ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ಗೆ?
ಬೆಂಗಳೂರು, ಜುಲೈ 11: ಮಾಜಿ ಸಚಿವ, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪಕ್ಷ ತೊರೆದು ಕಾಂಗ್ರೆಸ್ ಸೇರಲಿದ್ದಾರಾ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇದಕ್ಕೆ ಕಾರಣವೆಂದರೆ ನಿನ್ನೆ ಸಚಿವ ಡಿಕೆ.ಶಿವಕುಮಾರ್ ಸಮ್ಮಿಶ್ರ ಸರ್ಕಾರದ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಿಗಾಗಿ ಆಯೋಜಿಸಿದ್ದ ಔತಣಕೂಡದಲ್ಲಿ ಗೂಳಿಹಟ್ಟಿ ಶೇಖರ್ ಅವರು ಸಹ ಉಪಸ್ಥಿತರಿದ್ದರು.
ನಗರದ ಖಾಸಗಿ ಹೊಟೆಲ್ನಲ್ಲಿ ಆಯೋಜಿತವಾಗಿದ್ದ ಈ ಔತಣಕೂಟಕ್ಕೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರೊಂದಿಗೆ ರಾತ್ರಿ 8 ಗಂಟೆಗೆ ಆಗಮಿಸಿದ ಗೂಳಿಹಟ್ಟಿ ಶೇಖರ್ 11 ಗಂಟೆ ವರೆಗೆ ಔತಣಕೂಡದಲ್ಲಿ ಇದ್ದರು ಎನ್ನಲಾಗಿದೆ.

ಔತಣಕೂಟದಲ್ಲಿ ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು. ಮುಖಂಡರ ಜೊತೆಗೆ ಗೂಳಿಹಟ್ಟಿ ಶೇಖರ್ ಅವರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಪಕ್ಷೇತರವಾಗಿ ಗೆದ್ದಿದ್ದ ಅವರು ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನಿಡಿದ್ದರು ಆ ನಂತರ ಯಡಿಯೂರಪ್ಪ ಅವರ ವಿರುದ್ಧ ಬಂಡಾಯವೆದ್ದು ಬೆಂಬಲ ವಾಪಸ್ ಪಡೆದಿದ್ದರು, ಆನಂತರ ಜೆಡಿಎಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. ಇದೇ ವರ್ಷದ ಫೆಬ್ರವರಿಯಲ್ಲಿ ಬಿಜೆಪಿ ಸೇರಿ ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಈಗ ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆಗಳು ಗೋಚರಿಸುತ್ತಿವೆ.
ಗೂಳಿಹಟ್ಟಿ ಶೇಖರ್ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಹೊಸದುರ್ಗದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ಗೆಲುವು ಕ್ಷೇತ್ರದಲ್ಲಿ ಮೊದಲ ಬಿಜೆಪಿಯ ಗೆಲುವಾಗಿತ್ತು. ಸದನದಲ್ಲಿ ಒಮ್ಮೆ ತಮ್ಮ ಶರ್ಟ್ ಹರಿದುಕೊಂಡು ಗೂಳಿಹಟ್ಟಿ ಸುದ್ದಿಯಾಗಿದ್ದರು.












Click it and Unblock the Notifications