಾಜ್ಯ ಸರ್ಕಾರವು ಕಮಿಷನ್ ಬಾಕರಿಂದ ತುಂಬಿ ತುಳುಕುತ್ತಿದೆ. ಎಲ್ಲ ಯೋಜನೆ, ಕಾಮಗಾರಿಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜಾರೋಷವಾಗಿ ಶೇ 60ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಜಲಜೀವನ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಕಳಪೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಾಖಲೆ ಸಹಿತ ಬಹಿರಂಗಪಡಿಸಿದ್ದಾರೆ. ಕಾಮಗಾರಿಗಳಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು ಶೇ 60ರಷ್ಟು ಕಮಿಷನ್ ನುಂಗಿದರೆ ಕಾಮಗಾರಿಗಳು ಕಳಪೆಯಾಗದೆ ಇರುತ್ತದೆಯೇ? ಎಂದು ತರಾಟೆಗೆ ತೆಗೆದುಕೊಂಡಿದೆ.

ಹಬ್ಬದಂತೆ ಆಚರಿಸಿ ಎಂದ ಡಿಕೆಶಿ
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇದೇ ಮೇ 20ಕ್ಕೆ 2 ವರ್ಷಗಳನ್ನು ಪೂರೈಸಲಿದ್ದು, ರಾಜ್ಯದೆಲ್ಲೆಡೆ ಹಬ್ಬದಂತೆ ಇದನ್ನು ಸಂಭ್ರಮಾಚರಣೆ ಮಾಡಬೇಕು ಎಂದು ಡಿಕೆಶಿ ಕರೆ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲಿ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಸರ್ಕಾರದ ವಿರುದ್ಧ ಯಾರು ಎಷ್ಟಾದರೂ ಧಿಕ್ಕಾರ ಕೂಗಲಿ, ಕುಣಿಯಲಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಹಣಕಾಸಿನ ವಿಚಾರದ ಚರ್ಚೆ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ಮಹಿಳೆಯರಿಗಾಗಿ ನಮ್ಮ ಕಾಂಗ್ರೆಸ್ ಪಕ್ಷ ಸಾಕಷ್ಟು ಕಾರ್ಯಕ್ರಮ ನೀಡಿದೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ರಾಜ್ಯದಲ್ಲಿ ನನ್ನ ನಿರೀಕ್ಷೆಯಷ್ಟು ಮಹಿಳೆಯರ ಸಂಘಟನೆಯಾಗಿಲ್ಲ. ಆದರೆ ಈಗಲೂ ಸಹ ನಿಮ್ಮ ಮುಂದೆ ದೊಡ್ಡ ಅವಕಾಶ ಇದೆ. ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ. ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ನೀವು ಈಗಿನಿಂದಲೇ ಆರಂಭಿಸಿ ಎಂದು ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.












Click it and Unblock the Notifications